ಬೆಂಗಳೂರು: ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಬಿಜೆಪಿ ಸಂಸದೆ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.
ರುದ್ರೇಶ್ ಹತ್ಯೆ ಹಿಂದೆ ಮೂಲಸೌಕರ್ಯ ಸಚಿವ ರೋಷನ್ ಬೇಗ್ ಅವರ ಕೈವಾಡ ಇದ್ದು, ಸಚಿವರೇ ಸುಫಾರಿ ಕೊಟ್ಟು ಆರ್ ಎಸ್ಎಸ್ ಕಾರ್ಯಕರ್ತನನ್ನು ಕೊಲೆ ಮಾಡಿಸಿರುವುದಾಗಿ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಖಾಸಹಿ ವಾಹಿನಿಯೊಂದಿಗೆ ಮಾತನಾಡಿದ ಕರಂದ್ಲಾಜೆ, ಶಿವಾಜಿನಗರದಲ್ಲಿ ರುದ್ರೇಶ್ ಬೆಳವಣಿಗೆ ಸಹಿಸದೇ ಈ ಕೊಲೆ ಮಾಡಲಾಗಿದೆ ಎಂದು ದೂರಿದ್ದಾರೆ. ಅಲ್ಲದೆ ಈ ಪ್ರಕರಣ ಸಂಬಂಧ ರಾಜ್ಯ ಪೊಲೀಸರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದ್ದು, ಇದನ್ನು ಸಿಬಿಐ ಅಥವಾ ಎನ್ ಐಎ ತನಿಖೆಗೆ ಒಪ್ಪಿಸಬೇಕು ಮತ್ತು ರೋಷನ್ ಬೇಗ್ ಅವರು ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಪೊಲೀಸರಿಂದ ರುದ್ರೇಶ್ ಹತ್ಯೆ ತನಿಖೆ ಬೇಡ. ರುದ್ರೇಶ್ ಹತ್ಯೆ ಹಿಂದೆ ಸಚಿವರ ಕೈವಾಡ ಇರುವ ಬಗ್ಗೆ ಶಿವಾಜಿನಗರದ ಜನತೆ, ಅಧಿಕಾರಿಗಳು ಮಾತನಾಡುತ್ತಿದ್ದಾರೆ. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ಅವರೇ ನೇರವಾಗಿ ಶಾಮೀಲಾಗಿದ್ದಾರೆ. ಈ ಬಗ್ಗೆ ಹಲವು ಅಧಿಕಾರಿಗಳಿಗೆ ಗುಮಾನಿ ಇದೆ. ಹಾಗಾಗಿ ರೋಷನ್ ಬೇಗ್ ಕೈವಾಡದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ಸಿಗರು ಸುಪಾರಿ ನೀಡಿ ರುದ್ರೇಶ್ ಕೊಲೆ ಮಾಡಿಸಿದ್ದಾರೆ. ಕೂಡಲೇ ರೋಷನ್ ಬೇಗ್ ಅವರನ್ನು ತನಿಖೆಗೊಳಪಡಿಸಬೇಕು ಎಂದು ಶೋಭಾ ಆಗ್ರಹಿಸಿದ್ದಾರೆ.
Comments are closed.