Karnataka

ಮಂಗಳೂರು ತುಳು ಅಕಾಡೆಮಿ ಚಾವಡಿಯಲ್ಲಿ ತುಳು ಪ್ರವಚನ ಸಪ್ತಾಹ- ಏಳದೆ ಮಂದಾರ ರಾಮಾಯಣ : ಸುಗಿಪು – ದುನಿಪು 

Pinterest LinkedIn Tumblr

ಮಂಗಳೂರು: ತುಳುನಾಡಿನ ಧಾರ್ಮಿಕ – ಸಾಂಸ್ಕೃತಿಕ ನಂಬಿಕೆಗಳಲ್ಲಿ ಆಟಿ ತಿಂಗಳ ಕಷ್ಟ ಕೋಟಳೆಗಳ ನಿವಾರಣೆಗಾಗಿ ಮನೆ ಮನೆಗಳಲ್ಲಿ ರಾಮಾಯಣ ಪಾರಾಯಣ ಮಾಡುವ ಸಂಪ್ರದಾಯವಿತ್ತು. ಇಂದಿಗೂ ಹಲವು ಕಡೆ ಇದು ಆಚರಣೆಯಲ್ಲಿದೆ. ಆದರೆ ತುಳು ಭಾಷೆಯ ಪಾರಾಯಣ ಯಾವುದೇ ಕಡೆ ನಡೆಯುತ್ತಿಲ್ಲ.

ತುಳು ವಾಲ್ಮೀಕಿ ಎಂದೇ ಹೆಸರು ಪಡೆದ ದಿ. ಮಂದಾರ ಕೇಶವ ಭಟ್ ಅವರು ಬರೆದ ‘ಮಂದಾರ ರಾಮಾಯಣ’ ನಮ್ಮ ನೆಲದ ಮಹಾಕಾವ್ಯಗಳಲ್ಲಿ ಒಂದು. ಇದನ್ನು ನಾಡಿನಾದ್ಯಂತ ಪ್ರಸರಿಸಬೇಕು ಎಂಬ ಧ್ಯೇಯದಿಂದ ಕಳೆದ ಬಾರಿ ಅವರ ನೂರ ಒಂದನೇ ಜನ್ಮದಿನಾಚರಣೆ ಸಂದರ್ಭ ತುಳುವೆರೆ ಚಾವಡಿ ಶಕ್ತಿನಗರದಲ್ಲಿ ‘ಏಳದೆ ಮಂದಾರ ರಾಮಾಯಣ – ಸುಗಿಪು ದುನಿಪು’ ಎಂಬ ಏಳು ದಿನಗಳ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶದಿಂದ ಆಗಸ್ಟ್‌ 6 ರಿಂದ 13 ರವರೆಗೆ ‘ಏಳದೆ ಮಂದಾರ ರಾಮಾಯಣ: ಸುಗಿಪು – ದುನಿಪು’ ತುಳು ಪ್ರವಚನ ಸಪ್ತಾಹವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆಸಲಾಗುವುದು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುವರ್ಲ್ಡ್ (ರಿ.) ಮಂಗಳೂರು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ನಾಂದಿ ಕಾರ್ಯಕ್ರಮ:

ಮಂದಾರ ರಾಮಾಯಣ ಪ್ರವಚನ ಸಪ್ತಾಹದ ಉದ್ಘಾಟನಾ ಸಮಾರಂಭ ಆಗಸ್ಟ್ 6 ರಂದು ಗುರುವಾರ ಅಪರಾಹ್ನ 3 ಗಂಟೆಗೆ ಉದ್ಘಾಟನೆಗೊಂಡಿತ್ತು . ಮೂಡಬಿದಿರೆ ಜೈನ ಮಠದ ಡಾ ||ಸ್ವಸ್ತಿ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ದೀಪೋಜ್ವಲನೆಯ ಮೂಲಕ ನಾಂದಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂದಾರ ರಾಮಾಯಣ ಗ್ರಂಥ ಅನಾವರಣ ಮಾಡಿ ಏಳು ದಿನಗಳ ವಾಚನ – ಪ್ರವಚನಗಳಿಗೆ ವಿದ್ಯುಕ್ತ ಚಾಲನೆ ನೀಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಮಾಜಿ ಸದಸ್ಯ ಹಾಗೂ ತುಳು ಕಾವ್ಯಯಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಗ್ರಂಥಕರ್ತ ಮಂದಾರ ಕೇಶವ ಭಟ್ಟರ ಸಂಸ್ಮರಣೆ ಮಾಡಿದರು.

ತುಳುವರ್ಲ್ಡ್ (ರಿ) ಮಂಗಳೂರು ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ರಾಷ್ಟ್ರೀಯ ಮಹಿಳಾ ಅಯೋಗದ ಸದಸ್ಯೆ ಶ್ಯಾಮಲ. ಎಸ್. ಕುಂದರ್, ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಫ್ರಾನ್ಸಿಸ್ ಅಲ್ಮೆಡಾ,ವಿಶ್ವಾಸ್ ಎಸ್ಟೇಟ್ಸ್ ಪಾಲುದಾರ ಸುಲೇಮಾನ್ ಶೇಖ್ ಬೆಳುವಾಯಿ ಹಾಗೂ ಜನಾರ್ಧನ ಅರ್ಕುಳ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಮಂದಾರ ರಾಜೇಶ್ ಭಟ್ ಅವರನ್ನು ಮಂದಾರ ಸಮ್ಮಾನ್ ನೀಡಿ ಗೌರವಿಸಲಾಯಿತು.

ಏಳದೆ : ಸಪ್ತಾಹ ವಿಶೇಷ :

ಏಳದೆ ಮಂದಾರ ರಾಮಾಯಣ ‘ಕಾವ್ಯಯಾನ – 4’ ಸರಣಿಯಲ್ಲಿ ಮೊದಲ ಆಖ್ಯಾನ ‘ಇರೆತ್ತ ಪುರೆ – ಪರಬುನ ವರಸಾರಿ’ ಕಾವ್ಯಭಾಗವನ್ನು ಗಾಯಕರಾದ ತೋನ್ಸೆ ಪುಷ್ಕಳ ಕುಮಾರ್ ಮತ್ತು ಶೀಲಾ ದಿವಾಕರ್ ವಾಚಿಸುವರು. ಪ್ರವಚನಕಾರ ಪ್ರೊ.ಭಾಸ್ಕರ ರೈ, ಕುಕ್ಕುವಳ್ಳಿ ವ್ಯಾಖ್ಯಾನಿಸುವರು.

ಅಗೋಸ್ತು 7 ಶುಕ್ರವಾರ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ದೀಪ ಬೆಳಗುವರು. ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಶಶಿರಾಜ್ ಕಾವೂರು,ಕರುಣಾಕರ ಶೆಟ್ಟಿ, ಪಣಿಯೂರು ಅತಿಥಿಗಳಾಗಿರುವರು. ಹಿರಿಯ ಸಂಗೀತ ನಿರ್ದೇಶಕ ವಸಂತ ಕದ್ರಿ ಅವರಿಗೆ ಮಂದಾರ ಸಮ್ಮಾನ್ ನೀಡಲಾಗುವುದು.

ಬಳಿಕ ದ್ವಿತೀಯ ದಿನದ ‘ದಗೆ ತೋಜಾದ್ ಪಗೆ ಸಾದ್ಯಳ್’ ಕಾವ್ಯಭಾಗವನ್ನು ಶಿವಪ್ರಸಾದ್ ಎಡಪದವು ಮತ್ತು ಶಾಲಿನಿ ಹೆಬ್ಬಾರ್ ವಾಚಿಸುವರು. ಡಾ. ದಿನಕರ ಎಸ್. ಪಚ್ಚನಾಡಿ ಪ್ರವಚನ ಮಾಡುವರು.

ಅಗೋಸ್ತು 8 ಶನಿವಾರ ಸಂಜೆ 3 ಗಂಟೆಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ದೀಪೋಜ್ವಲನ ಮಾಡುವರು. ಎ.ಕೆ. ಜಯರಾಮ ಶೇಖ, ಕೃಷ್ಣರಾಜ ತಂತ್ರಿ ಕುಡುಪು,ಪಮ್ಮಿ ಕೊಡಿಯಾಲ್‌ಬೈಲ್ ಮುಖ್ಯ ಅತಿಥಿಗಳಾಗಿರುವರು.ಗಮಕಿ ಗಣಪತಿ ಪದ್ಯಾಣ ಅವರಿಗೆ ಮಂದಾರ ಸಮ್ಮಾನ್ ಪ್ರದಾನಿಸಲಾಗುವುದು.

ಮಂದಾರ ರಾಮಾಯಣದ ‘ಬೊಳ್ಪುದ ಗುಡ್ಚಿಲ್’ ಆಖ್ಯಾನವನ್ನು ದಯಾನಂದ ಕೋಡಿಕಲ್ ಮತ್ತು ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ದಕಟ್ಟೆ ವಾಚನ ಮಾಡುವರು. ನವನೀತ ಶೆಟ್ಟಿ ಕದ್ರಿ ವ್ಯಾಖ್ಯಾನಿಸುವರು.

ಅಗೋಸ್ತು 10 ರಂದು ಸೋಮವಾರ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ದೀಪ ಅರಳಿಸುವರು. ಡಾ. ಕೆ.ಸಿ.ನಾಯಕ್, ಅಶೋಕ್ ಮಾಡ ಕುದ್ರಾಡಿಗುತ್ತು, ಕಿರಣ್ ಕುಮಾರ್ ಕೋಡಿಕಲ್ ಅತಿಥಿಗಳಾಗಿರುವರು. ಕನ್ಯಾನ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಶಂಕರ ಭಟ್ ಅವರಿಗೆ ಮಂದಾರ ಸಮ್ಮಾನ್ ಪ್ರದಾನ ಮಾಡಲಾಗುವುದು. ಆ ಬಳಿಕ ‘ಪುಗೆ ತೂಪಿ ಪಗೆ’ ಭಾಗವನ್ನು ಧೀರಜ್ ರೈ ಸಂಪಾಜೆ ಮತ್ತು ಭವ್ಯಶ್ರೀ ಕುಲ್ಕುಂದ ವಾಚಿಸುವರು. ರವಿ ಅಲೆವೂರಾಯ ವರ್ಕಾಡಿ ಪ್ರವಚನ ಮಾಡುವರು.

ಅಗೋಸ್ತು 11ರಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಜ್ಯೋತಿ ಬೆಳಗುವರು. ಗಾಯತ್ರಿ ನಾಯಕ್, ಮಂದಾರ ಶಾರದಾಮಣಿ ಅತಿಥಿಗಳಾಗಿರುವರು. ಹಿರಿಯಡ್ಕ ಸರಕಾರೀ ಕಾಲೇಜು ಪ್ರಾಚಾರ್ಯೆ ಡಾ.ನಿಕೇತನ ಅವರು ಮಂದಾರ ಸಮ್ಮಾನ್ ಸ್ವೀಕರಿಸುವರು.

ಐದನೇ ದಿನದ ಕಾರ್ಯಕ್ರಮ ದಲ್ಲಿ ಮಂದಾರ ರಾಮಾಯಣದ ‘ಮಿತ್ತ ಲೋಕೊದ ಬಿತ್ತ್’ ಮತ್ತು ಬೆಂದಿನೆನ್ ತಿಂದೆ’ ಯುಗಳ ಅಧ್ಯಾಯವನ್ನು ಹರೀಶ್ ಶೆಟ್ಟಿ ಸೂಡ ಮತ್ತು ಚಂದ್ರಕಲಾ ನಂದಾವರ ವಾಚನ ಮಾಡುವರು. ಡಾ. ಎಂ. ಪ್ರಭಾಕರ ಜೋಶಿ ಪ್ರವಚನ ನೀಡುವರು.

ಅಗೋಸ್ತು 12 ರಂದು ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ದೀಪೋಜ್ವಲನೆ ಮಾಡುವರು. ಲ|ತಾರಾನಾಥ ಶೆಟ್ಟಿ ಬೋಳಾರ,ಅತ್ತಾವರ ಶಿವಾನಂದ ಕರ್ಕೇರ, ಭಾಸ್ಕರ ಕಾಸರಗೋಡು ಅತಿಥಿಗಳಾಗಿರುವರು. ಮಧುರೈ ಕಾಮರಾಜ ವಿ.ವಿ.ಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹರಿಕೃಷ್ಣ ಭರಣ್ಯ ಅವರಿಗೆ ಮಂದಾರ ಸಮ್ಮಾನ್ ನೀಡಲಾಗುವುದು.

ಬಳಿಕ ‘ಪಚ್ಚೆದುಂಗಿಲ’ ಆಖ್ಯಾನವನ್ನು ದೇವಿಪ್ರಸಾದ್ ಆಳ್ವ ತಲಪಾಡಿ ಮತ್ತು ವಿಜಯಲಕ್ಷ್ಮಿ ಕಟೀಲ್ ಗಮಕವಾಚನ ಮಾಡುವರು. ಸದಾಶಿವ ಆಳ್ವ ತಲಪಾಡಿ ವ್ಯಾಖ್ಯಾನ ನೀಡುವರು.

ಡಾ.ಮೋಹನ ಆಳ್ವರಿಗೆ ಮಂದಾರ ಭಾಷಾ ಸಮ್ಮಾನ್ :

ಮಂದಾರ ರಾಮಾಯಣ ಸಪ್ತಾಹ ಸಮಾರೋಪ ಸಮಾರಂಭ ಅಕಾಡೆಮಿ ಚಾವಡಿಯಲ್ಲಿ ಅಗೋಸ್ತು 13 ರಂದು ಗುರುವಾರ ಜರಗಲಿದ್ದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಚಾರ್ಯ ಹಾಗೂ ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಸಮಾರೋಪ ಭಾಷಣ ಮಾಡುವರು.

ಇದೇ ಸಂದರ್ಭದಲ್ಲಿ ಆಳ್ವಾಸ್ ನುಡಿಸಿರಿ – ವಿರಾಸತ್ ರೂವಾರಿ ಮೂಡಬಿದಿರೆಯ ಡಾ.ಎಂ.ಮೋಹನ ಆಳ್ವ ಅವರಿಗೆ ‘ಮಂದಾರ ಸಿರಿ ಭಾಷಾ ಸಮ್ಮಾನ್’ ವಿಶೇಷ ಪ್ರಶಸ್ತಿಯನ್ನು ಗಣ್ಯರು ಪ್ರದಾನ ಮಾಡುವರು. ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮ.ನಾ.ಪ.ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಪ್ತಾಹದ ಕೊನೆಯಲ್ಲಿ ಮಂದಾರ ರಾಮಾಯಣದ ‘ನೀಲದುಂಗಿಲ’ ಕಾವ್ಯಭಾಗವನ್ನು ಪ್ರಶಾಂತ್ ರೈ ಪುತ್ತೂರು ಮತ್ತು ಅಮೃತ ಅಡಿಗ ವಾಚಿಸುವರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಂಗಲಾಚರಣೆಯೊಂದಿಗೆ ಪ್ರವಚನ ನಡೆಸಿ ಕೊಡುವರು.

ಕೊರೋನಾ ಜಾಗೃತಿಗಾಗಿ ಸರಕಾರದ ನಿಯಮಾನುಸಾರ ಕಲಾವಿದರು ಮತ್ತು ಅತಿಥಿಗಳಿಗೆ ಮಾತ್ರ ಸೀಮಿತವಾಗಿ ನಡೆಯುವ ಈ ಸಪ್ತಾಹ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ತಲಪಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ. ಮತ್ತು ತುಳುವರ್ಲ್ಡ್ (ರಿ.) ಕುಡ್ಲ ಅಧ್ಯಕ್ಷ ಡಾ.ರಾಜೇಶ್ ಆಳ್ವ ಬದಿಯಡ್ಕ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.