ಮನೋರಂಜನೆ

ವಿಚ್ಛೇಧನ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಹೆಂಡತಿ

Pinterest LinkedIn Tumblr


ಹೈದರಾಬಾದ್: ಇತ್ತೀಚೆಗೆ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಈ ಬಗ್ಗೆ ಸ್ವತಃ ರೇಣು ದೇಸಾಯಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ರೇಣು ದೇಸಾಯಿ ಅವರು ಬೇರೆಯವರ ಜೊತೆ ಎರಡನೇ ಮದುವೆ ಆಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕೆಟ್ಟ ಕಮೆಂಟ್ ಬರುತ್ತಿದ್ದವು. ಆದರೆ ಇದುವರೆಗೂ ಪವನ್ ಮತ್ತು ರೇಣು ದೇಸಾಯಿ ಅವರ ವಿಚ್ಛೇದನಕ್ಕೆ ಕಾರಣ ಮಾತ್ರ ಎಲ್ಲೂ ಬಹಿರಂಗವಾಗಿಲ್ಲ. ರೇಣು 2012ರಂದು ತನ್ನ ಪತಿ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಸುಮಾರು 6 ವರ್ಷಗಳಾದರೂ ಡಿವೋರ್ಸ್ ಯಾರು ಕೊಟ್ಟಿದ್ದು ಎಂದು ತಿಳಿದಿರಲಿಲ್ಲ. ಆದರೆ ಈಗ ಡಿವೋರ್ಸ್ ಕೇಳಿದ್ದು ಪವನ್ ಕಲ್ಯಾಣ್ ಎಂದು ರೇಣು ದೇಸಾಯಿ ಅವರು ಹೇಳಿದ್ದಾರೆ.

ನಾನು ಡಿವೋರ್ಸ್ ಕೇಳಿಲ್ಲ: ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ನಿಜವಾಗಿಯೂ ಡಿವೋರ್ಸ್ ಕೇಳಿಲ್ಲ. ಪವನ್ ಕಲ್ಯಾಣ್ ಅವರೇ ವಿಚ್ಛೇದನ ಕೇಳಿದರು. ಅದು ನನಗೆ, ಪವನ್ ಕಲ್ಯಾಣ್ ಮತ್ತು ಆ ದೇವರಿಗೆ ಗೊತ್ತು. ನಮ್ಮಿಬ್ಬರ ಮಧ್ಯೆ ಪತ್ನಿ-ಪತಿಯ ರೀತಿಯಲ್ಲಿ ಸಾಮಾನ್ಯ ಜಗಳವಾಗಿತ್ತು. ನಾನು ಬೇಡ ಎಂದು ವಾದ ಮಾಡಿದೆ. ಕೋಪ ಮಾಡಿಕೊಂಡೆ. ಆದರೆ ಕೊನೆಯಲ್ಲಿ ಅವರಿಗೆ ವಿಚ್ಛೇದನ ಬೇಕಿತ್ತು, ಆದ್ದರಿಂದ ಡಿವೋರ್ಸ್ ನೀಡಿದೆ” ಎಂದು ರೇಣು ದೇಸಾಯಿ ತಿಳಿಸಿದ್ದಾರೆ.

2ನೇ ಮದುವೆಗೆ ನಿರ್ಧರಿಸಿದ್ದು ಏಕೆ?: ಡಿವೋರ್ಸ್ ನೀಡಿದ ಬಳಿಕ ನಾನು ಒಂದು ವರ್ಷ ಖಿನ್ನತೆಗೆ ಒಳಗಾಗಿದ್ದೆ. ನನಗೆ ನನ್ನ ಕುಟುಂಬ ಸಹಾಯ ಮಾಡಿತ್ತು. ಕೌನ್ಸಲಿಂಗ್ ತೆಗೆದುಕೊಂಡಿದ್ದೇನೆ. ಒಂಟಿಯಾಗಿ ಏಳು ವರ್ಷ ನನ್ನ ಮಕ್ಕಳನ್ನು ನೋಡಿಕೊಂಡು ಬದುಕಿದ್ದೇನೆ. ನನಗೆ ನನ್ನ ಕುಟುಂಬ, ಸ್ನೇಹಿತರು ಎಲ್ಲರೂ ಒಂಟಿಯಾಗಿ ಇರಬೇಡ. ಎರಡನೇ ಮದುವೆಯಾಗು ಎಂದು ಹೇಳಿದರು. ಆದರೆ ನಾನು ಒಪ್ಪಲಿಲ್ಲ. ಕೊನೆಗೆ ಎರಡನೇ ಮದುವೆಯಾಗುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಮಹಿಳಾ ಅಭಿಮಾನಿಗೆ ಪ್ರಶ್ನೆ ಕೇಳಿದ್ದಾರೆ. “ನನ್ನ ಜಾಗದಲ್ಲಿ ನೀವು ಇದ್ದು, ಮದುವೆಯ ನಂತರವೂ 11 ವರ್ಷಗಳ ಕಾಲ ನಿಮಗೆ ಗೊತ್ತಾಗದೇ ಬೇರೆಯೊಬ್ಬರ ಜೊತೆ ಇದ್ದು, ಒಂದು ಮಗುವಿಗೆ ಜನ್ಮ ನೀಡಿದರೇ ನಿಮ್ಮ ಪರಿಸ್ಥಿತಿ ಹೇಗಿರುತ್ತೆ” ಎಂದು ಪ್ರಶ್ನಿಸಿದ್ದಾರೆ.

ಅಭಿಮಾನಿಗಳಲ್ಲಿ ತಪ್ಪ ಗ್ರಹಿಕೆ: ಪವನ್ ಕಲ್ಯಾಣ್ ಅವರು ಈಗ ಸಿನಿಮಾ ನಟ ಮಾತ್ರವಲ್ಲ ರಾಜಕಾರಣಿ ಕೂಡ ಆಗಿದ್ದಾರೆ. ನಾನು ಈ ಬಗ್ಗೆ ಮಾತನಾಡಿದರೆ ಅವರ ರಾಜಕೀಯಕ್ಕೆ ತೊಂದರೆಯಾಗುತ್ತದೆ. ವಿಚ್ಛೇದನ ಬಗ್ಗೆ ಜನತೆಗೆ ವಿವರಣೆ ನೀಡಲು ಪವನ್ ಅವರಿಗೆ ಹೇಳಿದೆ, ಆದರೆ ಅವರು ನನ್ನ ಮಾತನ್ನು ಒಪ್ಪಲಿಲ್ಲ. ಆದ್ದರಿಂದ ಅಭಿಮಾನಿಗಳಲ್ಲಿ ಈ ರೀತಿ ತಪ್ಪು ಗ್ರಹಿಕೆಯಾಗಿದೆ. ಈಗ ಅವರು ಬೇರೆ ಮದುವೆಯಾಗಿ ಮಕ್ಕಳ ಜೊತೆ ಸಂತೋಷದಿಂದಯಿದ್ದಾರೆ ಎಂದು ಹೇಳಿದರು.

ಈ ಹಿಂದೆ ಪವನ್ 1997ರಲ್ಲಿ ನಂದಿನಿ ಅವರನ್ನು ಮದುವೆಯಾಗಿದ್ದರು. ನಂತರ 2007ರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿ ರೇಣು ಅವರನ್ನು ಮದುವೆಯಾಗಿದ್ದರು. ಬಳಿಕ ರೇಣು ಅವರಿಗೂ ವಿಚ್ಛೇದನ ನೀಡಿ ಸದ್ಯ ಈಗ ಅನ್ನಾ ಲೆಜ್ನೆವಾ ಜೊತೆ ಸಂಸಾರ ನಡೆಸುತ್ತಿದ್ದಾರೆ.

ಪವನ್ ಹಾಗೂ ರೇಣು 2000ರಲ್ಲಿ ಬಿಡುಗಡೆಯಾಗಿದ್ದ `ಬದ್ರಿ’ ಮತ್ತು 2003ರಲ್ಲಿ ಬಿಡುಗಡೆಯಾದ `ಜಾನಿ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೇ ರೇಣು ಪವನ್ ಕಲ್ಯಾಣ್ ನಟನೆಯ `ಗುಡುಂಬ ಶಂಕರ್’ ಹಾಗೂ `ಬಾಲು ಎಬಿಸಿಡಿಇಎಫ್‍ಜಿ’ ಚಿತ್ರದಲ್ಲಿ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

Comments are closed.