ಕರಾವಳಿ

ಅಪಘಾತದಿಂದ ಐದು ದಿನಗಳ ಕಾಲ ಸಾವು-ಬದುಕಿನೊಂದಿಗೆ ಹೋರಾಡಿದ ಯುವಕ ಮೃತ್ಯು

Pinterest LinkedIn Tumblr

ಕುಂದಾಪುರ: ಕಳೆದ ಐದು ದಿನಗಳ ಹಿಂದೆ ಸ್ಕೂಟರ್ ಹಾಗೂ ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ಹೆಮ್ಮಾಡಿಯಲ್ಲಿ ವರದಿಯಾಗಿದೆ.

ಹೆಮ್ಮಾಡಿ ನಿವಾಸಿ ಸದಾನಂದ ಪೈ ಹಾಗೂ ವಿಜಯಲಕ್ಷ್ಮೀ ಪೈಯವರ ಏಕೈಕ ಪುತ್ರ ವಾಸುದೇವ ಪೈ(25) ಸಾವನ್ನಪ್ಪಿದ ದುರ್ದೈವಿ.

ಮಣಿಪಾಲದ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾಸುದೇವ ಪೈ ಶುಕ್ರವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳುತ್ತಿರುವಾಗ ಹೆಮ್ಮಾಡಿ ಸಮೀಪದ ಜಾಲಾಡಿಯಲ್ಲಿ ಲಾರಿ ಢಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ವಾಸುದೇವ್ ಅವರ ಕಾಲಿಗೆ ತೀವ್ರವಾದ ಗಾಯಗಳಾಗಿದ್ದರಿಂದ ಅವರನ್ನು ಕುಂದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಐದು ದಿನಗಳ ಕಾಲ ಸಾವು-ಬದುಕಿನ ಹೋರಾಟ
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ ಬಳಿಕ ಕೋಮಾಕ್ಕೆ ಜಾರಿದ್ದರು. ಐದು ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿದ ವಾಸುದೇವ್ ಕೊನೆಗೂ ಚಿಕಿತ್ಸೆ ಫಲಕರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ತಂದೆ ಕೊಡಿಸಿದ ಸ್ಕೂಟರ್!
ಮೊದಲು ಕೆಲಸಕ್ಕಾಗಿ ಮಣಿಪಾಲಕ್ಕೆ ದಿನಾಲು ಬಸ್ಸಿನಲ್ಲಿ ತೆರಳುತ್ತಿದ್ದ ವಾಸುದೇವ್‌ಗೆ ತಂದೆ ಸದಾನಂದ ಪೈ ಸ್ಕೂಟರ್ ಉಡುಗೆಯಾಗಿ ನೀಡಿದ್ದರು. ವಾಸುದೇವ್ ಕೆಲಸಕ್ಕೆ ಹೋದ ವೇಳೆಯಲ್ಲಿ ಸರ್‌ಫ್ರೈಸ್ ಆಗಿ ಹೊಸ ಸ್ಕೂಟರ್ ಅನ್ನು ಮನೆಗೆ ತಂದಿದ್ದರು. ವಾಸುದೇವ್ ದಿನನಿತ್ಯ ಹೆಮ್ಮಾಡಿಯಿಂದ-ಕುಂದಾಪುರದವೆರೆಗೆ ಸ್ಕೂಟರ್‌ನಲ್ಲಿ ಸಾಗಿ ಬಳಿಕ ಕುಂದಾಪುರದಿಂದ ಮಣಿಪಾಲಕ್ಕೆ ಬಸ್‌ನಲ್ಲಿ ಸಂಚರಿಸುತ್ತಿದ್ದರು.

ಊರಿಡೀ ಶೋಕ, ಕಂಬನಿ:
ಸದಾಹಸನ್ಮುಖಿಯಾಗಿರುತ್ತಿದ್ದ ವಾಸುದೇವ್ ಊರ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅಲ್ಲದೇ ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿದ್ದ ಅವರು ಯಕ್ಷ ಛಾಯಗ್ರಾಹಕನಾಗಿ ಯಕ್ಷಗಾನದ ಪಾತ್ರಧಾರಿಗಳು, ಚೆಂಡೆ, ಭಾಗವತರು, ಮದ್ದಳೆಗಾರರ ಫೋಟೋ ತೆಗೆದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯನಾಗಿದ್ದ ವಾಸುದೇವ್ ಪರಿಸರ ಪ್ರೇಮಿ. ವಾಸುದೇವ್ ಅಕಾಲಿಕ ಮರಣಕ್ಕೆ ಊರಿಡೀ ಶೋಕ ವ್ಯಕ್ತವಾಗಿದ್ದು, ಸಂಬಂಧಿಕರು, ಸ್ನೇಹಿತರು, ಯಕ್ಷಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Comments are closed.