ಬಾಹುಬಲಿಯ ಚಿತ್ರದ ಯಾವ್ದೇ ಪಾತ್ರವನ್ನ ಮರೆಯೋಕ್ಕೆ ಸಾಧ್ಯವಿಲ್ಲ. ‘ನಾ ಮಾಟೇ ಶಾಸನಂ’ ಅಂತ ರಾಜಮಾತೆ ಶಿವಗಾಮಿಯಾಗಿ ಅಬ್ಬರಿಸಿದ ರಮ್ಯಾಕೃಷ್ಣ, ಕಮಾಲ್ ಮಾಡಿದ್ರು. ಇದೀಗ ಅದೇ ರಮ್ಯಾಕೃಷ್ಣ, ರಾಣಿ ಶಿವಗಾಮಿಯಾಗಿ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಶಿವಗಾಮಿಯ ಪಾತ್ರ ಪರಿಚಯಿಸೋ ಹಾಡು ರಿಲೀಸ್ ಆಗಿ ಸದ್ದು ಮಾಡ್ತಿದೆ.
ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರ ಚಿತ್ರರಸಿಕರ ಮನ ಗೆದ್ದಿತ್ತು. ಇದೀಗ ಆ ಪಾತ್ರದ ಹೆಸರನ್ನೇ ಟೈಟಲ್ ಮಾಡಿಕೊಂಡು ರಾಣಿ ಶಿವಗಾಮಿ ಅನ್ನೋ ಸಿನಿಮಾ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಬಾಹುಬಲಿಯ ಮಾತೆ ಶಿವಗಾಮಿಯ ಪಾತ್ರ ಮಾಡಿದ್ದ ಅದೇ ರಮ್ಯಾಕೃಷ್ಣ ಈ ಚಿತ್ರದಲ್ಲೂ ಶಿವಗಾಮಿಯಾಗಿ ಬಣ್ಣ ಹಚ್ಚಿದ್ದಾರೆ. ರಮ್ಯಾಕೃಷ್ಣ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ‘ಆಡುವೆ ನಾನು ರತಿ ಶಿವಗಾಮಿ’ ಅನ್ನೋ ಲಿರಿಕಲ್ ವೀಡಿಯೋ ಸಾಂಗ್ ರಿವೀಲ್ ಆಗಿದೆ.
ವೀರ್ ಸಮರ್ಥ್ ಸಂಗೀತದ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಕ್ಲಾಸಿಕಲ್ ಸ್ಟೈಲ್ ಹಾಡನ್ನ ಅನುರಾಧ ಭಟ್ ಬಹಳ ಸೊಗಸಾಗಿ ಹಾಡಿದ್ದಾರೆ. ಚಿತ್ರದಲ್ಲಿ ರಾಣಿ ಶಿವಗಾಮಿ ಪಾತ್ರಕ್ಕೆ ಬಿಲ್ಡಪ್ ಕೊಡೋ ಸಾಂಗಿದು. ಆಕೆ ಎಷ್ಟು ಪವರ್ಫುಲ್..? ಆಕೆ ಒಳ್ಳೆಯವರಿಗೆ ಒಳ್ಳೆಯವಳು, ಕೆಟ್ಟವರಿಗೆ ಕೆಟ್ಟವಳು ಅನ್ನೋದನ್ನ ಈ ಹಾಡಿನಲ್ಲಿ ಹೇಳಲಾಗ್ತಿದೆ. ಡಾ. ಶಿವಶಂಕರ್ ಮಾಸ್ಟರ್ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.
ಬೆಂಗಳೂರಲ್ಲೇ ದರ್ಬಾರ್ ಹಾಲ್ ಸೆಟ್ ಹಾಕಿ ನಾಲ್ಕು ದಿನಗಳ ಕಾಲ ಈ ಹಾಡನ್ನ ಶೂಟ್ ಮಾಡಲಾಗಿದೆ. ರಮ್ಯಾ ಕೃಷ್ಣ ಒನ್ಸ್ ಅಗೇನ್ ಶಿವಗಾಮಿಯಾಗಿ ಅಬ್ಬರಿಸೋ ಸುಳಿವು ಸಿಕ್ತಿದೆ. ರಮ್ಯಾಕೃಷ್ಣ ಮತ್ತೊಮ್ಮೆ ರಾಣಿ ಅವತಾರದಿಂದ ಮೋಡಿ ಮಾಡೋಕ್ಕೆ ಬರ್ತಿದ್ದು, ಹಾಡಿನಲ್ಲಿ ಭರತನಾಟ್ಯ ಶೈಲಿಯ ಕ್ಲಾಸಿಕಲ್ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ತಮ್ಮ ಒನಪು ವಯ್ಯಾರದ ಮೂಲಕ ಗಮನ ಸೆಳೆದಿದ್ದಾರೆ.
ಬಾಲ್ ರೆಡ್ಡಿ ಅಂಡ್ ಟೀಂ ಹಾಡನ್ನ ಸೊಗಸಾಗಿ ಸೆರೆಹಿಡಿದಿದ್ಧಾರೆ. ಶ್ರೀ ವಿಘ್ನೇಶ್ ಕಾರ್ತಿಕ್ ಸಿನಿಮಾಸ್ ಬ್ಯಾನರ್ನಲ್ಲಿ ಜಿ. ಶ್ರೀಧರ್ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಕಥೆ 9ನೇ ಶತಮಾನದಲ್ಲಿ ಶುರುವಾಗಿ 21ನೇ ಶತಮಾನದಲ್ಲಿ ಕೊನೆಯಾಗುತ್ತೆ, ಅದು ಹೇಗೆ ಅನ್ನೋದನ್ನ ತೆರೆಮೇಲೆ ನೋಡ್ಬೇಕು.
ಪಿ.ಎನ್ ಸತ್ಯ ಅವರ ಗರಡಿಯಲ್ಲಿ ಪಳಗಿದ ಮಧು ಮಿಣಕನಗುರ್ಕಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವದಿಂದ ಶಿವಗಾಮಿ ಚಿತ್ರವನ್ನ ನಿರ್ದೇಶಿಸಿದ್ದಾರೆ. ರಮ್ಯಾಕೃಷ್ಣ ಬಿಟ್ರೆ, ಉಳಿದಂತೆ ಪ್ರವೀಣ್ ತೇಜ್, ಪಾಯಲ್, ರವಿಕಾಳೆ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಫಸ್ಟ್ ಕಾಪಿ ರೆಡಿಯಾಗಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.
Comments are closed.