ಮನೋರಂಜನೆ

ತನ್ನ ಮುಂದಿನ ಚಿತ್ರದ ಕುತೂಹಲಕ್ಕೆ ತೆರೆ ಎಳೆದ ನಿಖಿಲ್‌ ಕುಮಾರಸ್ವಾಮಿ

Pinterest LinkedIn Tumblr


ಸೀತಾರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್‌ ಕುಮಾರ್‌ ಎಂತಹ ಸಿನಿಮಾ ಮಾಡುತ್ತಾರೆಂಬ ಕುತೂಹಲಕ್ಕೆ ಸ್ವತಃ ಅವರೇ ತೆರೆ ಎಳೆದಿದ್ದು, ತಮ್ಮ ಮುಂದಿನ ಚಿತ್ರದಲ್ಲಿ ಯುವ ಜನತೆಯನ್ನೇ ಕೇಂದ್ರೀಕರಿಸಿರುವ ಕಥೆ ಇರುತ್ತದೆ ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ಇತ್ತೀಚೆಗೆ ಪೈಲ್ವಾನ್‌ ಚಿತ್ರವನ್ನು ತೆರೆಗೆ ತಂದಿದ್ದ ಕೃಷ್ಣ ನಿರ್ದೇಶಿಸಲಿದ್ದಾರೆ.

ಈ ಬಗ್ಗೆ ಲವಲವಿಕೆ ಜತೆ ಮಾತನಾಡಿರುವ ಅವರು, ‘ನನ್ನ ಕಳೆದೆರಡು ಚಿತ್ರಗಳಿಗಿಂತ ಈ ಬಾರಿ ಕೊಂಚ ವಿಭಿನ್ನ ಕಾನ್ಸೆಪ್ಟ್‌ ಕೈಗೆತ್ತಿಕೊಂಡಿದ್ದೇವೆ. ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಬರೆಯಲಾಗಿದೆ. ಕೃಷ್ಣ ಅವರು ಈಗಾಗಲೇ ಮೂರು ವಿಭಿನ್ನ ರೀತಿಯ ಚಿತ್ರಗಳನ್ನು ಮಾಡಿದ್ದಾರೆ. ನನ್ನ ಎರಡು ಸಿನಿಮಾಗಳು ಸಹ ಬೇರೆ ಬೇರೆ ರೀತಿಯಲ್ಲೇ ಇದ್ದವು. ಹೀಗಾಗಿ ಇಬ್ಬರೂ ಸೇರಿದಾಗ ಹೊಸ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸಿ ಅದೇ ತಯಾರಿಯಲ್ಲಿದ್ದೇವೆ. ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ’ ಎಂದು ನಿಖಿಲ್‌ ಮಾಹಿತಿ ನೀಡಿದ್ದಾರೆ.

‘ಇನ್ನು ರಾಜಕೀಯದಲ್ಲಿಯೂ ಸಕ್ರಿಯ ನಾಗಿದ್ದೇನೆ. ಪ್ರತಿದಿನ ನಮ್ಮ ತಂದೆಯವರ ಜತೆ ಚರ್ಚೆ ಮಾಡುತ್ತೇನೆ. ಸದ್ಯದಲ್ಲೆ ಉತ್ತರ ಕರ್ನಾಟಕಕ್ಕೆ ಪ್ರವಾಸ ಹೋಗುವ ಬಗ್ಗೆ ಯೋಚನೆ ಮಾಡಿದ್ದೇನೆ. ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತೇನೆ’ ಎಂದಿದ್ದಾರೆ ನಿಖಿಲ್‌.

ನೈಜ ಘಟನೆ ಆಧರಿಸಿದ ಚಿತ್ರದ ಬಗ್ಗೆ ನಿರ್ದೇಶಕ ಕೃಷ್ಣ ಮಾತನಾಡಿ, ‘ಈ ಸಿನಿಮಾದ ಬಗ್ಗೆ ಈಗ ಮಾತನಾಡಲು ಇನ್ನು ಸಮಯ ಇದೆ. ನಿಖಿಲ್‌ ಮತ್ತು ನನಗೂ ವಿಶೇಷ ರೀತಿಯ ಸಿನಿಮಾ ಅಂತೂ ಆಗುತ್ತದೆ. ಜತೆಗೆ ಇದು ಸತ್ಯ ಘಟನೆಯನ್ನು ಆಧರಿಸಿದ ಕಥೆ. ಅದನ್ನು ಸಿನಿಮಾ ರೂಪಕ್ಕೆ ಇಳಿಸುತ್ತಿದ್ದೇವೆ. ನಿಖಿಲ್‌ ಅವರ ಪಾತ್ರದ ಬಗ್ಗೆ ವರ್ಕ್ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

Comments are closed.