ಮನೋರಂಜನೆ

ಈದ್‌ ಆಚರಿಸಲು ದೂರ ಪ್ರಯಾಣ ಮಾಡಿದ ನವಾಜುದ್ದೀನ್ ಸಿದ್ದಿಕಿ! ಇಡೀ ಕುಟುಂಬ ಕ್ವಾರಂಟೈನ್‌ನಲ್ಲಿ!

Pinterest LinkedIn Tumblr


ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಅವರನ್ನು ನೋಡಿ ಫಾಲೋ ಮಾಡುವ ಲಕ್ಷಾಂತರ ಅಭಿಮಾನಿಗಳಿರುತ್ತಾರೆ. ಆದರೆ ಅದೇಕೋ ಗೊತ್ತಿಲ್ಲ, ಲಾಕ್‌ಡೌನ್‌ ವಿಚಾರದಲ್ಲಿ ಕೆಲವು ಸಿನಿಮಾ ಕಲಾವಿದರು ಎಡವುತ್ತಿದ್ದಾರೆ.

ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್‌ ಸಿದ್ದಿಕಿ ಈಗ ಅಂಥದ್ದೇ ಕಾರಣಕ್ಕಾಗಿ ಸುದ್ದಿ ಆಗಿದ್ದಾರೆ. ಸಿನಿಮಾ ಶೂಟಿಂಗ್‌, ಡಬ್ಬಿಂಗ್‌ ಏನೂ ಇಲ್ಲದ ಕಾರಣ ಅವರು ತಮ್ಮ ಸಂಬಂಧಿಕರ ಜೊತೆ ಈದ್‌ ಹಬ್ಬ ಆಚರಿಸುವ ಸಲುವಾಗಿ ಪ್ರಯಾಣ ಬೆಳೆಸಿದ್ದರು. ಅದೇ ಈಗ ಸಮಸ್ಯೆಗೆ ಕಾರಣ ಆಗಿದೆ. ಮನೆಮಂದಿಯೆಲ್ಲ ಕ್ವಾರಂಟೈನ್‌ನಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.

ನವಾಜುದ್ದೀನ್‌ ಸಿದ್ದಿಕಿ ಕೆಲವೇ ದಿನಗಳ ಹಿಂದೆ ಮುಂಬೈನಿಂದ ಉತ್ತರ ಪ್ರದೇಶದಲ್ಲಿ ಇರುವ ತಮ್ಮ ಹಳ್ಳಿಗೆ ತೆರಳಿದ್ದರು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಪಾಸ್‌ಗಳನ್ನು ಪಡೆದುಕೊಂಡೇ ಅವರೇ ಪ್ರಯಾಣ ಬೆಳೆಸಿದ್ದರು. ಮೇ 15ರಂದು ಅವರು ಹಳ್ಳಿ ತಲುಪಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುಜಾಫರ್‌ ನಗರ್‌ ಜಿಲ್ಲಾಡಳಿತವು ನವಾಜುದ್ದೀನ್‌ ಸಿದ್ದಿಕಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿದೆ.

ಪ್ರಯಾಣದ ವೇಳೆ 25 ಕಡೆಗಳಲ್ಲಿ ನವಾಜುದ್ದೀನ್‌ ಕುಟುಂಬಕ್ಕೆ ಸ್ಕ್ರೀನಿಂಗ್‌ ಮಾಡಲಾಗಿತ್ತು. ಈಗ ಕೊರೊನಾ ಸೋಂಕು ಪರೀಕ್ಷೆಯಲ್ಲೂ ಅದೃಷ್ಟವಶಾತ್‌ ನೆಗೆಟಿವ್‌ ವರದಿ ಬಂದಿದೆ. ಹಾಗಿದ್ದರೂ ಮುಂಜಾಗೃತಾ ಕ್ರಮವಾಗಿ ಮೇ 25ರವರೆಗೂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ನವಾಜುದ್ದೀನ್‌ ಜೊತೆ ಇಡೀ ಫ್ಯಾಮಿಲಿ ಕೂಡ ಕ್ವಾರಂಟೈನ್‌ ಆಗಬೇಕಿದೆ.

Comments are closed.