ಕ್ರೀಡೆ

ಟೆಸ್ಟ್‌ ಸರಣಿ: ಭಾರತ ತಂಡಕ್ಕೆ ಮರಳಿದ ರಾಜ್ಯದ ಕೆಎಲ್ ರಾಹುಲ್‌

Pinterest LinkedIn Tumblr
Karnataka K L Rahul in action against Haryana on day two in Ranji trophy match at SDNR Wadiyar Stadium in Mysuru on Friday. Photo/ Prashanth HG
Karnataka K L Rahul 

ನವದೆಹಲಿ: ಭಾರತ–ಇಂಗ್ಲೆಂಡ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯಕ್ಕೆ ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್‌ ಶಿರ್ಖೆ ತಿಳಿಸಿದ್ದಾರೆ.

ಸ್ನಾಯು ಸೆಳೆತ ಸಮಸ್ಯೆಯಿಂದ ಬಳಲಿದ್ದ ರಾಹುಲ್‌ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನಕ್ಕೆ ಬಹುದಿನಗಳಿಂದ ತಂಡದಿಂದ ಕೈಬಿಡಲಾಗಿದ್ದ ಅನುಭವಿ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ರನ್‌ ಬರ ಅನುಭವಿಸಿದ್ದ ಗಂಭೀರ್‌ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದರು.

ಮೊದಲ ಪಂದ್ಯದಲ್ಲಿ ಭಾರತ ಸೋಲಿನ ಭೀತಿ ಎದುರಿಸಿದ್ದ ಕಾರಣ ಮುಂದಿನ ಪಂದ್ಯದಲ್ಲಿ ತಂಡದ ಬ್ಯಾಟಿಂಗ್‌ ವಿಭಾಗ ಬಲಪಡಿಸುವ ಸಲುವಾಗಿ ಗಂಭೀರ್‌ಗೆ ಕೋಕ್‌ ನೀಡಿ ರಾಹುಲ್‌ಗೆ ಮಣೆಹಾಕುವ ಸಾಧ್ಯತೆಯಿದೆ.

ಚಿಕಿತ್ಸೆ ನಂತರ ಕರ್ನಾಟಕ ಪರ ರಣಜಿ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರಾಹುಲ್‌ ರಾಜಸ್ಥಾನ ವಿರುದ್ಧದ ಎರಡೂ ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 76 ಹಾಗೂ 106 ರನ್‌ ಗಳಿಸುವುದರೊಡನೆ ಫಿಟ್ನೆಸ್‌ ಸಾಬೀತುಪಡಿಸಿ ಆಯ್ಕೆಗಾರರ ಗಮನ ಸೆಳೆದಿದ್ದರು.

ಇಂದು ತಂಡ ಕೂಡಿಕೊಳ್ಳಲಿರುವ ರಾಹುಲ್‌, ನವೆಂಬರ್‌ 17 ರಂದು ವಿಶಾಖಪಟ್ಟಣದಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಆಡಿದರೆ ಗಂಭೀರ್‌ ಹೊರಗುಳಿಯಬೇಕಾಗುತ್ತದೆ.

Comments are closed.