ಬೆಂಗಳೂರು: ದೇಶಾದ್ಯಂತ ನಾಳೆ ತೆರೆಕಾಣಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹು ನಿರೀಕ್ಷಿತ ‘ಕೆಜಿಎಫ್’ ಬಿಡುಗಡೆಗೆ ಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ‘ಕೆಜಿಎಫ್’ಗಾಗಿ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ.
‘ಕೆಜಿಎಫ್’ ರೌಡಿ ತಂಗಂ ಜೀವನಾಧರಿತ ಸಿನಿಮಾ ಆಗಿದೆ ಎಂದು ಆರೋಪಿಸಿ ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 10ನೇ ಸಿಟಿ ಸಿವಿಲ್ ಕೋರ್ಟ್, 2019, ಜನವರಿ 7ರ ವರೆಗೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ.
ತಂಗಂ ಎಂಬ ಕುಖ್ಯಾತ ರೌಡಿಯ ಜೀವನಾಧಾರಿತ ಕತೆಯನ್ನೇ ‘ಕೆ.ಜಿ.ಎಫ್’ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಆದರೆ ಈ ಹಿಂದೆಯೇ ತಂಗಂ ಜೀವನಾಧಾರಿತ ಕತೆಯನ್ನು ಚಿತ್ರೀಕರಿಸಲು ವೆಂಕಟೇಶ್ ಅವರು ಹಕ್ಕು ಪಡೆದಿದ್ದರು. ಈಗ ವೆಂಕಟೇಶ್ ಅವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.
ಟ್ರಯಲ್ ಮೂಲಕ ಭಾರಿ ಸುದ್ದಿ ಮಾಡಿದ್ದ ಭರವಸೆ ಮೂಡಿಸಿದ್ದ ಕೆಜಿಎಫ್ ಚಿತ್ರ ಸುಮಾರು 40 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಕನ್ನಡ ಸೇರಿದಂತೆ ಇತರೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಶುಕ್ರವಾರ ಬಿಡುಗಡೆಯಾಗಬೇಕಿತ್ತು.
ರಾಜ್ಯದಲ್ಲಿ 340ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ ಬಿಡುಗಡೆಗೆ ಸಿದ್ಧವಾಗಿತ್ತು.
Comments are closed.