‘ಕೆಮೆಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಹಿಟ್ ಆದ ನಂತರ ನಿರ್ದೇಶಕ ಕುಮಾರ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ‘ಚಾರ್ಲಿ ಚಾಪ್ಲಿನ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ನವೀನ್ ಸಜ್ಜು ನಾಯಕನಾಗಿ ನಟಿಸುತ್ತಿದ್ದಾರೆ.
ಬಿಗ್ ಬಾಸ್ 6’ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದ ನವೀನ್ ಸಜ್ಜು ಅವರು ಚಿತ್ರರಂಗಕ್ಕೆ ನಾಯಕನಾಗಿ ಕಾಲಿಡಲಿದ್ದಾರೆ ಎನ್ನುವ ಮಾತು ಗಾಂಧಿ ನಗರದ ಅಂಗಳದಲ್ಲಿ ತುಂಬಾ ದಿನಗಳಿಂದ ಹರಿದಾಡುತ್ತಲೇ ಇದೆ. ಈಗ ಈ ವಿಚಾರ ಅಧಿಕೃತವಾಗಿದೆ. ನವೀನ್ ಸದ್ಯ ಪ್ರಾಜೆಕ್ಟ್ ಒಂದನ್ನು ಫೈನಲ್ ಮಾಡಿದ್ದು, ಶೀಘ್ರವೇ ಚಿತ್ರದ ಸೆಟ್ ಸೇರಿಕೊಳ್ಳಲಿದ್ದಾರೆ.
‘ಕೆಮೆಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಹಿಟ್ ಆದ ನಂತರ ನಿರ್ದೇಶಕ ಕುಮಾರ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ‘ಚಾರ್ಲಿ ಚಾಪ್ಲಿನ್’ ಎನ್ನುವ ಶೀರ್ಷಿಕೆ ಇಟ್ಟಿದ್ದಾರೆ. ಸಿನಿಮಾದಲ್ಲಿ ಹಾಸ್ಯವೇ ಪ್ರಧಾನವಾಗಿರುವ ಕಾರಣಕ್ಕೆ ಈ ಶೀರ್ಷಿಕೆ ನೀಡಲಾಗಿದೆ. ಈ ಚಿತ್ರಕ್ಕೆ ನವೀನ್ ಸಜ್ಜು ನಾಯಕನಾಗಿ ನಟಿಸುತ್ತಿದ್ದಾರೆ.
“ಇಂದೊಂದು ಜರ್ನಿ ಸಿನಿಮಾ. ತಂಡವೊಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತದೆ. ಅಲ್ಲಿ ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಒಂದೆಳೆ. ‘ಕೆಮೆಸ್ಟ್ರಿ ಆಫ್ ಕರಿಯಪ್ಪ’ ಹಾಗೂ ‘ಚಾರ್ಲಿ ಚಾಪ್ಲಿನ್’ ಎರಡರಲ್ಲೂ ಹಾಸ್ಯವೇ ಪ್ರಧಾನವಾಗಿದ್ದರೂ ಈ ಸಿನಿಮಾ ತುಂಬಾ ಭಿನ್ನವಾಗಿರಲಿದೆ. ‘ಚಾರ್ಲಿ ಚಾಪ್ಲಿನ್’ನಲ್ಲಿ ಕಾಮಿಡಿ ಮಾತ್ರವಲ್ಲದೆ ಮತ್ತೊಂದು ವಿಶೇಷ ಅಂಶವಿದೆ. ಅದನ್ನು ಮುಂದಿನ ದಿನಗಳಲ್ಲಿ ರಿವೀಲ್ ಮಾಡುತ್ತೇವೆ,” ಎನ್ನುತ್ತಾರೆ ನಿರ್ದೇಶಕ ಕುಮಾರ್.
ಚಾರ್ಲಿ ಚಾಪ್ಲಿನ್’ಗೆ ನವೀನ್ ಸಜ್ಜು ನಾಯಕ. ಸಂಜನಾ ಆನಂದ್ ನಾಯಕಿ. ತಬಲಾ ನಾಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಜುಲೈ ವೇಳೆಗೆ ಚಿತ್ರ ಸೆಟ್ಟೇರಲಿದೆ.
ಮೊದಲ ಬಾರಿಗೆ ನಾಯಕನಾಗಿ ತೆರೆಮೇಲೆ ಬರುತ್ತಿರುವುದಕ್ಕೆ ನವೀನ್ ಕೂಡ ಖುಷಿಯಾಗಿದ್ದಾರೆ. ಈ ಮೊದಲು ಸಾಕಷ್ಟು ಕಥೆಗಳನ್ನು ರಿಜೆಕ್ಟ್ ಮಾಡಿದ್ದ ಅವರು, ಈ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. “ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ನನಗೆ ಸಾಕಷ್ಟು ಆಫರ್ಗಳು ಬಂದವು. ಆದರೆ, ಯಾವ ಕಥೆಯೂ ಇಷ್ಟವಾಗಿರಲಿಲ್ಲ. ನಾನು ‘ಕೆಮೆಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನೋಡಿ ಇಂಪ್ರೆಸ್ ಆಗಿದ್ದೆ. ಇದೇ ವೇಳೆ ನಿರ್ದೇಶಕ ಕುಮಾರ್ ಒಂದು ಕಥೆ ಹೇಳಿದರು ಇಷ್ಟವಾಯಿತು,” ಎಂದು ಸಿನಿಮಾ ಆಯ್ಕೆ ಬಗ್ಗೆ ಹೇಳಿಕೊಳ್ಳುತ್ತಾರೆ ನವೀನ್.
ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುವಾಗ ಅನೇಕರು ಮಾಸ್ ಕಥೆಗೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ನವೀನ್ ಹಾಸ್ಯ ಪ್ರಧಾನ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣವೂ ಇದೆ ಎನ್ನುವ ಅವರು, “ನನಗೆ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಇಲ್ಲ. ಆದರೆ, ಓರ್ವ ಕಲಾವಿದನಾಗಿ ಪರಿಚಯಗೊಳ್ಳಬೇಕು. ಇದೇ ಕಾರಣಕ್ಕೆ ಈ ಕಥೆ ಆಯ್ಕೆ ಮಾಡಿಕೊಂಡೆ. ಮುಂದೆಯೂ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಕಥೆ ಆಯ್ದುಕೊಳ್ಳುತ್ತೇನೆ,” ಎಂದಿದ್ದಾರೆ.
ಶಿವಸೀನಾ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ಮಾಪಕರಿಗಾಗಿ ಮಾತುಕತೆ ನಡೆಯುತ್ತಿದೆಯಂತೆ. ಈ ಚಿತ್ರಕ್ಕೆ ನವೀನ್ ಸಜ್ಜು ಅವರೇ ಸಂಗೀತ ಸಂಯೋಜನೆ ಮಾಡುವ ಸಾಧ್ಯತೆ ಇದೆ. ಎಲ್ಲವನ್ನೂ ಶೀಘ್ರದಲ್ಲೇ ಘೋಷಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
Comments are closed.