ಮುಂಬೈ: ಭಾರತದಲ್ಲಿ ಮೀಟೂ ಚಳುವಳಿ ಹೆಚ್ಚು ಚರ್ಚೆಗೆ ಬಂದಿದ್ದ ಸಮಯದಲ್ಲಿ ತನ್ನ ಸಹೋದ್ಯೋಗಿ ಮತ್ತು ಬಾಯ್ಫ್ರೆಂಡ್ನಿಂದ ಅನುಭವಿಸಿದ್ದ ಲೈಂಗಿಕ ದೌರ್ಜನ್ಯ ಬಗ್ಗೆ ಮಾತನಾಡಿದ್ದ ನಟಿ ಹಾಗೂ ಬರಹಗಾರ್ತಿ ಶ್ರುತಿ ಚೌಧರಿ, ಇದೀಗ ‘ಹ್ಯುಮನ್ಸ್ ಆಫ್ ಬಾಂಬೆ’ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಆತನ ಕೈಗಳಿಗೆ ಸಿಲುಕಿ ಅನುಭವಿಸಿದ ನೋವಿನ ಕರಾಳ ಘಟನೆಯನ್ನು ವಿವರಿಸಿದ್ದಾರೆ.
ಅಲ್ಲದೆ ನನ್ನ ಕತೆ ಸಾಕಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಹಿಂದೆಯೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಘಟನೆ ಬಗ್ಗೆ ಬರೆದುಕೊಂಡಿದ್ದರು.
ಸ್ಕಾಟ್ಲೆಂಡ್ ಟ್ರಿಪ್ಗೆ ಕರೆದೊಯ್ಯಲು ತನ್ನ ಬಾಯ್ ಫ್ರೆಂಡ್ ಒತ್ತಾಯ ಮಾಡಿದ್ದನ್ನು ಈ ಹಿಂದೆ ಮೆಲಕು ಹಾಕಿದ್ದ ಶ್ರುತಿ, ಪ್ರವಾಸಕ್ಕೆ ತೆರಳಿದಾಗ ನನ್ನ ಜತೆ ಅವನಿಗೆ ಮಲಗಲು ಅವಕಾಶ ಕೊಡಬಾರದು ಎಂದು ಯೋಚನೆ ಮಾಡಿದ್ದೆ. ಆದರೆ, ನನ್ನಿಂದ ಸಾಧ್ಯವಾಗಲಿಲ್ಲ. ಆ ಕ್ಷಣ ತುಂಬಾ ಕೆಟ್ಟದಾಗಿತ್ತು. ಆತ ತುಂಬಾ ಕಠೋರವಾಗಿ ನಡೆದುಕೊಂಡ. ನನ್ನನ್ನು ಕಚ್ಚಲು ಪ್ರಾರಂಭಿಸಿದ. ಇದರಿಂದ ನಾನು ಸಾಕಷ್ಟು ನೋವು ಅನುಭವಿಸಿದೆ. ಆ ಸಮಯದಲ್ಲಿ ಇದೊಂದು ದುರುಪಯೋಗವೆಂಬುದು ನನಗೆ ಗೊತ್ತಿರಲಿಲ್ಲ ಎಂದು ತಮ್ಮ ನೋವಿನ ಸಂಗತಿಯನ್ನು ಶ್ರುತಿ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.
ಬಾಯ್ಫ್ರೆಂಡ್ ಬಂಡವಾಳ ಗೊತ್ತಾದ ಬಳಿಕ ಆತನ ಸಂಬಂಧಕ್ಕೆ ಎಳ್ಳು ನೀರು ಬಿಟ್ಟರೂ ಕೂಡ ಶ್ರುತಿ ಅವರು ಅವನೊಂದಿಗೆ ಉದ್ಯೋಗ ಮುಂದುವರಿಸಿದರು. ಇಂದು ಏನಾಗಿದೆ ಅದು ಸಂಬಂಧದಿಂದಲೇ ನಡೆದಿದೆ ಎಂದು ಆನಂತರ ಗೊತ್ತಾಯಿತು ಎಂದು ಶ್ರುತಿ ತಿಳಿಸಿದ್ದಾರೆ.
ಒಮ್ಮೆ ಪ್ರವಾಸಕ್ಕಾಗಿ ರಜೆಯಲ್ಲಿದ್ದ ಸಮಯದಲ್ಲಿ ಒಬ್ಬಳು ನನ್ನನ್ನು ಸಂಪರ್ಕಿಸಿ, ಒಬ್ಬನಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ತಿಳಿಸಿದಳು. ಅವಳು ವಿವರಿಸಿದ ಘಟನೆ ಕೇಳಿದಾಗ ನನಗಾದ ರೀತಿಯಲ್ಲೇ ಆಗಿರುವುದು ಅರ್ಥವಾಯಿತು. ಆಗ ನಾನೊಬ್ಬಳೆ ಅಲ್ಲ. ಹಲವರು ಇದೇ ರೀತಿಯ ನೋವನ್ನು ಅನುಭವಿಸಿದ್ದಾರೆ ಎಂಬುದು ಅರ್ಥವಾಯಿತು ಎಂದು ಹೇಳಿಕೊಂಡಿದ್ದಾರೆ.
ಬಳಿಕ ಘಟನೆಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆಯಲು ನಿರ್ಧರಿಸಿ ಪೋಸ್ಟ್ ಮಾಡಿದ ಕೂಡಲೇ ವೈರಲ್ ಆದ ಪೋಸ್ಟ್ನಿಂದ ಆರೋಪಿಯ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು ಎಂದಿರುವ ಶ್ರುತಿ, ಇಂದು ನನ್ನ ಕತೆ ಹಲವು ಮಹಿಳೆಯರಿಗೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದ್ದಾರೆ.
Comments are closed.