ಆರೋಗ್ಯ

ಜಾಗೃತರಾದಾಗ ಮಾತ್ರ ಏಡ್ಸ್ ರೋಗದಿಂದ ದೂರವಿರಲು ಸಾಧ್ಯ: ಜಿಲ್ಲಾಧಿಕಾರಿ ಕೂರ್ಮರಾವ್ ಎಂ

Pinterest LinkedIn Tumblr

ಉಡುಪಿ: ಏಡ್ಸ್ ರೋಗದ ಬಗ್ಗೆ ಪ್ರತಿಯೊಬ್ಬರೂ ಅರಿವನ್ನು ಹೊಂದಿ ಜಾಗೃತರಾದಾಗ ಮಾತ್ರ ರೋಗದಿಂದ ದೂರ ಉಳಿಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು.

ಅವರು ಇಂದು ನಗರದ ಅಂಬಲಪಾಡಿ ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿದ್ಯಾರತ್ನ ಸ್ಕೂಲ್ & ಕಾಲೇಜ್ ಆಫ್ ನರ್ಸಿಂಗ್, ಲಯನ್ಸ್ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆ ಉಡುಪಿ ಹಾಗೂ ಶ್ರೀ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ರೆಡ್ಕ್ರಾಸ್ ಮತ್ತು ಎನ್.ಎಸ್.ಎಸ್ ಘಟಕ ಉದ್ಯಾವರ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಳೆದ ಎರಡು ವರ್ಷದಿಂದ ವಿಶ್ವವನ್ನೇ ಕೋವಿಡ್ ಸೋಂಕು ಕಾಡುತ್ತಿದೆ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಹೆಚ್ಚು ಮಹತ್ವ ಕೊಡುವುದರ ಜೊತೆಗೆ ಜಾಗೃತಿ ವಹಿಸಬೇಕು. ಏಡ್ಸ್ ಸೋಂಕಿತರಿಗೆ ಕೋವಿಡ್ ಸೋಂಕು ತಗುಲಿದಾಗ ಅದರ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಿನ್ನೆಲೆ ಅವು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು.
ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಕೋವಿಡ್ ನಿರೋಧಕ ಚುಚ್ಚುಮದ್ದಿನ ಎರಡು ಡೋಸ್ಗಳನ್ನು ತಪ್ಪದೇ ಪಡೆಯಬೇಕು ಎಂದ ಅವರು, ಸಂಘ- ಸಂಸ್ಥೆಗಳು, ಸಮುದಾಯದ ಮುಖಂಡರುಗಳು, ಎಲ್ಲರೂ ಕೋವಿಡ್ ಲಸಿಕೆ ಪಡೆಯದೇ ಇರುವುದರಿಂದ ಆಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿ, ಲಸಿಕೆ ಪಡೆಯುವಂತೆ ಜಾಗೃತಿ ವಹಿಸಬೇಕು ಎಂದರು.

ಹೆಚ್.ಐ.ವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದೇ ರಕ್ತ ಪಡೆಯುವುದು, ಸೋಂಕಿತ ತಾಯಿಯಿಂದ ಹುಟ್ಟುವ ಮಗುವಿಗೆ ಗರ್ಭಾವಸ್ಥೆಯಲ್ಲಿ ಹಾಗೂ ಸೋಂಕಿತರ ಸೂಜಿ, ಸಿರಿಂಜ್ಗಳನ್ನು ಸಂಸ್ಕರಿಸದೇ ಬಳಸುವುದರಿಂದ ಹರಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ 3,826 ಸೋಂಕಿತರನ್ನು ಗುರುತಿಸಿ, ಅವರುಗಳಿಗೆ ಎ.ಆರ್.ಟಿ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದ ಅವರು, ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಜನನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹೆಚ್.ಐ.ವಿ ಸೋಂಕು ತಗಲದೇ ಇರುವಂತೆ ಆರೋಗ್ಯ ಇಲಾಖೆಯವರು ಎಚ್ಚರ ವಹಿಸಿರುತ್ತಾರೆ ಎಂದರು.

ಅಸಮಾನತೆಯನ್ನು ಹೋಗಲಾಡಿಸಿದರೆ ಕೋವಿಡ್ ಸೋಂಕು ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳನ್ನು ಹೋಗಲಾಡಿಸುವುದು ಸುಲಭ ಎಂದ ಅವರು, ಈ ಬಾರಿಯ ಏಡ್ಸ್ ದಿನಾಚರಣೆಯನ್ನು “ಅಸಮಾನತೆಯನ್ನು ಕೊನೆಗೊಳಿಸಿ, ಏಡ್ಸ್ ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಇದಕ್ಕೆ ನಾವೆಲ್ಲರೂ ಬದ್ಧರಾಗೋಣ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಹೆಚ್.ಐ.ವಿ ವೈರಾಣು ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನು ಹಾಳು ಗೆಡವುತ್ತದೆ. ಇದರಿಂದಾಗಿ ಇತರೆ ಸಾಮಾನ್ಯ ಕಾಯಿಲೆಗಳು ಬಂದಾಗ ಅವುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕುಂದಿಸುತ್ತದೆ ಎಂದರು.

ಸಮಾಜದಲ್ಲಿ ಸೋಂಕಿತರಿಗೆ ಮಾನಸಿಕ ಸ್ಥೆರ್ಯ ತುಂಬುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದ ಅವರು, ಸೋಂಕಿತರು ಸಾವೇ ಗತಿಯೆಂಬ ಮನೋಭಾವ ಹೊಂದಿ ಪೂರ್ಣಗ್ರಹ ಪೀಡಿತರಾಗದೇ ಅದರ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಂಡು ವೈದ್ಯರ ಸಲಹೆಯನ್ನು ಪಡೆಯುವುದರೊಂದಿಗೆ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ಏಡ್ಸ್ ರೋಗ ಹೊಂದಿದವರನ್ನು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿಸಲು ಸಾಧ್ಯ ಇಲ್ಲದೇ ಇದ್ದರೂ, ಬಾಧಿತರು ಪೌಷ್ಠಿಕ ಆಹಾರಗಳನ್ನು ಸೇವಿಸಿ, ಚಿಕಿತ್ಸೆ ಪಡೆಯುವುದರಿಂದ ಇತರರಂತೆ ಸಾಮಾನ್ಯವಾಗಿ ಜೀವನ ಸಾಗಿಸಿ, ದೀರ್ಘಕಾಲ ಬದುಕುವ ಅವಕಾಶ ಇದೆ ಎಂದರು.

ರೋಗದ ಪರೀಕ್ಷೆಗಳನ್ನು ಹೆಚ್ಚು ಮಾಡಿದಾಗ ಸೋಂಕಿತರನ್ನು ಶೀಘ್ರದಲ್ಲಿಯೇ ಗುರುತಿಸಿ, ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಉತ್ತಮ ಸೇವೆಯನ್ನು ಗುರುತಿಸಿ, ನೋಡೆಲ್ ಅಧಿಕಾರಿ ಡಾ. ಚಂದ್ರಶೇಖರ್ ಅಡಿಗ, ಹೆಚ್.ಐ.ವಿ ಸೋಂಕಿತ ತಾಯಿಗೆ ಹುಟ್ಟಿದ ಮಕ್ಕಳ ನೇರ ನಿಗಾವಣೆ ಮಾಡಿದ ಮಣಿಪಾಲ ಕೆ.ಎಮ್.ಸಿ ಯ ಮಕ್ಕಳ ತಜ್ಞ ಡಾ.ಲೆಸ್ಲೀ ಎಡ್ವರ್ಡ್ ಎಸ್. ಲೂಯಿಸ್, ಲಾಕ್ಡೌನ್ ಸಮಯದಲ್ಲಿ ಹೆಚ್ಚು ಹೆಚ್.ಐ.ವಿ ಸೋಂಕಿತರಿಗೆ ಎ.ಆರ್.ಟಿ ಔಷಧ ವಿತರಣೆ ಮಾಡಿದ ಬಿಂದಿಯಾ ಶೆಟ್ಟಿ, ಜಿಲ್ಲಾ ಆಸ್ಪತ್ರೆಯ ಐ.ಸಿ.ಟಿ.ಸಿ ಪ್ರಯೋಗಶಾಲಾ ತಂತ್ರಜ್ಞರಾದ ರವೀಂದ್ರ ಖಾರ್ವಿ, ಎ.ಆರ್.ಟಿ ಕೇಂದ್ರದ ಕೇರ್ ಕೋ-ಆರ್ಡಿನೇಟರ್ ಸುಪ್ರೀತಾ, ಹೆಚ್.ಐ.ವಿ ಸೋಂಕಿತ ನೊಂದ ಸಮುದಾಯಕ್ಕೆ ವಿಶೇಷ ಕಾಳಜಿ ಮತ್ತು ಕೊಡುಗೆ ನೀಡಿದ ಭಾರ್ಗವಿ ಆರ್ ಐತಾಳ್ ಹಾಗೂ ಭಾರತೀಯ ರೆಡ್ಕ್ರಾಸ್ ಸೊಸೈಟಿ ಕುಂದಾಪುರದ ಅಧ್ಯಕ್ಷ ಜಯಕರ ಶೆಟ್ಟಿ, ಹೆಚ್.ಐ.ವಿ ಸೋಂಕಿತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ ಜಯಶ್ರೀ ಭಟ್ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್, ಎನ್.ಎಸ್.ಎಸ್ ವಿಭಾಗಗಳ ಮೂಲಕ ನಿರಂತರವಾಗಿ ರಕ್ತದಾನ ಶಿಬಿರ, ಹೆಚ್.ಐ.ವಿ ಏಡ್ಸ್ ಮಾಹಿತಿ ಕಾರ್ಯಾಗಾರಗಳನ್ನು ಕಾಲೇಜಿನಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡುವಲ್ಲಿ ಶ್ರಮಿಸಿದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಎನ್.ಎಸ್.ಎಸ್ ಅಧಿಕಾರಿ ಶಿವಪ್ರಸಾದ್ ಶೆಟ್ಟಿ, ಕಾರ್ಕಳ ಮಂಜುನಾಥ ಪೈ ಮೆಮೋರಿಯಲ್ ಕಾಲೇಜಿನ ಲೈಬ್ರೇರಿಯನ್ ವೆಂಕಟೇಶ್ ಹಾಗೂ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಬಾಲರಾಜ್ ಇವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ ರವಿರಾಜ್ ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ಗಣೇಶ್ ವಿ, ಆಸರೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸಂಜೀವ್ ವಂಡ್ಸೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್.ವಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ನಿರೂಪಿಸಿದರು.

Comments are closed.