ಮಂಗಳೂರು, ಆಗಸ್ಟ್.10: ‘ಕ್ವಿಟ್ ಇಂಡಿಯಾ’ ಚಳವಳಿಯ ನೆನಪಿಗಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಂಟಕ್ ನಾಯಕ ಪುನೀತ್ ಶೆಟ್ಟಿ ಮತ್ತು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಬೆಂಬಲಿಗರು ಹೊಡೆದಾಡಿಕೊಂಡ ಘಟನೆ ಗುರುವಾರ ನಡೆದಿದೆ.
‘ಇಂಟಕ್’ ಯುವ ನಾಯಕ ಪುನೀತ್ ಶೆಟ್ಟಿ ಮೇಲೆ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಬೆಂಬಲಿಗರು ಎನ್ನಲಾದ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆಯಿಂದ ಗಾಯಗೊಂಡ ಪುನೀತ್ ಶೆಟ್ಟಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
ಕ್ವಿಟ್ ಇಂಡಿಯಾ’ ಚಳವಳಿಯ ನೆನಪಿಗಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂತ್ಯದಲ್ಲಿ ಹೈಡ್ರಾಮ ನಡೆಯಿತು.ಕಾಂಗ್ರೆಸ್ ನ ಹಿರಿಯ ನಾಯಕರ ಮುಂದೆಯೇ ಹೊಡೆದಾಟ ನಡೆದಿದೆ.
“ಕ್ವಿಟ್ ಇಂಡಿಯಾ ಕಾರ್ಯಕ್ರಮದ ನಂತರ ಮಿಥುನ್ ರೈ ಮತ್ತು ಆತನ ಬೆಂಬಲಿಗರು ನನ್ನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು 15 ಮಂದಿಯ ತಂಡ ಹಲ್ಲೆ ನಡೆಸಿದೆ. ಮಿಥುನ್ ರೈ ನನಗೆ ಜೀವ ಬೆದರಿಕೆಯೊಡ್ಡಿದ್ದಾನೆ. ಇದು ಹಲ್ಲೆ ಮಾತ್ರ, ಮುಂದಿನ ದಿನಗಳಲ್ಲಿ ನಿನ್ನನ್ನು ಕೊಲ್ಲುತ್ತೇನೆ ಎಂದು ಆತ ಬೆದರಿಕೆ ಹಾಕಿದ್ದಾನೆ” ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.
“ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಬೆಂಬಲಿಗರಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ನಾನು ಇಂಟಕ್ ಅಧ್ಯಕ್ಷನಾಗಿದ್ದು, ಸಮಾಜಸೇವೆ ಮಾಡುತ್ತಿದ್ದೇನೆ. ಮಿಥುನ್ ರೈ 10 ದಿನಗಳ ಹಿಂದೆ ನನ್ನ ಮೇಲೆ ನಕಲಿ ದೂರು ನೀಡಿದ್ದಾನೆ. ಅವಿನಾಶ್, ಗಿರೀಶ್ ಆಳ್ವ ಮೊದಲಾದವರು ಗೂಂಡಾಗಳಂತೆ ವರ್ತಿಸಿ ನನಗೆ ಹಲ್ಲೆ ನಡೆಸಿದ್ದಾರೆ. ನನ್ನ ಚೈನ್ ತೆಗೆದಿದ್ದಾರೆ. ಮಿಥುನ್ ರೈ ಮೇಲೆ 3 ಕೇಸ್ ಗಳಿವೆ. ಆದರೆ ಆತನಿಗೆ ಗನ್ ಕೊಟ್ಟಿದ್ದಾರೆ. ಗನ್ ಮ್ಯಾನ್ ಕೊಟ್ಟಿದ್ದಾರೆ. ಬರ್ಕೆ ವ್ಯಾಪ್ತಿಯಲ್ಲಿ ಆತನ ಮೇಲೆ ಕಂಪ್ಲೇಂಟ್ ಇದೆ” ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.
“ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಆತನ ತಂಡ ನನ್ನ ಮೇಲೆ ಹಲ್ಲೆಗೆ ಯತ್ನಿಸಿತ್ತು. ಆದರೆ ಅವಕಾಶ ತಪ್ಪಿದ್ದರಿಂದ ಈ ದಿನ ಏಕಾಏಕಿ ಹಲ್ಲೆ ನಡೆಸಲಾಗಿದೆ. ಖುದ್ದಾಗಿ ಮಿಥುನ್ ರೈ ನನ್ನ ಬಳಿ ಬಂದು ‘ನೀನು ಯೂತ್ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದು, ಅದರಿಂದ ಹಿಂದೆ ಸರಿಯದಿದ್ದಲ್ಲಿ ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದಾನೆ” ಎಂದು ಪುನೀತ್ ಶೆಟ್ಟಿ ಆರೋಪಿಸಿದ್ದಾರೆ.
“ಯೂತ್ ಕಾಂಗ್ರೆಸ್ ಆಕಾಂಕ್ಷಿಯಾಗಿರುವುದು ಆತನಿಗೆ ಹಿಡಿಸುತ್ತಿಲ್ಲ. ಐವನ್ ಡಿಸೋಜರ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಅದೂ ಅವನಿಗೆ ಅದು ಹಿಡಿಸುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತನೇ ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ನಡೆಸುವುದು ಮುಂದುವರಿದರೆ ಸಮಾಜದಲ್ಲಿ ಪಕ್ಷದ ಕಾರ್ಯಕ್ರಮ ನಡೆಸಲು ಕಷ್ಟ ಸಾಧ್ಯವಾಗಬಹುದು” ಎಂದು ಪುನೀತ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ.
Comments are closed.