
ನವದೆಹಲಿ: ಹಲವು ವಿವಾದದ ಸುದ್ದಿಗಳ ನಂತರ ಈಗ ರೈತರ ವಿಚಾರಕ್ಕೆ ಸಂಬಂಧಿಸಿ ರೈತರನ್ನೇ ಭಯೋತ್ಪಾದಕರಿಗೆ ಹೋಲಿಸಿ ನಟಿ ಕಂಗನಾ ಮತ್ತೆ ಗಮನ ಸೆಳೆದಿದ್ದಾರೆ.. ಕಾಯ್ದೆ ವಿರೋಧಿಸಿ ದೇಶದಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಇತ್ತ ಟ್ವೀಟ್ ಮೂಲಕ “ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವವರು ಭಯೋತ್ಪಾದರು” ಎಂದು ನಟಿ ಜರಿದಿದ್ದಾರೆ.
ಕೇಂದ್ರ ಕೃಷಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ರೈತ ಹೋರಾಟದ ವಿರುದ್ಧ ಸರಣಿ ಟ್ವೀಟ್ ಮೂಲಕ ಟೀಕಾಸ್ತ್ರ ಪ್ರಯೋಗಿಸಿರುವ ನಟಿ ಕಂಗನಾ, “ಪ್ರಧಾನಿ ಮೋದಿಜೀ, ನಿದ್ರಿಸುತ್ತಿರುವವರನ್ನು ಎಚ್ಚರಗೊಳಿಸಬಹುದು. ತಪ್ಪು ತಿಳವಳಿಕೆ ಇದ್ದರೇ ಅದನ್ನು ಪರಿಹರಿಸಬಹುದು. ಆದರೆ ನಿದ್ದೆ ಮಾಡುವಂತೆ ನಟಿಸುವವರ, ಅರ್ಥ ಮಾಡಿಕೊಳ್ಳದಂತೆ ನಟಿಸುವವರರಿಗೆ ನೀವು ತಿಳಿಸಲು ಪ್ರಯತ್ನಸಿದರೆ ಏನು ಪ್ರಯೋಜನ..? ಇವರು ಅದೇ ಭಯೋತ್ಪಾದಕರು. ಸಿಎಎಯಿಂದ ಯಾರು ಪೌರತ್ವ ಕಳೆದುಕೊಳ್ಳದಿದ್ದರೂ ರಕ್ತದ ಕೋಡಿ ಹರಿಸಿದವರೇ ಇಂದು ಈ ಕೃಷಿ ಮಸೂದೆಯ ವಿರುದ್ಧವೂ ಹೋರಾಡುತ್ತಿದ್ದಾರೆ” ಎಂದಿದ್ದಾರೆ.
ಆದರೆ, ಇದೇ ಕೃಷಿ ಮಸೂದೆ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ಮಿತ್ರ ಪಕ್ಷವಾದ ಅಕಾಲಿ ದಳದ ಸಚಿವೆ ಹರ್ಸಿಮ್ರತ್ ಕೌರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅತ್ತ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಬಿಲ್ ಪಾಸ್ ಆಗುತ್ತಲೇ ಇತ್ತ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯ ಕಾವು ದುಪ್ಪಟ್ಟಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನೆ ತಾರಕಕ್ಕೇರಿದೆ. ಪ್ರತಿಭಟನೆ ವೇಳೆ ಓರ್ವ ರೈತ ಸಹ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಇನ್ನೂ ಹಲವಾರು ಕೃಷಿ ಮತ್ತು ಅರ್ಥಶಾಸ್ತ್ರಜ್ಞರು ಈ ಮಸೂದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ಈ ಮಸೂದೆಗಳು ರೈತವಿರೋಧಿ ಕಾಯ್ದೆಗಳಾಗಿದ್ದು ಕಾರ್ಪೋರೇಟ್ ಕಂಪನಿಗಳ ಪರವಾಗಿವೆ. ಈ ಮಸೂದೆಗಳು ಆಹಾರ ಭದ್ರತೆಯನ್ನು ಹಾಳುಮಾಡುತ್ತವೆ. ಈ ಹಿಂದೆ ಇದ್ದ ಕನಿಷ್ಟ ಬೆಂಬಲ ಬೆಲೆಯನ್ನು ನಾಶಗೊಳಿಸಿ ದೊಡ್ಡ ವ್ಯಾಪಾರಿಗಳಿಗೆ ಲಾಭವನ್ನು ನೀಡುತ್ತವೆಯೇ ಹೊರತು ರೈತರಿಗಲ್ಲ. ಇನ್ನೂ ಚಿಲ್ಲರೆ ವ್ಯಾಪಾರಿಗಳು ಬೀದಿಪಾಲಾಗಲಿದ್ದಾರೆ. ಇದರಿಂದ ರೈತರ ಶೋಷಣೆಯಾಗಲಿದೆ, ಜೊತೆಗೆ ಬೆಲೆ ನಿಗದಿಗಾಗಿ ಯಾವುದೇ ಕಾರ್ಯವಿಧಾನವೂ ಈ ಮಸೂದೆಯಲ್ಲಿ ಇಲ್ಲ” ಎಂದು ಆಕ್ಷೇಪಿಸಿದ್ದಾರೆ.
Comments are closed.