
ಬೆಂಗಳೂರು: ಕತ್ರಿಗುಪ್ಪೆಯಲ್ಲಿರುವ ಮನೆಯನ್ನು ಮೂರು ತಿಂಗಳ ಒಳಗೆ ಖಾಲಿ ಮಾಡಿ ಬಾಕಿ ಬಾಡಿಗೆ ಕೂಡಲೇ ಪಾವತಿಸುವಂತೆ ನಟ ಯಶ್ಗೆ ನಗರ ಸಿಟಿ ಸಿವಿಲ್ ಕೋರ್ಟ್ ಸೂಚಿಸಿದೆ. ಮನೆ ಮಾಲೀಕ ಮುನಿಪ್ರಸಾದ್ ನಟ ಯಶ್ ಕಳೆದ ಕೆಲ ವರ್ಷಗಳಿಂದ ಮನೆಯ ಬಾಡಿಗೆ ನೀಡುತ್ತಿಲ್ಲ. ಖಾಲಿಯೂ ಮಾಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಬೇಕು ಹಾಗೂ ಬಾಕಿ ಉಳಿಸಿಕೊಂಡಿರುವ 9.60 ಲಕ್ಷ ರೂ. ಬಾಡಿಗೆ ಹಣ ಚುಕ್ತಾ ಮಾಡಬೇಕು ಎಂದು ಆದೇಶಿಸಿದೆ.
2010ರಲ್ಲಿ ನಟ ಯಶ್ ತಾಯಿ ಪುಷ್ಪಾ ಮಾಸಿಕ 40 ಸಾವಿರ ರೂ.ಗೆ ಮನೆ ಬಾಡಿಗೆ ಪಡೆದುಕೊಂಡಿದ್ದರು. ಒಂದು ವರ್ಷ ಬಾಡಿಗೆ ಪಾವತಿಸಿದ ಯಶ್, ಅನಂತರ ಬಾಡಿಗೆಯನ್ನು ನೀಡದೆ, ಮನೆಯನ್ನು ಖಾಲಿ ಮಾಡದೆ ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ ಎಂದು ಮುನಿಪ್ರಸಾದ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈ ಮನೆ ನಟ ಯಶ್ಗೆ ಅದೃಷ್ಟದ ಮನೆ ಎನ್ನಲಾಗಿದೆ. ಹೀಗಾಗಿ ಈ ಮನೆಗೆ 40 ಲಕ್ಷ ರೂ. ವೆಚ್ಚ ಮಾಡಿ ಒಳಾಂಗಣವನ್ನು ಸಿದ್ಧಪಡಿಸಿಕೊಂಡಿದ್ದರು. ಮನೆ ಖಾಲಿ ಮಾಡಲು ನಿರಾಕರಿಸಿ ಮನೆ ತಮಗೆ ಮಾರಾಟ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ.
-ಉದಯವಾಣಿ
Comments are closed.