ಮನೋರಂಜನೆ

‘ಗಟ್ಟಿ ಮೇಳ’ ಧಾರಾವಾಹಿಗೆ ನಟ ವಿಜಯ್‌ ರಾಘವೇಂದ್ರ ಪ್ರವೇಶ!

Pinterest LinkedIn Tumblr


ರಿಯಾಲಿಟಿ ಶೋಗಳಲ್ಲಂತೂ ಸ್ಟಾರ್‌ ಕಲಾವಿದರದ್ದೇ ದರ್ಬಾರು. ‘ಜೀ ಕನ್ನಡ’ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್‌ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ವಿಜಯ್‌ ರಾಘವೇಂದ್ರ ಪಾಲ್ಗೊಂಡಿದ್ದರು. ಈಗ ಅವರು ಅದೇ ಚಾನಲ್‌ನ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸಿದ್ದಾರೆ.

‘ಗಟ್ಟಿಮೇಳ’ಕ್ಕೆ ವಿಜಯ್‌ ರಾಘವೇಂದ್ರ ಎಂಟ್ರಿ ನೀಡಿದ್ದಾರೆ ಎಂದ ಮಾತ್ರಕ್ಕೆ ಅವರು ಫುಲ್‌ಟೈಮ್‌ ಅದರಲ್ಲೇ ಅಭಿನಯಿಸುತ್ತಾರೆ ಎಂದೇನಿಲ್ಲ. ಎರಡು ವಿಶೇಷ ಎಪಿಸೋಡ್‌ಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಫೆ. 10 ಮತ್ತು 11ರಂದು ಆ ಸಂಚಿಕೆಗಳು ಪ್ರಸಾರ ಆಗಲಿವೆ. ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ಅವರು ಯಾವುದೋ ಕಾಲ್ಪನಿಕ ಪಾತ್ರಕ್ಕೆ ಬಣ್ಣ ಹಚ್ಚಿಲ್ಲ. ಬದಲಿಗೆ, ಸ್ವತಃ ಚಿತ್ರನಟ ವಿಜಯ್‌ ರಾಘವಂದ್ರ ಆಗಿಯೇ ಕಾಣಿಸಿಕೊಂಡಿದ್ದಾರೆ.

‘ಗಟ್ಟಿಮೇಳ’ ಧಾರಾವಾಹಿ ಕಥಾನಾಯಕಿ ಅಮೂಲ್ಯಾಳಿಗೆ ವಿಜಯ್‌ ರಾಘವೇಂದ್ರ ಎಂದರೆ ಅಪಾರ ಅಭಿಮಾನ. ಅವಳ ಆಸೆಯನ್ನು ಅರ್ಥ ಮಾಡಿಕೊಂಡ ಕಥಾನಾಯಕ ವೇದಾಂತ್‌, ತನ್ನ ಮನೆಗೆ ವಿಜಯ್‌ ರಾಘವೇಂದ್ರರನ್ನು ಆಹ್ವಾನಿಸುತ್ತಾನೆ. ಈ ವಿಶೇಷ ಸನ್ನಿವೇಶದಲ್ಲಿ ‘ಚಿನ್ನಾರಿ ಮುತ್ತ’ ಬಂದು ಹೋಗುತ್ತಾರೆ. ಇಂಥ ಹಲವು ವಿಶೇಷತೆಗಳಿಂದಾಗಿ ಈ ಧಾರಾವಾಹಿ ವೀಕ್ಷಕರನ್ನ ಸೆಳೆದುಕೊಳ್ಳುತ್ತಿದೆ.

‘ಗಟ್ಟಿಮೇಳ’ ಕಥೆಯಲ್ಲಿ ಈ ದೃಶ್ಯ ಹೈಲೈಟ್‌ ಆಗಲಿದೆ. ವೇದಾಂತ್ ಮತ್ತು ಅಮೂಲ್ಯ ಪರಸ್ಪರ ತಮ್ಮ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ವಿಜಯ್‌ ರಾಘವೇಂದ್ರ ಸಹಾಯ ಮಾಡುತ್ತಾರೆ. ಈ ಭೇಟಿಯಿಂದ ಅಮೂಲ್ಯ ಸಖತ್‌ ಖುಷಿ ಆಗುತ್ತಾಳೆ. ‘ಚಿನ್ನಾರಿ ಮುತ್ತ’ ಯಾವ ಗೆಟಪ್‌ನಲ್ಲಿ ಬಂದಿದ್ದರು, ಅವರಿಗೆ ಯಾವ ರೀತಿ ಸ್ವಾಗತ ದೊರೆಯಿತು ಎಂಬುದನ್ನು ಫೆ. 10 ಮತ್ತು 11ರ ಎಪಿಸೋಡ್‌ಗಳಲ್ಲಿ ವೀಕ್ಷಕರು ಕಣ್ತುಂಬಿಕೊಳ್ಳಬಹುದು. ಅಂದಹಾಗೆ, ವಿಜಯ್‌ ರಾಘವೇಂದ್ರ ಅಭಿನಯಿಸಿರುವ ‘ಮಾಲ್ಗುಡಿ ಡೇಸ್‌’ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

Comments are closed.