ಕ್ರೀಡೆ

ಟೀಂ ಇಂಡಿಯಾ ಆಟಗಾರ ಕೇದಾರ್ ಜಾಧವ್ ಗಾಯದ ಸಮಸ್ಯೆ – ಮೇ 23ರೊಳಗೆ ಬಿಸಿಸಿಐ ಅಂತಿಮ ನಿರ್ಧಾರ

Pinterest LinkedIn Tumblr


ಮುಂಬೈ: ಟೀಂ ಇಂಡಿಯಾ ಆಟಗಾರ ಕೇದಾರ್ ಜಾಧವ್ ಗಾಯದ ಸಮಸ್ಯೆ ಬಗ್ಗೆ ಮೇ 23ರ ಒಳಗೆ ಅಂತಿಮ ತೀರ್ಮಾನ ಕೈಗೊಳ್ಳಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ.

ವಿಶ್ವಕಪ್‍ಗೆ ಈಗಾಗಲೇ ಆಯ್ಕೆ ಮಾಡಿರುವ 15 ಆಟಗಾರರ ಪಟ್ಟಿಯಲ್ಲಿ ಬದಲಾವಣೆ ಮಾಡಲು ಮೇ 23ರ ವರೆಗೂ ಅವಕಾಶ ಇದ್ದು, ಪರಿಣಾಮ ಅಲ್ಲಿಯವರೆಗೂ ಜಾಧವ್ ಅವರ ಗಾಯದ ಸಮಸ್ಯೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಜಾಧವ್ ಅವರ ಗಾಯದ ಸಮಸ್ಯೆ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಅವರು ಈಗಾಗಲೇ ಮಾಹಿತಿ ಪಡೆದಿದ್ದು, ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಕಳೆದ ಭಾನುವಾರ ನಡೆದ ಕಿಂಗ್ಸ್ ಇಲೆವೆನ್ ತಂಡದ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಜಾಧವ್ ಅವರ ಎಡ ಭುಜಕ್ಕೆ ಗಾಯವಾಗಿತ್ತು. ಪರಿಣಾಮ ಅವರನ್ನು ಟೂರ್ನಿಯ ಮುಂದಿನ ಪಂದ್ಯಗಳಿಂದ ಕೈಬಿಡಲಾಗಿತ್ತು. ಈ ವೇಳೆ ಜಾಧವ್ ಅವರ ವಿಶ್ವಕಪ್ ಜರ್ನಿ ಅಂತ್ಯವಾಗಿದೆ ಎಂದೇ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ ಆ ಬಳಿಕ ಚೆನ್ನೈ ತಂಡ ಈ ಬಗ್ಗೆ ಸ್ಪಷ್ಟನೆ ನೀಡಿ ಗಂಭೀರ ಗಾಯವಾಗಿಲ್ಲ ಎಂದು ತಿಳಿಸಿತ್ತು.

ಒಂದೊಮ್ಮೆ ಮೇ 23ರ ವೇಳೆಗೆ ಜಾಧವ್ ಫಿಟ್ ಆಗದಿದ್ದರೆ ಆಯ್ಕೆ ಸಮಿತಿ ಪರ್ಯಾಯ ಆಟಗಾರರನ್ನು ಆಯ್ಕೆ ಮಾಡುತ್ತದೆ. ಸದ್ಯ ಸ್ಟಂಡ್ ಬೈ ಆಟಗಾರರ ಪಟ್ಟಿಯಲ್ಲಿ ರಿಷಬ್ ಪಂತ್, ಅಂಬಾಟಿ ರಾಯುಡು, ಅಕ್ಷರ್ ಪಟೇಲ್, ನವದೀಪ್ ಸೈನಿ, ಇಶಾಂತ್ ಶರ್ಮಾ ಅವರ ಹೆಸರಿದೆ. ಉಳಿದಂತೆ ನೆಟ್ ಬೌಲರ್ ಗಳ ಹೆಸರಿನಲ್ಲಿ ಸೈನಿ ಹೆಸರು ಇರುವುದರಿಂದ ವಿಶ್ವಕಪ್ 15 ಆಟಗಾರರರೊಂದಿಗೆ ಅವರು ಇಂಗ್ಲೆಂಡ್‍ಗೆ ಪ್ರಯಾಣಿಸಲಿದ್ದಾರೆ. ಇವರೊಂದಿಗೆ ದೀಪಕ್ ಚಹರ್, ಖಲೀಲ್ ಅಹ್ಮದ್, ಅವೇಶ್ ಖಾನ್ ಅವರು ವಿಶ್ವಕಪ್ ತಂಡದೊಂದಿಗೆ ತೆರಳಲಿದ್ದಾರೆ. ಟೀಂ ಇಂಡಿಯಾ ಮೇ 22ರಂದು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದ್ದು, ಜೂನ್ 5 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

Comments are closed.