ಮನೋರಂಜನೆ

ಬಾಲಿವುಡ್ ನಟ ಸುಶಾಂತ್‌ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ನಾಪತ್ತೆ!

Pinterest LinkedIn Tumblr

ಜೂ.14ರಂದು ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿದ್ದರು ಖ್ಯಾತ ನಟ ಸುಶಾಂತ್‌ ಸಿಂಗ್‌ ರಜಪೂತ್‌. ಅವರ ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ದಿನದಿಂದ ದಿನಕ್ಕೆ ಅನುಮಾನ ಹೆಚ್ಚಾಗುತ್ತಿದ್ದು, ಈಗ ಅವರು ಪೊಲೀಸರ ಕೈಗೆ ಸಿಗದಂತೆ ತಲೆ ಮರೆಸಿಕೊಂಡಿದ್ದಾರೆ!

ದೂರು ದಾಖಲಿಸಿದ ಸುಶಾಂತ್‌ ತಂದೆ
ತಾವು ಸುಶಾಂತ್‌ರ ಪ್ರೇಯಸಿ ಎಂದು ಕೆಲವೇ ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದರು ರಿಯಾ. ಅಲ್ಲದೆ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾಗೂ ಮನವಿ ಸಲ್ಲಿಸಿದ್ದರು. ಆದರೆ ಈಗ ರಿಯಾ ವಿರುದ್ಧವೇ ಪ್ರಕರಣ ದಾಖಲಾಗಿದೆ. ಇದು ಅವರ ನಿದ್ದೆ ಕೆಡಿಸಿದೆ. ಇಷ್ಟು ದಿನ ಸುಮ್ಮನಿದ್ದ ಸುಶಾಂತ್ ತಂದೆ ಈಗ ಪಾಟ್ನಾದಲ್ಲಿ ರಿಯಾ ವಿರುದ್ಧ ದೂರು ಸಲ್ಲಿಸಿದ್ದಾರೆ.

ಮುಂಬೈನಲ್ಲಿ ರಿಯಾ ಮಿಸ್ಸಿಂಗ್‌!
ಸುಶಾಂತ್‌ ಸಿಂಗ್‌ ರಜಪೂತ್‌ ತಂದೆ ಕೆ.ಕೆ. ಸಿಂಗ್‌ ಅವರು ದೂರು ನೀಡಿದ ಪರಿಣಾಮ, ಪಾಟ್ನಾ ಪೊಲೀಸರು ರಿಯಾ ಅವರನ್ನು ಹುಡುಕಿಕೊಂಡು ಮುಂಬೈಗೆ ಬಂದಿದ್ದಾರೆ. ಆದರೆ ಈ ವೇಳೆ ಪೊಲೀಸರ ಕೈಗೆ ರಿಯಾ ಸಿಕ್ಕಿಲ್ಲ. ಅವರನ್ನು ಹುಡುಕಿಕೊಂಡು ಮನೆಗೆ ಹೋದರೆ ಅಲ್ಲಿಯೂ ಅವರ ಸುಳಿವಿಲ್ಲ. ಒಟ್ಟಿನಲ್ಲಿ ಪಾಟ್ನಾ ಪೊಲೀಸರ ಸಂಪರ್ಕಕ್ಕೆ ಬರುವುದನ್ನು ರಿಯಾ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರ ಈ ನಡೆ ಅನುಮಾನ ಮೂಡಿಸಿದೆ.

ರಿಯಾ ಮೇಲಿನ ಆರೋಪಗಳೇನು?
ರಿಯಾ ಚಕ್ರವರ್ತಿ ಮತ್ತು ಸುಶಾಂತ್‌ ಸಿಂಗ್‌ ರಜಪೂತ್‌ ನಡುವೆ ತುಂಬ ಆಪ್ತತೆ ಇತ್ತು ಎಂಬುದಕ್ಕೆ ಹಳೇ ಫೋಟೋಗಳೇ ಸಾಕ್ಷಿ ಒದಗಿಸುತ್ತಿವೆ. ಸುಶಾಂತ್‌ರ ಬ್ಯಾಂಕ್‌ ಖಾತೆಯಿಂದ ರಿಯಾಗೆ ಸಾಕಷ್ಟು ಹಣ ವರ್ಗಾವಣೆ ಆಗಿದೆ ಎಂದು ಸುಶಾಂತ್ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಸುಶಾಂತ್‌ ಆತ್ಮಹತ್ಯೆ ಮಾಡಿಕೊಳ್ಳಲು ರಿಯಾ ಪ್ರೇರಣೆ ನೀಡಿದ್ದರು ಎಂಬ ಆರೋಪವನ್ನೂ ಮಾಡಲಾಗಿದೆ. ಪಾಟ್ನಾದಲ್ಲಿ ದಾಖಲಾಗಿರುವ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವಂತೆ ಸುಪ್ರೀಮ್‌ ಕೋರ್ಟ್‌ನಲ್ಲಿ ರಿಯಾ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ದುಬಾರಿ ಲಾಯರ್‌ ಮೊರೆ ಹೋದ ರಿಯಾ
ದೇಶದ ಅತಿ ದುಬಾರಿ ಲಾಯರ್‌ಗಳಲ್ಲಿ ಒಬ್ಬರಾದ ಸತೀಶ್‌ ಮಾನೆಶಿಂದೆ ಅವರನ್ನು ರಿಯಾ ಚಕ್ರವರ್ತಿ ನೇಮಿಸಿಕೊಂಡಿದ್ದಾರೆ. ಈ ಹಿಂದೆ ಸಲ್ಮಾನ್‌ ಖಾನ್‌, ಸಂಜಯ್ ದತ್‌ ಮುಂತಾದವರ ಕೇಸ್‌ಗಳನ್ನು ವಾದ ಮಾಡಿದ್ದು ಇದೇ ಸತೀಶ್‌ ಮಾನೆಶಿಂದೆ. ರಿಯಾ ಚಕ್ರವರ್ತಿ ಕೂಡ ಅವರ ಮೊರೆ ಹೋಗಿದ್ದಾರೆ. ಅಷ್ಟು ದುಬಾರಿ ಲಾಯರ್‌ಅನ್ನು ನೇಮಿಸಿಕೊಳ್ಳಲು ರಿಯಾ ಬಳಿ ಹಣ ಎಲ್ಲಿಂದ ಬಂತು ಎಂಬ ಅನುಮಾನದ ಪ್ರಶ್ನೆ ಎಲ್ಲರ ಮನದಲ್ಲೂ ಈಗ ಮೂಡುವಂತಾಗಿದೆ.

Comments are closed.