ಹೊಸದಿಲ್ಲಿ: ಕಳೆದ ವರ್ಷದ ಆ.17ರಂದು ಪ್ರತಿಕೂಲ ಹವಾಮಾನದಿಂದಾಗಿ ರನ್ವೇ ಗೋಚರತೆ ಸಾಧ್ಯವಾಗದೇ 150 ಪ್ರಯಾಣಿಕರು ಮತ್ತು ಸಿಬ್ಬಂದಿಗಳಿದ್ದ ಜೆಟ್ ಏರವೇಸ್ ವಿಮಾನವನ್ನು ಅದರ ಪೈಲಟ್ಗಳು ‘ಬ್ಲೈಂಡ್’ ಲ್ಯಾಂಡಿಂಗ್ ಅಂದರೆ ದೇವರ ಮೇಲೆ ಭಾರ ಹಾಕಿ ಕುರುಡಾಗಿ ರನ್ವೇ ಮೇಲೆ ಇಳಿಸಿದ್ದರು ಎನ್ನುವುದು ನಾಗರಿಕ ವಾಯುಯಾನ ಇಲಾಖೆಯು ನಡೆಸಿರುವ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೈಲಟ್ಗಳ ಈ ಅಪಾಯಕಾರಿ ಕ್ರಮವು ಭಾರೀ ದುರಂತಕ್ಕೆ ಕಾರಣವಾಗಬಹುದಿತ್ತು ಎಂದು ಕಳೆದ ವಾರ ವಾಯುಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿರುವ ಅಂತಿಮ ತನಿಖಾ ವರದಿಯು ಹೇಳಿದೆ. ‘ಮೇ ಡೇ’ ಎಂದು ಘೋಷಿಸಿದ ಬಳಿಕ ಕಾಕ್ಪಿಟ್ನಲ್ಲಿ ಪೈಲಟ್ಗಳು ನಡೆಸಿದ್ದ ಸಂಭಾಷಣೆಯ ವಿವರಗಳು ಎಂಥವರಲ್ಲೂ ಚಳಿಯನ್ನು ಹುಟ್ಟಿಸುತ್ತವೆ. ಆರು ಬಾರಿ ಪ್ರಯತ್ನಿಸಿದ ಬಳಿ ಏಳನೆ ಬಾರಿ ವಿಮಾನವನ್ನು ರನ್ವೇದಲ್ಲಿ ಇಳಿಸುವಲ್ಲಿ ಪೈಲಟ್ಗಳು ಯಶಸ್ವಿಯಾಗಿದ್ದರು.
ಕಾಕ್ಪಿಟ್ನಲ್ಲಿ ನಡೆದಿದ್ದೇನು…?
ಏಳನೇ ಬಾರಿ ವಿಮಾನವನ್ನು ಇಳಿಸುವ ಪ್ರಯತ್ನದಲ್ಲಿದ್ದಾಗ ‘ರನ್ ವೇ ಎಲ್ಲಿದೆ ಎಂದು ನಿನಗೇನಾದರೂ ಕಾಣುತ್ತಿದೆಯೇ’ ಎಂದು ಫಸ್ಟ್ ಆಫೀಸರ್ ಕೇಳುತ್ತಿರುವುದು ಹಾಗೂ ‘ಸುಮ್ಮನೆ ಬ್ಲೈಂಡ್ ಆಗಿ ಇಳಿಸುತ್ತಿದ್ದೇನೆ ’ಎಂದು ಕ್ಯಾಪ್ಟನ್ ಉತ್ತರಿಸುತ್ತಿರುವುದು ವಿಮಾನದ ವಾಯಿಸ್ ರೆಕಾರ್ಡರ್ನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಕೊನೆಗೂ ಈ ಬೋಯಿಂಗ್ B-737 ವಿಮಾನ್ ರನ್ವೇದಲ್ಲಿ ಇಳಿದಾಗ ಅದರಲ್ಲಿ ಕೇವಲ 349 ಕೆ.ಜಿ.ಇಂಧನ ಮಾತ್ರ ಉಳಿದುಕೊಂಡಿತ್ತು. ವಿಮಾನವೊಂದು ಒಂದು ಬಾರಿ ಇಳಿಯುವ ಪ್ರಯತ್ನದಲ್ಲಿ 100ರಿಂದ 150 ಕೆ.ಜಿ.ಇಂಧನವನ್ನು ಬಳಸುತ್ತದೆ. ಏಳನೇ ಪ್ರಯತ್ನವೂ ವಿಫಲವಾಗಿ ಎಂಟನೇ ಪ್ರಯತ್ನಕ್ಕೇನಾದರೂ ಪೈಲಟ್ಗಳು ಮುಂದಾಗಿದ್ದರೆ ಇಂಧವಿಲ್ಲದೆ ವಿಮಾನವು ಪತನಗೊಳ್ಳುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು. ‘ಗಂಭೀರ’ವೆಂದು ಪರಿಗಣಿಸಲಾದ ಈ ಘಟನೆಯ ಬಳಿಕ ಕ್ಯಾಪ್ಟನ್ಗೆ ಸಹ-ಪೈಲಟ್ ಎಂದು ಹಿಂಬಡ್ತಿ ನೀಡಲಾಗಿತ್ತು. ಪೈಲಟ್ಗಳು ಪ್ರಯತ್ನಗಳ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಉತ್ತರಿಸಿಲ್ಲ.
ಈ ವಿಮಾನ ಕೊಚ್ಚಿ ವಾಯುಪ್ರದೇಶವನ್ನು ತಲುಪಿದಾಗ ಅದರಲ್ಲಿ 4,844 ಕೆ.ಜಿ.ಇಂಧನವಿತ್ತು. ಅದು ಕೊಚ್ಚಿಯಲ್ಲಿ ಇಳಿಯಲು ಮೂರು ಬಾರಿ ಪ್ರಯತ್ನಿಸಿ ರನ್ವೇ ಗೋಚರಿಸದೆ ವಿಫಲಗೊಂಡಿತ್ತು. ಹೀಗೆ ಮೂರು ಪ್ರಯತ್ನಗಳಲ್ಲಿ ಇಂಧನದ ಪ್ರಮಾಣ 4,699,3,919 ಮತ್ತು 2,644 ಕೆ.ಜಿ.ಗಿಳಿದಿತ್ತು. ಪ್ರತಿಕೂಲ ಹವಾಮಾನವಿದ್ದಾಗ ಇಳಿಯಲು ನಿಯೋಜಿತ ಪರ್ಯಾಯ ನಿಲ್ದಾಣವಾದ ಬೆಂಗಳೂರಿಗೆ ತಲುಪಲು ಕನಿಷ್ಠ 3,306ಕೆ.ಜಿ.ಇಂಧನದ ಅಗತ್ಯವಿತ್ತು. ಹೀಗಾಗಿ ಸಮೀಪದ ತಿರುವನಂತಪುರಕ್ಕೆ ವಿಮಾನವನ್ನು ತಿರುಗಿಸುವುದು ಪೈಲಟ್ಗಳಿಗೆ ಅನಿವಾರ್ಯವಾಗಿತ್ತು. ತಿರುವನಂತಪುರದಲ್ಲಿ ಇಳಿಯಲು ಮೊದಲ (ಯಾನದ ನಾಲ್ಕನೇ) ಪ್ರಯತ್ನ ಮಾಡಿದಾಗ ಇಂಧನದ ಪ್ರಮಾಣ 1,324 ಕೆ.ಜಿ.ಗೆ ಇಳಿದಿತ್ತು. ಈಗ ‘ಮೇ ಡೇ ’ ಘೋಷಿಸಿದ್ದ ಪೈಲಟ್ಗಳು ಐದು ಮತ್ತು ಆರನೇ ಪ್ರಯತ್ನ ನಡೆಸಿದ ಬಳಿಕ ಕೇವಲ 663 ಕೆ.ಜಿ.ಇಂಧನ ಉಳಿದುಕೊಂಡಿತ್ತು. ಅಂತಿಮವಾಗಿ ಏಳನೇ ಪ್ರಯತ್ನದಲ್ಲಿ ವಿಮಾನವು ಸುರಕ್ಷಿತವಾಗಿ ರನ್ವೇ ಮೇಲೆ ಇಳಿದಿತ್ತು.
ಪ್ರತಿಕೂಲ ಹವಾಮಾನವಿದ್ದಾಗ ಇಳಿಸಲು ನಡೆಸಬಹುದಾದ ಪ್ರಯತ್ನಗಳ ಸಂಖ್ಯೆಗೆ ಸಂಬಂಧಿಸಿದಂತೆ ಕಂಪನಿಯು ಯಾವುದೇ ನೀತಿಯನ್ನು ಹೊಂದಿರದ್ದು ಈ ಘಟನೆಗೆ ಕಾರಣವಾಗಿತ್ತು ಎಂದು ವರದಿಯು ಉಲ್ಲೇಖಿಸಿದೆ.
ಅಲ್ಲದೆ ಪ್ರತಿಕೂಲ ಹವಾಮಾನವಿದ್ದಾಗ ನಿಯೋಜಿತ ತಾಣಕ್ಕೆ ಪರ್ಯಾಯವಾಗಿ ಇನ್ನೊಂದು ತಾಣವನ್ನು ಕಂಪನಿಯು ಗುರುತಿಸಿರಲಿಲ್ಲ. ಹೀಗಾಗಿ ಪೈಲಟ್ಗಳು ಬಹುಶಃ ಉತ್ತಮವಲ್ಲದ ಇನ್ನೊಂದು ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದೂ ವರದಿಯು ಬೆಟ್ಟು ಮಾಡಿದೆ.
ಘಟನೆಯ ಕುರಿತು ಜೆಟ್ ಏರ್ವೇಸ್ ಕೂಡ ಆಂತರಿಕ ತನಿಖೆಯನ್ನು ನಡೆಸಿದೆ ಎನ್ನಲಾಗಿದೆ. ತನಿಖಾ ಸಂಸ್ಥೆಗಳೊಂದಿಗೆ ನಾವು ಸಹಕರಿಸುತ್ತಿದ್ದೇವೆ ಎಂದು ಜೆಟ್ ಹೇಳಿಕೊಂಡಿದೆ.
Comments are closed.