
ಹೊಸದಿಲ್ಲಿ: ಬಿಸಿಸಿಐನ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರೂ ಹೆಚ್ಚುವರಿ ಹಣ ಗಳಿಸಲು ಕೆಲ ಫ್ಯಾಂಟಸಿ ಅಪ್ಲಿಕೇಷನ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಸೌರವ್ ಗಂಗೂಲಿ ಅವರ ನಡೆಯನ್ನು ಇತಿಹಾಸಕಾರ ರಾಮಚಂದ್ರ ಗುಹಾ ತೀವ್ರವಾಗಿ ಖಂಡಿದ್ದಾರೆ.
“ದೊಡ್ಡ ನಿಷೇಧವಲ್ಲ; ಅದು ನಿಷೇಧವೇ..ಫ್ಯಾಂಟಸಿ ಆನ್ಲೈನ್ ಗೇಮ್ ಅನ್ನು ಪ್ರತಿನಿಧಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಇಂದಿನ ದಿನಗಳಲ್ಲಿ ನೀವು ನೊಡಿ. ಹಣಕ್ಕಾಗಿ ಭಾರತೀಯ ಕ್ರಿಕೆಟಿಗರಲ್ಲಿನ ಈ ರೀತಿಯ ದುರಾಸೆ ಆಘಾತಕಾರಿ, ” ಎಂದು ಸುಪ್ರೀಂ ಕೋರ್ಟ್ ನೇಮಿತ ಕ್ರಿಕೆಟ್ ಆಡಳಿತ ಮಂಡಳಿ ಮಾಜಿ ಸದಸ್ಯರೂ ಆಗಿರುವ ಗುಹಾ ಹೇಳಿದರು.
“ನಾನು ಕಾಬೂಲ್ಗೆ ತೆರಳಿ ಅಫ್ಘಾನಿಸ್ತಾನ ಕ್ರಿಕೆಟಿಗರಿಗೆ ತರಬೇತಿ ನಿಡುವುದನ್ನು ಖಷಿ ಪಡುತ್ತೇನೆ ಹಾಗೂ ಕ್ರಿಕೆಟ್ಗೋಸ್ಕರ ಎಲ್ಲಿಗೇ ಬೇಕಾದರೂ ತೆರಳುತ್ತೇನೆ ಆದರೆ, ದುಡ್ಡಿಗಲ್ಲ ಎಂದು ‘ದಿ ಮೋಸ್ಟ್ ಟೆಲ್ಲಿಂಗ್ ಸ್ಟೋರಿ’ ನನ್ನ ಪುಸ್ತಕದಲ್ಲಿ ಬಿಷನ್ ಸಿಂಗ್ ಬೇಡಿ ಹೇಳಿರುವ ಮಾತುಗಳನ್ನು ಇಲ್ಲಿ ಸ್ಮರಿಸಬಹುದು. ಸ್ವಲ್ಪ ಹೆಚ್ಚಿನ ದುಡ್ಡಿಗಾಗಿ ಸೌರವ್ ಗಂಗೂಲಿ ಏಕೆ ಹೀಗೆ ಮಾಡುತ್ತಿದ್ದಾರೆ? ಮಂಡಳಿಯ ಅಧ್ಯಕ್ಷರೇ ಈ ರೀತಿ ವರ್ತಿಸಿದರೆ ನೈತಿಕ ಮಾನದಂಡಗಳು ಕುಸಿಯುತ್ತವೆ,” ಎಂದು ರಾಮಚಂದ್ರ ಗುಹಾ ವಿಷಾದ ವ್ಯಕ್ತಪಡಿಸಿದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಪಾರದರ್ಶಕತೆಯನ್ನು ತರಲು 2017ರಲ್ಲಿ ಸುಪ್ರೀ ಕೋರ್ಟ್ ನೇಮಿತ ಕ್ರಿಕೆಟ್ ಆಡಳಿತ ಮಂಡಳಿಯ ಸದಸ್ಯರಾಗಿ ರಾಮಂಚಂದ್ರ ಗುಹಾ ಆಯ್ಕೆಯಾಗಿದ್ದರು. ಇದಾದ ಕೇವಲ ಆರು ತಿಂಗಳುಗಳಲ್ಲೇ ಅವರು ವೈಯಕ್ತಿಕ ಕಾರಣಗಳಿಂದ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಪ್ರಸ್ತುತ ಬಿಸಿಸಿಐನಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ರಾಮಚಂದ್ರ ಗುಹಾ ಬೆಳಕು ಚೆಲ್ಲಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರು ರಾಷ್ಟ್ರೀಯ ಕ್ರಿಕೆಟ್ ಮಡಳಿಯಲ್ಲಿ ಸ್ವಜನಪಕ್ಷಪಾತವನ್ನು ಪರಿಣಾಮಕಾರಿಯಾಗಿ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಮತ್ತೊಂದು ಮುಖ್ಯ ವಿಷಯದ ಬಗ್ಗೆ ಮಾತನಾಡಿದ ಗುಹಾ, ಸದ್ಯದ ಸ್ಥಿತಿಯಲ್ಲಿ ರಣಜಿ ಕ್ರಿಕೆಟಿಗರು ಸರಿಯಾದ ಸಮಯದಲ್ಲಿ ಬಾಕಿ ಹಣವನ್ನು ಪಡೆಯುತ್ತಿಲ್ಲ ಎಂದು ಆರೋಪಿಸಿದರು. ನಿರೀಕ್ಷಿತ ಸುಧಾರಣೆಗಳನ್ನು ಬಿಸಿಸಿಐ ಇನ್ನೂ ಜಾರಿಗೆಗೊಳಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ಎನ್ ಶ್ರೀನಿವಾಸನ್ ಹಾಗೂ ಅಮಿತ್ ಶಾ ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ, ರಾಜ್ಯ ಕ್ರಿಕೆಟ್ ಮಡಳಿಗಳನ್ನು ಕೂಡ ಕೆಲವೊಬ್ಬರ ಮಗಳು ಅಥವಾ ಅವರ ಸಂಬಂಧಿಕರು ನಡೆಸುತ್ತಿದ್ದಾರೆ. ಮಂಡಳಿಯು ಒಳಸಂಚು ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗಿದೆ ಮತ್ತು ರಣಜಿ ಟ್ರೋಫಿ ಆಟಗಾರರಿಗೆ ಬಾಕಿ ಪಾವತಿಸುವಲ್ಲಿ ವಿಳಂಬ ಮಾಡುತ್ತಿದೆ. ನಿರೀಕ್ಷಿಸಿದ ಸುಧಾರಣೆಗಳನ್ನು ಬಿಸಿಸಿಐ ಇನ್ನೂ ಜಾರಿಗೆ ತಂದಿಲ್ಲ,” ಎಂದು ರಾಮಚಂದ್ರ ಗುಹಾ ಮಿಡ್ ಡೇಗೆ ತಿಳಿಸಿದ್ದಾರೆ.
Comments are closed.