ಕರಾವಳಿ

ಆಸ್ತಿ ವಿವಾದ: ತಂದೆ, ಚಿಕ್ಕಪ್ಪನ ಕಿರುಕುಳದಿಂದ ಬೇಸತ್ತ ಪುತ್ರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಆಸ್ತಿ ವಿವಾದವೂ ಸೇರಿದಂತೆ ಮನೆಯಲ್ಲಿ ತಂದೆ, ಚಿಕ್ಕಪ್ಪ ಹಾಗೂ ಇನ್ನೋರ್ವನಿಂದ ಮಾನಸಿಕ ಕಿರುಕುಳವಾಗುತ್ತಿದೆಯೆಂದು ಡೆತ್ ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಬಾಡಿ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಮರಗೆಲಸ ಕಾರ್ಯ ಮಾಡಿಕೊಂಡಿರುವ 32 ವರ್ಷ ಪ್ರಾಯದ ಪ್ರಭಾಕರ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡವರು.

  

ಆಸ್ತಿ ವಿಚಾರದಲ್ಲಿ ತಂದೆ ನರಸಿಂಹ ಆಚಾರ್ಯ, ಚಿಕ್ಕಪ್ಪ ಶಂಕರ ಆಚಾರ್ಯ ಹಾಗೂ ಚೂರಿ ಶಂಕರ್ ಎನ್ನುವವರು ನಿತ್ಯ ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವುದಾಗಿ ಪ್ರಭಾಕರ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಈತನ ಪತ್ನಿ ಪವಿತ್ರಾ ಕೂಡ ಗಂಡ ಪ್ರಭಾಕರ್ ಹಾಗೂ ಮಾವ ನರಸಿಂಹ ಆಚಾರ್ ಕಿರುಕುಳ ನೀಡುತ್ತಿದ್ದಾರೆಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದರು. ಇವರಿಬ್ಬರ ಸಣ್ಣ ಪ್ರಾಯದ ಮಕ್ಕಳು ಸದ್ಯ ಅನಾಥರಾಗಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.