ಇಂದು (ಬುಧವಾರ) ವರನಟ ಡಾ.ರಾಜ್ ಹುಟ್ಟುಹಬ್ಬ. ನಿರ್ದೇಶಕ ಎಸ್.ನಾರಾಯಣ್ ತಮ್ಮ ’ಶಬ್ದವೇಧಿ’ ಚಿತ್ರದಲ್ಲಿ ತಾವು ಕಂಡ ರಾಜ್ ಅವರನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.
ಡಾ.ರಾಜಕುಮಾರ್ ಅಭಿನಯದ ‘ಶಬ್ದವೇಧಿ’ ನಿರ್ದೇಶನದ ಸಂದರ್ಭ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿತ್ತು. ಮುಂಜಾನೆ 6 ಗಂಟೆಗೆ ಶೂಟಿಂಗ್ ಶುರು ಮಾಡೋದು ನಾನು ರೂಢಿಸಿಕೊಂಡು ಬಂದ ಪದ್ಧತಿ. ಆದರೆ ಅಣ್ಣಾವರ ಸಿನಿಮಾ ಸಂದರ್ಭದಲ್ಲಿ ಇದನ್ನು ಪಾಲನೆ ಮಾಡಲು ಸಾಧ್ಯವಾಗಲಿಲ್ಲ. ‘ಅವರಿಗೆ ಶ್ರಮವಾಗುತ್ತದೆ. 6 ಗಂಟೆಗೆ ಬೇಡ. ಅವರು ವ್ಯಾಯಾಮ ಮಾಡಿ ನಿಧಾನಕ್ಕೆ ಬರಲಿ’ ಎಂದು ಪಾರ್ವತಮ್ಮ ರಾಜ್ಕುಮಾರ್ ಸೂಚಿಸಿದ್ದರು. ಸರಿ ಎಂದು ನಾನು ನನ್ನ ಮನಸ್ಸಿನಿಂದ 6 ಗಂಟೆ ಶೂಟಿಂಗ್ ವಿಷಯ ತೆಗೆದುಹಾಕಿದೆ.
ಹಾಗೆಂದು ಶೂಟಿಂಗ್ ತಡವಾಗಿ ಆರಂಭಿಸುವುದು ನನ್ನಿಂದ ಆಗದ ಮಾತು. ಅದಕ್ಕಾಗಿ ಆ ಸಮಯದಲ್ಲಿ ಬೇರೆ ಕಲಾವಿದರ ದೃಶ್ಯಗಳನ್ನು ಚಿತ್ರೀಕರಿಸುವುದೆಂದು ನಿರ್ಧರಿಸಿದ್ದೆ. ಒಂದು ದಿನ ಹೀಗೆ ಬೆಳಗ್ಗೆ 6 ಗಂಟೆಗೆ ಶೂಟಿಂಗ್ ಎಂದು ಹೊರಟೆ. ಹೋಟೆಲ್ನಲ್ಲಿ ತಂಗಿದ್ದ ಅಣ್ಣಾವ್ರು ಸಿಟ್ಔಟ್ನಲ್ಲಿ ವ್ಯಾಯಾಮ ಮಾಡುತ್ತಿದ್ದರು.
ನನ್ನ ಕಾರು ಹಾದು ಹೋಗಿದ್ದು ಅವರಿಗೆ ಕಾಣಿಸಿದೆ. ತಕ್ಷಣವೇ ಮ್ಯಾನೇಜರ್ಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಚಿತ್ರೀಕರಣದ ವಿಷಯ ತಿಳಿದವರೇ ವ್ಯಾಯಾಮ ನಿಲ್ಲಿಸಿ ಸ್ನಾನದ ಮನೆಗೆ ಓಡಿದ್ದಾರೆ. ಬೇಗನೆ ಮೈಮೇಲೆ ಎರಡು ಬಿಂದಿಗೆ ನೀರು ಸುರುದುಕೊಂಡು ಓಡುತ್ತಲೇ ಕಾರು ಹತ್ತಿ ಸೆಟ್ಗೆ ಬಂದು ಬಿಟ್ಟಿದ್ದರು!
ಅಲ್ಲಿಗೆ ಬಂದವರೇ, ‘ಅಲ್ಲಾ, ನೀವು ಯಾಕೆ ಇಲ್ಲಿಗೆ ಬಂದ್ರಿ ನಾರಾಯಣ್?’ ಎಂದು ನನ್ನನ್ನು ತರಾಟೆಗೆ ತೆಗೆದುಕೊಂಡರು. ‘ಸಾರ್ ಚಿತ್ರೀಕರಣ ಇದೆಯೆಲ್ಲ’ ಅಂದೆ. ಅದಕ್ಕೆ ರಾಜ್, ‘ಅಲ್ಲಾರೀ ನೀವು ಇಲ್ಲಿ ಶೂಟಿಂಗ್ ಮಾಡುತ್ತಿದ್ದರೆ, ನಾನಲ್ಲಿ ಏನ್ ಮಾಡ್ಲಿ? ನಾನೂ ಶೂಟಿಂಗ್ನಲ್ಲಿ ಇರ್ತಿನಿ’ ಅಂದ್ರು. ಅವರ ಕರ್ತವ್ಯ ಪ್ರಜ್ಞೆ ಎದುರು ನಾನೇನು ಮಾತನಾಡಲು ಸಾಧ್ಯ?
Comments are closed.