UAE

ಕೊಲ್ಲಿ ರಾಷ್ಟ್ರದ ತುಳು ರಂಗ ಭೂಮಿಯಲ್ಲಿ ಹೊಸ ಭಾಷ್ಯ ಬರೆದ ಗಮ್ಮತ್ ಕಲಾವಿದರ ಚೊಚ್ಚಲ ಯಶಸ್ವಿ ತುಳು ಸಾಂಸಾರಿಕ ಹಾಸ್ಯಮಯ ನಾಟಕ ‘ವಾ ಗಳಿಗೆಡ್ ಪುಟುದನಾ’

Pinterest LinkedIn Tumblr

ದುಬೈ: ಯು.ಎ.ಇ ಪ್ರತಿಷ್ಠಿತ ನಾಟಕ ತಂಡ ಗಮ್ಮತ್ ಕಲಾವಿದೆರ್ ಯು.ಎ.ಇ ತಮ್ಮ 11 ನೇ ವರ್ಷಾಚರೆಣೆಯ ಅಂಗವಾಗಿ ತಮ್ಮ ಚೊಚ್ಚಲ ಯಶಸ್ವಿ ತುಳು ಸಾಂಸಾರಿಕ ಹಾಸ್ಯಮಯ ನಾಟಕ “ವಾ ಗಳಿಗೆಡ್ ಪುಟುದನಾ” ಮಾ.9 ಶನಿವಾರದಂದು ದುಬೈನ ಎಮಿರೇಟ್ಸ್ ಥಿಯೇಟರ್ನಲ್ಲಿ ಪ್ರದರ್ಶನಗೊಂಡಿತು.

ಸರ್ವ ಶ್ರೀಗಳಾದ ಸರ್ವೋತ್ತಮ್ ಶೆಟ್ಟಿ, ಕಲಾಪೋಷಕರುಗಳಾದ ಹರೀಶ್ ಶೇರಿಗಾರ್, ಪ್ರವೀಣ್ ಕುಮಾರ್ ಶೆಟ್ಟಿ, ಸಂದೀಪ್ ರೈ ನಂಜೆ, ಜೋಸೆಫ್ ಮಾತಾಯಿಸ್, ಗಮ್ಮತ್ ಕಲಾವಿದೆರ್ ನ ಪೋಷಕರಾದ ಹರೀಶ್ ಬಂಗೇರ , ಡಯಾನ್ ಡಿಸೋಜಾ , ಜೇಮ್ಸ್ ಮೆಂಡೋನ್ಸಾ, ಮನೋಹರ್ ತೋನ್ಸೆ ಅಧ್ಯಕ್ಷರಾದ ರಾಜೇಶ್ ಕುತ್ತಾರ್, ರಂಗ ನಿರ್ದೇಶಕ ವಿಶ್ವನಾಥ್ ಶೆಟ್ಟಿ ಮೊದಲಾದ ಗಣ್ಯರು ದೀಪ ಬೆಳಗಿಸುವುದರೊಂದಿಗೆ “ವಾ ಗಳಿಗೆಡ್ ಪುಟುದನಾ” ನಾಟಕಕ್ಕೆ ಚಾಲನೆ ನೀಡಿದರು ಮತ್ತು ಗಮ್ಮತ್ ಕಲಾವಿದೆರ್ ಯು ಎ ಇ ಅಧ್ಯಕ್ಷ ರಾದ ರಾಜೇಶ್ ಕುತ್ತಾರ್ ರವರು ಪ್ರಾಸ್ತಾವಿಕ ಸ್ವಾಗತದೊಂದಿಗೆ ಗಣ್ಯರನ್ನು ಅಭಿನಂದಿಸಿ ಗೌರವಿಸಿದರು

ಕಾರ್ಯಕ್ರಮದ ಅರಂಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ದುಬೈಯ ಕಲಾಪೋಷಕ ದಿ. ದಿವೇಶ್ ಆಳ್ವ ಮತ್ತು ರಂಗ ಸಂಘಟಕ ದಿ. ಕಾಪು ಲೀಲಾಧರ ಶೆಟ್ಟಿ ಅವರ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿಯನ್ನು ನೆರೆದ ಕಲಾಭಿಮಾನಿಗಳ ಸಮ್ಮುಖದಲ್ಲಿ ಮೌನ ಪ್ರಾರ್ಥನೆಯೊಂದಿಗೆ ಸಮರ್ಪಿಸಲಾಯಿತು.

ಯು.ಎ.ಇ. ಯಲ್ಲಿ ಧಾರಾಕಾರವಾಗಿ ಬೀಸಿದ ಮಳೆ ಗಾಳಿಯನ್ನು ಲೆಕ್ಕಿಸದೆ ತುಳು ನಾಟಕ ಅಭಿಮಾನಿಗಳು ಬಂದು ಈ ನಾಟಕವನ್ನು ವೀಕ್ಷಿಸಿದ್ದು ಗಮ್ಮತ್ ಕಲಾವಿದೆರ್ ತಂಡದ ಮೇಲಿರಿಸಿರುವ ಅಭಿಮಾನ ಮತ್ತು ತುಳು ಭಾಷಾಭಿಮಾನವನ್ನು ನಿಜಕ್ಕೂ ಎತ್ತಿ ಸಾರುವಂತಿತ್ತು.

ದುಬೈಯ ಸುಪ್ರಸಿದ್ದ ನಾಟಕ ನಿರ್ದೇಶಕ “ರಂಗ ಸಾರಥಿ” ವಿಶ್ವನಾಥ್ ಶೆಟ್ಟಿ ಯವರ ಪರಿಕಲ್ಪನೆಯಲ್ಲಿ ಮೂಡಿರುವ ಈ ಯಶಸ್ವಿ ಕಲಾಕುಸುಮ ಗಮ್ಮತ್ ಕಲಾವಿದೆರ್ ತಂಡಕ್ಕೆ ಹೊಸ ಮುನ್ನುಡಿ ಬರೆಯುವುದರೊಂದಿಗೆ ಕೊಲ್ಲಿ ರಾಷ್ಟ್ರ ದುಬೈಯಿಂದ ಸಂಪನ್ನಗೊಂಡ ಚೊಚ್ಚಲ ನಾಟಕ ಎಂಬ ಹೆಗ್ಗಳಿಕೆಯೊಂದಿಗೆ ಹೊಸ ಭಾಷ್ಯ ಬರೆದಿದೆ.

ಸಂದೀಪ್ ಶೆಟ್ಟಿ ರಾಯಿ ರಚನೆಯಲ್ಲಿ ಮೂಡಿಬಂದಿರುವ ಈ ನಾಟಕಕ್ಕೆ ಶುಭಕರ್ ಬೆಳಪು ಸಂಗೀತ ನೀಡಿದ್ದಾರೆ , ವಿಶೇಷವಾಗಿ ಹಿರಿಯ ರಂಗ ಕರ್ಮಿ ಜಗದೀಶ್ ಶೆಟ್ಟಿ ಕೆಂಚನಕೆರೆಯವರ ರಂಗಾನುಭವ ಮತ್ತು ಸಂಪೂರ್ಣ ಮಾರ್ಗದರ್ಶನ ನಾಟಕದ ಧ್ವನಿ ಮತ್ತು ಬೆಳಕುಗಳೆರಡನ್ನೂ ಯಶಸ್ವಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.

ಈ ನಾಟಕದಲ್ಲಿ ಗಮ್ಮತ್ ಕಲಾವಿದೆರ್ ತಂಡದ ಬಹುಮುಖ ಪ್ರತಿಭೆಗಳಾದ ರಂಗಕೇಸರಿ ಚಿದಾನಂದ ಪೂಜಾರಿ, ಸುವರ್ಣ ಸತೀಶ್ ಪೂಜಾರಿ, ದೀಪ್ತಿ ದಿನರಾಜ್ , ದೀಕ್ಷಾ ರೈ , ವಾಸು ಶೆಟ್ಟಿ, ಗಿರೀಶ್ ನಾರಾಯಣ್, ರಮೇಶ್ ಸುವರ್ಣ, ಜೇಶ್ ಬಾಯಾರ್, ಪ್ರಶಾಂತ್ ನಾಯರ್, ಮೋನಪ್ಪ ಪೂಜಾರಿ, ಸಮಂತಾ ಗಿರೀಶ್ , ಗೌತಮ್ ಬಂಗೇರ, ,ಜಾನೆಟ್ ಸಿಕ್ವೇರಾ, ಸಿಂಥಿಯಾ ಮೆಂಡೋನ್ಸಾ, ರಜನೀಶ್ ಅಮೀನ್, ಜಸ್ಮಿತಾ ವಿವೇಕ್, ಸನ್ನಿಧಿ ವಿಶ್ವನಾಥ್ ಶೆಟ್ಟಿ , ಅಮಿತ್, ವಿಠ್ಠಲ್ ಪೂಜಾರಿ ಯವರ ಪಾತ್ರಗಳು ನಿಜಕ್ಕೂ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದೆ. ಇವರೊಂದಿಗೆ ತಂಡದಲ್ಲಿ ಪ್ರಪ್ರಥಮ ಬಾರಿಗೆ ಬಾಲಕಲಾವಿದರಾಗಿ ಬಣ್ಣಹಚ್ಚಿದ ದಿಯಾ ವಲ್ಲಭನ್, ಶೈವಿ ಪ್ರಭಾಕರ ಪೂಜಾರಿ, ತನ್ವಿಕ್ ವಿವೇಕ್, ಗಹನ್ ಧನಂಜಯ್, ದಿವಿತ್ ದಿನ್ರಾಜ್ ಶೆಟ್ಟಿ, ದಕ್ಷಿತ್ ಪ್ರೇಮಜಿತ್ ವಿಶೇಷವಾಗಿ ಗಮನ ಸೆಳೆದರು.

ವಾಸ್ತವ ಕಾಲಕ್ಕೆ ಅನ್ವಯವಾಗುವ ಪೋಷಕರ ಕಡೆಗಣಿಸುವ ಮಕ್ಕಳು ಮತ್ತು ಸ್ತ್ರೀ ಶೋಷಣೆ ವಿಚಾರಗಳ ಮೇಲೆ ಆಧಾರಿತವಾಗಿರುವ ಈ ನಾಟಕದಲ್ಲಿ ನವಿರಾದ ಹಾಸ್ಯ ಹಾಗೂ ವಾಸ್ತವ ಕಥಾ ಹಂದರವನ್ನು ಒಳಗೊಂಡಿದ್ದು,ಹಾಸ್ಯ ಕಲಾವಿದರು ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುವಲ್ಲಿ ಯಶಸ್ವಿಯಾದರೆ , ತಂಡದ ಹಿರಿಯ ಪೋಷಕ ಕಲಾವಿದರು ಪ್ರೇಕ್ಷಕರನ್ನು ತಮ್ಮ ನೈಜ ಕರುಣಾಭಾವ ಅಭಿನಯದ ಮೂಲಕ ಮಂತ್ರ ಮುಗ್ದಗೊಳಿಸಿದ್ದು ನಿಜ.

ಪ್ರತಿ ವರ್ಷವೂ ಗಮ್ಮತ್ ಕಲಾವಿದೆರ್ ಯುಎಈ, ತಮ್ಮ ತಂಡ ದ ನಿಸ್ವಾರ್ಥ ಕಲಾಸೇವೆ ಮಾಡುವ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಗಮನಾರ್ಹ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದು , ಈ ವರ್ಷದ ಸನ್ಮಾನಕ್ಕೆ ಪಾತ್ರರಾದವರು ತಂಡದ ಹಿರಿಯ ಕಲಾವಿದರಾದ ಜೇಶ್ ಬಾಯಾರು ಹಾಗೂ ಲವಿನಾ ಫರ್ನಾಂಡೀಸ್. ತಮ್ಮ ಕಲಾ ಜೀವನದ ಸಾಧನೆಯ ಗುರುತಿಗಾಗಿ ಗಮ್ಮತ್ ಕಲಾವಿದೆರ್ ಕೊಡಮಾಡುವ ಪ್ರತಿಷ್ಠಿತ “ಕೊಲ್ಲಿ ರಾಷ್ಟ್ರದ ಕಲಾ ಸೇವಾ ಗೌರವ” ಸನ್ಮಾನವನ್ನು ಪಡೆದುಕೊಂಡರು. ಅತಿಥಿಗಳಾದ ಸುಪ್ರಸಿದ್ದ ಹಾಸ್ಯ ನಟ – ನಾಟಕ ರಚನೆಕಾರ ಸಂದೀಪ್ ಶೆಟ್ಟಿ ರಾಯಿ ಮತ್ತು ಹಿರಿಯ ರಂಗಕರ್ಮಿ ಜಗದೀಶ್ ಶೆಟ್ಟಿ ಕೆಂಚನಕೆರೆಯವರು ಗಮ್ಮತ್ ಕಲಾವಿದೆರ್ ವತಿಯಿಂದ ಗೌರವ ಸನ್ಮಾನವನ್ನು ಸ್ವೀಕರಿಸಿದರು.

ಅಷ್ಟೇ ಅಲ್ಲದೇ ಗಮ್ಮತ್ ಕಲಾವಿದೆರ್ ತಂಡ ಬಹು ವರುಷಗಳಿಂದ ಕಲಾಪೋಷಕರ ಸರ್ವ ಸಹಕಾರದೊಂದಿಗೆ ಸಮಾಜದ ಅಶಕ್ತರಿಗೆ ದೇಣಿಗೆ ನೀಡುವ ಸಮಾಜಮುಖಿ ಕೆಲಸ ಮಾಡುತ್ತಿದ್ದು ಈ ಬಾರಿಯೂ ಊರಿನ ವೃದ್ದಾಶ್ರಮವೊಂದಕ್ಕೆ ಉಳಿತಾಯವಾದ ಉತ್ತಮ ಮೊತ್ತವನ್ನು ನೀಡಲಿದೆ.

ಈ ಸಂದರ್ಭದಲ್ಲಿ ರಾಜ್ ಸೌಂಡ್ಸ್ ಎಂಡ್ ಲೈಟ್ಸ್ ತಂಡದ ವಿನೀತ್ ಕುಮಾರ್ ನಾಯಕ ನಟನಾಗಿ ಅಭಿನಯಿಸುವ, ರಾಹುಲ್ ಅಮೀನ್ ನಿರ್ದೇಶನದ ಈ ವರ್ಷದ ಬಹು ನಿರೀಕ್ಷಿತ ತುಳು ಚಲನಚಿತ್ರ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ಯ ಕರಪತ್ರದ ಅನಾವರಣ ಕಾರ್ಯಕ್ರಮ ನಡೆಯಿತು, ವಿಶೇಷವೆಂದರೆ ಈ ಚಿತ್ರದಲ್ಲಿ ಗಮ್ಮತ್ ಕಲಾವಿದೆರ್ ತಂಡದ 5 ಮಂದಿ ಪ್ರತಿಭಾನ್ವಿತ ಕಲಾವಿದರಾದ ಚಿದಾನಂದ ಪೂಜಾರಿ, ಡೋನಿ ಕೊರೆಯ, ಆಶಾ ಕೊರೆಯ, ದೀಪ್ತಿ ದಿನರಾಜ್ ಮತ್ತು ಗಿರೀಶ್ ನಾರಾಯಣ್ ಅಭಿನಯಿಸಿದ್ದು ತಂಡದ ಮುಕುಟಕ್ಕೆ ಮತ್ತೊಂದು ಗರಿ ಎನಿಸಿಕೊಂಡಿದೆ.

ಈ ಸಂದರ್ಭದಲ್ಲಿ ತಂಡದ ಗೌರವ ಪೋಷಕರಾದ ಹರೀಶ್ ಬಂಗೇರ ರವರು ನಾಟಕದ ಯಶಸ್ವಿ ಪ್ರದರ್ಶನಕ್ಕೆ ಕಾರಣಕರ್ತರಾದ ಸರ್ವ ಕಲಾಪೋಷಕರ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಿದರು, ಮುಂದೆಯೂ ತುಳು , ಭಾಷೆ ಮತ್ತು ತುಳುನಾಡಿನ ಸಂಸ್ಕೃತಿಯ ಉಳಿವಿಗಾಗಿ ಈ ಭಾಗದಲ್ಲಿ ಅವಿರತ ಕಾರ್ಯಕ್ರಮಗಳ ಸಹಯೋಗವನ್ನು ಯು ಎ ಇ ಯ ಸರ್ವ ಧರ್ಮದ ಕಲಾಪೋಷಕರಿಂದ ಬಯಸಿದರು.

ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಮತ್ತು ಶ್ರೀ ರವೀಂದ್ರ ಪ್ರಭು ರವರ ಹಿನ್ನಲೆ ಗಾಯನ, ತುಳುನಾಡ ರಂಗ ಚಾಣಕ್ಯ ವಿಜಯ ಕುಮಾರ್ ಕೊಡಿಯಾಲಬೈಲ್ ಮತ್ತು ರಜನೀಶ್ ಅಮೀನ್ ರವರ ಪದ್ಯ – ಸಾಹಿತ್ಯ, ಗುರು ಬಾಯರ್ ರವರ ಹಿನ್ನಲೆ ಸಂಗೀತ ನಿಜಕ್ಕೂ ನೆರೆದ ಪ್ರೇಕ್ಷಕರ ಮನಸೂರೆಗೊಳಿಸಿದೆ. ಸಂಪೂರ್ಣ ಕಾರ್ಯಕ್ರಮದ ನಿರೂಪಣೆ ಆರತಿ ಅಡಿಗರವರ ಧ್ವನಿಯೊಂದಿಗೆ ಯಶಸ್ವಿಯಾಯಿತು.

ತಂಡದ ಗೌರವ ಪೋಷಕರಾದ ಹರೀಶ್ ಬಂಗೇರ ಮಾಲಕತ್ವ ದ ದುಬೈ ಸೋರ್ಸ್ ಸಂಸ್ಥೆಯಿಂದ ಮೂಡಿಬಂದ ಅತಿ ವಿನೂತನ ರಂಗ ಸಜ್ಜಿಕೆ ಮತ್ತು ಪ್ರಮೋದ್ ಕುಮಾರ್ ರವರ ಅಚ್ಚುಕಟ್ಟಾದ ಧ್ವನಿ ಮತ್ತು ಬೆಳಕು ನಾಟಕದ ಸೊಭಗನ್ನು ಇನ್ನಷ್ಟು ವೈಭವೀಕರಿಸುವಲ್ಲಿ ಯಶಸ್ವಿಯಾಯಿತು.

ವರದಿ: ಗಿರೀಶ್ ನಾರಾಯಣ್ (ಪ್ರಧಾನ ಕಾರ್ಯದರ್ಶಿ, ಗಮ್ಮತ್ ಕಲಾವಿದೆರ್ ಯು.ಎ.ಇ)

 

Comments are closed.