ಬೆಂಗಳೂರು: ಶ್ಲಾಘನೀಯ ಸೇವೆ ಸಲ್ಲಿಸಿದ 75 ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ ಮಾಡಿದರು.
ನಂತರ ಮಾತನಾಡಿದ ಅವರು, ‘ಪೊಲೀಸ್ ಎಂದರೆ ಸರ್ಕಾರ ಎಂಬ ಭಾವನೆ ಜನರಲ್ಲಿದೆ. ಇಲಾಖೆಯಲ್ಲಿ ಯಾವುದೇ ವೈಫಲ್ಯ ಉಂಟಾದರೂ, ಅದು ಸರ್ಕಾರದ ವೈಫಲ್ಯವಿದ್ದಂತೆ. ಹೀಗಾಗಿ, ಸಿಬ್ಬಂದಿ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು’ ಎಂದರು.
‘ಪೊಲೀಸರು ಅಪರಾಧ ಕೃತ್ಯಗಳನ್ನು ಪತ್ತೆ ಮಾಡುವುದರ ಜತೆ ಜತೆಗೆ ಕೃತ್ಯ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನೂ ತೆಗೆದುಕೊಳ್ಳಬೇಕು. ತನಿಖೆ ಸಮಯದಲ್ಲೇ ಹೆಚ್ಚು ಶ್ರಮ ವಹಿಸಿ, ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕಬೇಕು. ಆಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ’ ಎಂದರು.
ಗೃಹ ಸಚಿವ ಕೆ.ಜೆ.ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವೊ ಮತ್ತಿತರರು ಹಾಜರಿದ್ದರು.
ಅಪವಾದ ತಪ್ಪೊಲ್ಲ
ಎಷ್ಟೇ ಜಾಗೃತೆಯಿಂದ ಕೆಲಸ ಮಾಡಿದರೂ ಪೊಲೀಸರ ಮೇಲೆ ಬರುವ ಅಪವಾದ ತಪ್ಪುವುದಿಲ್ಲ. ಎಟಿಎಂಗಳಲ್ಲಿ ಗ್ರಾಹಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ಬ್ಯಾಂಕ್ಗಳ ಕರ್ತವ್ಯ. ಶಾಲೆಗಳಲ್ಲಿ ಮಕ್ಕಳ ರಕ್ಷಣೆಗೆ ಮುಂಜಾಗ್ರತೆ ವಹಿಸುವುದು ಶಾಲಾ ಆಡಳಿತ ಮಂಡಳಿಗಳ ಜವಾಬ್ದಾರಿ. ಆದರೆ, ಅಲ್ಲಿ ಅಪರಾಧ ಕೃತ್ಯಗಳು ನಡೆದಾಗ ಜನ ಪೊಲೀಸರನ್ನೇ ದೂರುತ್ತಾರೆ. –ಸಿದ್ದರಾಮಯ್ಯ