ಬೆಂಗಳೂರು: ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಿರಾಟ್ ಹಿಂದೂ ಸಮಾಜೋತ್ಸವ’ ಕಾರ್ಯಕ್ರಮದಲ್ಲಿ ಪೊಲೀಸರ ನಿರ್ಬಂಧದ ನಡುವೆಯೂ ವಿಎಚ್ಪಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಅವರು ಮಾಡಿರುವ ಭಾಷಣದ ವಿಡಿಯೊವನ್ನು ಪ್ರಸಾರ ಮಾಡಲಾಯಿತು.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಮಾಜೋತ್ಸವ ಕಾರ್ಯಕ್ರಮದ ಅಂತ್ಯಕ್ಕೆ ವಂದನಾರ್ಪಣೆ ಸಲ್ಲಿಸಿದ ನಂತರ ಸಂಘಟಕರು ದಿಢೀರಾಗಿ ಮುದ್ರಿತ ಭಾಷಣವನ್ನು ಪ್ರಸಾರ ಮಾಡಿದರು.
ಈ ಸಂದರ್ಭದಲ್ಲಿ ಮೈದಾನದಲ್ಲಿ ಸೇರಿದ್ದ ಸಭಿಕರು ತಮ್ಮ ಆಸನಗಳಿಂದ ಎದ್ದು ಮೈದಾನದ ಹೊರಗಡೆ ಹೆಜ್ಜೆ ಹಾಕಿದ್ದರು. ದಿಢೀರ್ ಆಗಿ ತೊಗಾಡಿಯಾ ಭಾಷಣ ಪ್ರಸಾರವಾಗುತ್ತಿದ್ದಂತೆಯೇ ಮನೆಗೆ ಹೊರಟಿದ್ದವರು ಅಲ್ಲಲ್ಲೇ ನಿಂತು ಬೃಹತ್ ಪರದೆಗಳಲ್ಲಿ ವಿಡಿಯೊ ವೀಕ್ಷಿಸಿದರು. ಇದರಿಂದ ಪುಳಕಿತರಾದ ಜನರು ತೊಗಾಡಿಯಾ ಪರ ಘೋಷಣೆಕೂಗಿದರು.
16 ನಿಮಿಷಗಳ ಈ ಭಾಷಣವನ್ನು ಹೊಸೂರಿನ ಹೋಟೆಲೊಂದರಲ್ಲಿ ಶನಿವಾರ ಚಿತ್ರೀಕರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಹರಸಾಹಸ: ತೊಗಾಡಿಯಾ ಅವರ ಭಾಷಣದ ವಿಡಿಯೊ ಪ್ರಸಾರವು ಅನಿರೀಕ್ಷಿತವಾಗಿ ಆರಂಭವಾಗುತ್ತಿದ್ದಂತೆ ಅದನ್ನು
ತಡೆಯಲು ಪೊಲೀಸರು ಹರಸಾಹಸಪಟ್ಟರು. ವೇದಿಕೆ ಬಳಿ ತೆರಳಿದ ಪೊಲೀಸರು, ಪ್ರಸಾರ ನಿಲ್ಲಿಸುವಂತೆ ಸಂಘಟಕರಿಗೆ ಸೂಚಿಸಿದರು. ಆದರೆ, ಸಂಘಟಕರು ಅದಕ್ಕೆ ಕಿವಿಗೊಡಲಿಲ್ಲ.
ಈ ಹಂತದಲ್ಲಿ ಪೊಲೀಸರೂ ಸಂಘಟಕರ ಜತೆ ಹೆಚ್ಚು ಘರ್ಷಣೆ ಮಾಡಿಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಸುಮ್ಮನಾದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದ್ದ ಕಾರಣ ಗಲಾಟೆಯ ಮುನ್ಸೂಚನೆ ಕೂಡ ಪೊಲೀಸರಿಗೆ ಸಿಕ್ಕಿತ್ತು ಎನ್ನಲಾಗಿದೆ.
‘ಘರ್ ವಾಪಸಿ’ ನಿಲ್ಲಲ್ಲ: ಹಿಂದೂ ಧರ್ಮದಿಂದ ಮತಾಂತರಗೊಂಡವರನ್ನು ಮರು ಮತಾಂತರ ಮಾಡುವ ‘ಘರ್ ವಾಪಸಿ’ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ತೊಗಾಡಿಯಾ ತಮ್ಮ ಮುದ್ರಿತ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಧರ್ಮ ಸಹಿಷ್ಣುತೆ ಕುರಿತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಅವರು, ‘ಧರ್ಮ ಸಹಿಷ್ಣುತೆ ಬಗ್ಗೆ ನಮಗೆ ಯಾರೊಬ್ಬರೂ ಪಾಠ ಮಾಡಬೇಕಾಗಿಲ್ಲ. ಈ ಬ್ರಹ್ಮಾಂಡ ಉಗಮವಾದಾಗಿನಿಂದಲೂ ನಾವು ಧಾರ್ಮಿಕ ಸಹಿಷ್ಣುತೆ ಹೊಂದಿದ್ದೇವೆ. ಮತಾಂತರ ಮಾಡುತ್ತಿರುವವರಿಗೆ ಸಹಿಷ್ಣುತೆ ಬಗ್ಗೆ ಪಾಠ ಮಾಡಿ. ಇನ್ನು ಮುಂದೆ ಯಾವೊಬ್ಬ ಹಿಂದೂವನ್ನೂ ಮತಾಂತರಗೊಳಿಸಲು ಬಿಡುವುದಿಲ್ಲ’ ಎಂದಿದ್ದಾರೆ.
‘ಸಂವಿಧಾನ ಬದ್ಧವಾಗಿ ಈ ದೇಶ ಹಿಂದೂ ರಾಷ್ಟ್ರವಾಗುವುದನ್ನು ನಾವು ಬಯಸುತ್ತೇವೆ. ಇದು ಸಾಕಾರವಾಗುವವರೆಗೂ ಹೋರಾಟ ಮುಂದುವರೆಸುತ್ತೇವೆ’ ಎಂದು ಅವರು ಘೋಷಿಸಿದ್ದಾರೆ.
ಹಿಂದೂ ಸಮಾಜದಲ್ಲಿನ ಅಸ್ಪೃಶ್ಯತೆ ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
ಕಾನೂನು ಪ್ರಕಾರ ಕ್ರಮ
ಮುದ್ರಿತ ವಿಡಿಯೊ ಪ್ರಸಾರ ಮಾಡುವ ಮೂಲಕ ಸಂಘಟಕರು ಪೊಲೀಸ್ ಕಮಿಷನರ್ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇವೆ
–ಅಲೋಕ್ ಕುಮಾರ್, ಹೆಚ್ಚುವರಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ )