ಬೆಂಗಳೂರು: ಸತ್ತರೂ ನಿನ್ನ ಮುಖ ನೋಡಲ್ಲ ಎಂದಿದ್ದ ಹಾಸ್ಯನಟ ರಾಜು ತಾಳಿಕೋಟೆಗೆ ಕೊನೆಗೂ ತಾಯಿಯ ಅಂತಿಮ ದರ್ಶನವಾಗಲೇ ಇಲ್ಲ. ಈ ವಿಷಯವನ್ನು ರಾಜು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.
ಬುಧವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಯಾರಿಗಾದರೂ ಕ್ಷಮೆ ಕೇಳಬೇಕೆಂದರೆ ವೇದಿಕೆ ಮೇಲೆ ನೀವು ಕೇಳಬಹುದು ಎಂದು ಹೇಳಿದ್ದರು. ಈ ವೇಳೆ ರಾಜು, ನನ್ನ ತಾಯಿ ನನ್ನ ಅಕ್ಕನಿಗಾಗಿ ವಾಚ್ ತಂದಿದ್ದರು. ನಾನು ಆ ವಾಚ್ ನೋಡುವಾಗ ನನ್ನ ಅಕ್ಕ ನೀನು ಅದನ್ನು ಹಾಳು ಮಾಡುತ್ತೀಯಾ ಎಂದು ಕಿತ್ತುಕೊಂಡಳು. ಈ ವೇಳೆ ನಾನು ಗಡಿಯಾರವನ್ನು ಬಿಸಾಡಿದೆ. ಇದರಿಂದ ಕೋಪಗೊಂಡ ನನ್ನ ತಾಯಿ ನನಗೆ ಹೊಡೆಯಲು ಬಂದರು. ಆಗ ನಾನು ಅವರ ಎರಡು ಕೈಯನ್ನು ಹಿಡಿದು ನಿಲ್ಲಿಸಿದೆ. ನನ್ನ ಕೈಯನ್ನೇ ತಡೆಯುವಷ್ಟು ನಿನಗೆ ಧೈರ್ಯವೇ? ಈಗಲೇ ಮನೆ ಬಿಟ್ಟು ಹೋಗು. ನಾನು ಸಾಯೋವರೆಗೂ ನೀನು ಮನೆಗೆ ಬರಬೇಡ ಎಂದು ನನ್ನ ತಾಯಿ ಹೇಳಿದ್ದರು.
ನನ್ನ ತಾಯಿ ಆ ರೀತಿ ಹೇಳಿದಾಗ ನಾನು ಕೂಡ ಕೋಪದಲ್ಲಿ ನೀನು ಸತ್ತರೆ ಅಲ್ಲ ಮನೆಯಲ್ಲಿ ಯಾರು ಸತ್ತರು ನಾನು ಮನೆಗೆ ಹಿಂತಿರುಗಲ್ಲ ಎಂದು ಹೇಳಿದೆ. ಬಳಿಕ ನಾನು ಪ್ರಚಾರಕ್ಕೆಂದು ಹೋದಾಗ ವ್ಯಕ್ತಿಯೊಬ್ಬರು ನಿಮ್ಮ ಮನೆಯಲ್ಲಿ ತುಂಬಾ ಜನ ಸೇರಿದ್ದಾರೆ ಎಂದು ಹೇಳಿದ್ದರು. ಆಗ ನಾನು ಏನೂ ಆಗಿರಲ್ಲ ಎಂದು ಸುಮ್ಮನಿದೆ. ಆದರೆ ಅದಕ್ಕೂ ಮೊದಲು ನನ್ನ ಕುಟುಂಬಸ್ಥರು ಟೆಲಿಗ್ರಾಂ ಕಳುಹಿಸಿದ್ದರು. ಆದರೆ ನನ್ನ ನಾಟಕವಿದ್ದ ಕಾರಣ ಮಾಲೀಕರು ಅದನ್ನು ಮುಚ್ಚಿಟ್ಟಿದ್ದರು ಎಂದು ಹೇಳುವ ಮೂಲಕ ರಾಜು ಭಾವುಕರಾದರು.
ನನ್ನ ತಾಯಿ ನಿಧನರಾದ ವಿಷಯ ಹೇಗೋ ನನಗೆ ತಿಳಿಯಿತು. ಆದರೆ ಅಷ್ಟರಲ್ಲಿ ಸಂಜೆಯಾಗಿತ್ತು. ನಾನು ಬಸ್, ಟ್ರೈನ್ ಹಿಡಿದುಕೊಂಡು ಹೋಗುವಷ್ಟರಲ್ಲಿ ನನ್ನ ತಾಯಿಯನ್ನು ಮಣ್ಣು ಮಾಡಿದ್ದರು. ಕೊನೆಗೂ ನನ್ನ ತಾಯಿಯ ಮುಖ ನೋಡುವುದಕ್ಕೆ ನನಗೆ ಆಗಲಿಲ್ಲ. ನೀನು ಸತ್ತರು ನಾನು ಬರುವುದಿಲ್ಲ ಎಂದು ಹೇಳಿದೆ. ಅದು ಹಾಗೆಯೇ ಆಯಿತು. ನನ್ನ ತಾಯಿ ನನಗೆ ತಮ್ಮ ಮುಖವನ್ನು ತೋರಿಸಲೇ ಇಲ್ಲ ಎಂದು ರಾಜು ಕಣ್ಣೀರು ಹಾಕಿದರು.
Comments are closed.