ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಗದ ಪಾಳೇಗಾರ ವೀರ ಮದಕರಿ ನಾಯಕ ಸಾಹಸಗಾಥೆಯಲ್ಲಿ ಕಾಣಿಸಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಇದರ ಬೆನ್ನೆಲ್ಲೇ ಕಿಚ್ಚ ಸುದೀಪ್ ಕೂಡ ವೀರ ಮದಕರಿ ನಾಯಕರ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದಾಗಿ ತಿಳಿಸಿ ಒಂದಷ್ಟು ಸದ್ದು ಸುದ್ದಿ ಮಾಡಿದ್ದರು. ಆದರೆ ಇಬ್ಬರು ಸ್ಟಾರ್ ನಟರು ಒಂದೇ ಕಥೆಯನ್ನು ಸಿನಿಮಾ ಮಾಡುವುದು ಸಮಂಜಸವಲ್ಲ ಎಂದು ಕಿಚ್ಚ ಹಿಂದೆ ಸರಿದಿದ್ದರು.
ಈ ರೀತಿಯಾಗಿ ಸಖತ್ ಸುದ್ದಿಯಾಗಿದ್ದರಿಂದ ಚಿತ್ರದುರ್ಗದ ಐತಿಹಾಸಿಕ ಕಥೆಯನ್ನು ತಿಳಿಸಲಿರುವ ಈ ಚಿತ್ರದ ಹೀರೋ ಲುಕ್ ಹೇಗಿರಲಿದೆ ಎಂಬ ಕುತೂಹಲ ಇಡೀ ಸಿನಿಪ್ರಿಯರಲ್ಲಿ ಮನೆಮಾಡಿತ್ತು. ಅದರಲ್ಲೂ ಮತ್ತೊಮ್ಮೆ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸ್ಯಾಂಡಲ್ವುಡ್ ‘ಯಜಮಾನ’ನ ಅವತಾರ ಹೇಗಿರಲಿದೆ ಎಂಬುದನ್ನು ಡಿ ಫ್ಯಾನ್ಸ್ ಬಕಪಕ್ಷಿಗಳಂತೆ ಕಾಯುತ್ತಿದ್ದರು.
ಅದರಂತೆ ಇದೀಗ ‘ಗಂಡುಗಲಿ ಮದಕರಿ ನಾಯಕ’ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ. ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗ ಬೇಕಿದ್ದ ಪೋಸ್ಟರ್ ಒಂದು ದಿನ ಮುಂಚಿತವಾಗಿ ಹೊರ ಬಂದಿದೆ. ಈ ಪೋಸ್ಟರ್ನಲ್ಲಿ ಚಾಲೆಂಜಿಂಗ್ ಸ್ಟಾರ್ ಹಿಂದೆಂದೂ ಕಾಣಿಸಿದ ಹೊಸ ಅವತಾರದಲ್ಲಿ ನಿಂತಿರುವುದು ವಿಶೇಷ.
ರಗಡ್ ಲುಕ್, ಸಿಕ್ಸ್ ಪ್ಯಾಕ್, ಕೈಯಲ್ಲಿ ಬಿಚ್ಚುಗತ್ತಿ, ಗತ್ತನ್ನು ಎತ್ತಿ ತೋರಿಸುವ ಮೀಸೆ…ಏಕಧಂ ಪಾಳೇಗಾರ ಎಂದರೆ ಹಿಂಗಿರುತ್ತಾರೆ ಎಂಬುದನ್ನು ನೆನಪಿಸುವಂತಿದೆ ‘ಗಂಡುಗಲಿ ಮದಕರಿ ನಾಯಕ’ ದರ್ಶನ್ ಲುಕ್. ಈ ಒಂದು ಪೋಸ್ಟರ್ ಈಗ ಕರುನಾಡ ಐತಿಹಾಸಿಕ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟುಗೊಳಿಸಿದೆ ಎಂದರೆ ತಪ್ಪಾಗಲಾರದು. ‘ಯಜಮಾನ’ ಚಿತ್ರದ ನಿರೀಕ್ಷೆಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಈ ಪೋಸ್ಟರ್ ಡಬಲ್ ಖುಷಿ ನೀಡುವುದರಲ್ಲಿ ಸಂದೇಹವೇ ಇಲ್ಲ.
ಬಿ.ಎಲ್ ವೇಣು ಬರೆದಿರುವ ‘ಗಂಡುಗಲಿ ಮದಕರಿ ನಾಯಕ’ನ ಕಥೆಗೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇನ್ನು ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಲಿದ್ದು, ಹಲವು ಭಾಷೆಯಲ್ಲಿ ತೆರೆಗೆ ತರುವ ಯೋಜನೆಯಲ್ಲಿದ್ದಾರೆ.
‘ಯಜಮಾನ’ ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಹಾಗೆಯೇ ‘ರಾಬರ್ಟ್’ ಆಗಿ ರೀ ಎಂಟ್ರಿ ಕೊಡಲು ಚಾಲೆಂಜಿಂಗ್ ಸ್ಟಾರ್ ಸಿದ್ಧತೆಯಲ್ಲಿದ್ದಾರೆ. ಇದಾದ ಬಳಿಕ ವೀರ ಹೋರಾಟಗಾರ ಪಾತ್ರದಲ್ಲಿ ದರ್ಶನ್ ಬಣ್ಣ ಹಚ್ಚಲಿದ್ದಾರೆ. ಒಟ್ಟಿನಲ್ಲಿ ಮಾಸ್ ಲುಕ್ನಲ್ಲಿ ಅಭಿಮಾನಿಗಳನ್ನು ಮನರಂಜಿಸಿದ ದರ್ಶನ್ ತೂಗುದೀಪ್ ಅವರ ಗಾಂಭಿರ್ಯದ ಲುಕ್ ಚಿತ್ರಪ್ರೇಮಿಗಳನ್ನು ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.
Comments are closed.