
ಮುಂಬೈ: ನಟ ಪ್ರಕಾಶ್ ರೈ ಕಂಗನಾಗೆ ಸಂಬಂಧಿಸಿದ ಟ್ವೀಟ್ವೊಂದು ಇಂದು ಭಾರೀ ಸದ್ದು ಮಾಡಿದೆ.
ನಟಿ ಕಂಗನಾ ರಣಾವತ್ ಕಳೆದ ಕೆಲ ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಕಂಗನಾ ಬಾಲಿವುಡ್ನ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ತಮ್ಮ ನೇರನುಡಿಗಳಿಂದ ಎದುರಾಳಿಗಳ ಬೆವರಿಳಿಸಿದ್ದಾರೆ. ಸದ್ಯ ಮಹಾರಾಷ್ಟ್ರ ಸರ್ಕಾರ ಹಾಗೂ ಕಂಗನಾ ನಡುವೆ ಸಮರ ಶುರುವಾಗಿದೆ. ಈ ಮಧ್ಯೆ ಬಹುಭಾಷಾ ನಟ ಪ್ರಕಾಶ್ ರೈ, ಒಂದು ಮೀಮ್ ಅನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡು, ಕಂಗನಾ ಕಾಲೆಳೆದಿದ್ದಾರೆ!
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನವನ್ನು ಆಧರಿಸಿದ ‘ಮಣಿಕರ್ಣಿಕಾ’ ಸಿನಿಮಾವನ್ನು ಕಂಗನಾ ಮಾಡಿದ್ದರು. ಬಹುಶಃ ಆದ್ದರಿಂದಲೇ ಅವರು ಲಕ್ಷ್ಮೀಬಾಯಿ ಆಗಿಬಿಟ್ಟರೇ ಎಂದು ಪ್ರಶ್ನೆ ಮಾಡುವಂತಹ ಪೋಸ್ಟ್ ಇದಾಗಿದೆ. ‘ಒಂದು ಸಿನಿಮಾ ಮಾಡಿ ಕಂಗನಾ, ತಾನು ಲಕ್ಷ್ಮೀ ಬಾಯಿ ಎಂದುಕೊಂಡರೇ..? ಹಾಗಾದರೆ, ದೀಪಿಕಾ ಪಡುಕೋಣೆ ಅವರು ಪದ್ಮಾವತ್, ಹೃತಿಕ್ ರೋಷನ್ ಅವರು ಅಕ್ಬರ್, ಶಾರುಖ್ ಖಾನ್ ಅವರು ಅಶೋಕ, ಅಜಯ್ ದೇವ್ಗನ್ ಅವರು ಭಗತ್ ಸಿಂಗ್, ಆಮೀರ್ ಖಾನ್ ಅವರು ಮಂಗಲ್ ಪಾಂಡೇ, ವಿವೇಕ್ ಓಬೆರಾಯ್ ಅವರು ನರೇಂದ್ರ ಮೋದಿಯೇ…’ ಎಂದು ಟ್ರೋಲ್ ಮಾಡುವಂತೆ ಇದೆ ಆ ಮೆಮೆ. ಅದನ್ನೇ ಟ್ವೀಟ್ ಮಾಡಿರುವ ಪ್ರಕಾಶ್ ರೈ, ಎಂದಿನ #justasking ಹ್ಯಾಷ್ಟ್ಯಾಗ್ ಹಾಕಿದ್ದಾರೆ. ಪ್ರಕಾಶ್ ಅವರ ಈ ಟ್ವೀಟ್ಗೆ ಸಾಕಷ್ಟು ಪರ-ವಿರೋಧ ಪ್ರತಿಕ್ರಿಯೆಗಳು ಸಿಕ್ಕಿವೆ.
ನಟ ಸುಶಾಂತ್ ಸಿಂಗ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ ಇದೆ ಎಂದು ಕಂಗನಾ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ದೊಡ್ಡ ದೊಡ್ಡ ಸ್ಟಾರ್ಗಳ ವಿರುದ್ಧ ನೇರವಾಗಿ ಹೇಳಿಕೆ ನೀಡಿ, ಸುದ್ದಿಯಾಗಿದ್ದರು. ಆನಂತರ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧವು ಕಂಗನಾ ವಾಗ್ದಾಳಿ ಮುಂದುವರಿಸಿದ್ದರು. ಆ ಮೂಲಕ ದೇಶಾದ್ಯಂತ ಕಂಗನಾ ಸುದ್ದಿಯಲ್ಲಿದ್ದಾರೆ.
Comments are closed.