ಮನೋರಂಜನೆ

ನಟ ಉಪೇಂದ್ರ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ! ಕಾರಣ ಏನು ಗೊತ್ತೇ…?

Pinterest LinkedIn Tumblr

ಬೆಂಗಳೂರು: ಶ್…1993ರಲ್ಲಿ ತೆರೆಗೆ ಬಂದ ಉಪೇಂದ್ರ ಅವರ ನಿರ್ದೇಶನದ ಸಿನಿಮಾ ಬಹುದೊಡ್ಡ ಯಶಸ್ಸು ಗಳಿಸಿತ್ತು. ಅದೇ ರೀತಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಭಾರೀ ಪ್ರಚಾರ ಪಡೆದು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ನಿರ್ದೇಶಕ, ನಟ ಉಪೇಂದ್ರ ಅವರು ತಮ್ಮದೇ ಪಕ್ಷದ ಮುಖಂಡರ ಜೊತೆ ಭಿನ್ನಾಭಿಪ್ರಾಯಗಳಿಂದ ತಾವೇ ಹುಟ್ಟುಹಾಕಿದ್ದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ಯಿಂದ ಕೇವಲ 5 ತಿಂಗಳಲ್ಲಿ ಹೊರಬಂದಿದ್ದಾರೆ.

ಆಡಳಿತವನ್ನು ಬದಲಾಯಿಸುತ್ತೇನೆ ಎಂಬ ಹುಮ್ಮಸ್ಸಿನಿಂದ ರಾಜಕೀಯಕ್ಕೆ ಸಿನಿಮಾದಲ್ಲಿ ಹೀರೋ ಪ್ರವೇಶ ಮಾಡುವಂತೆ ಗ್ರಾಂಡ್ ಎಂಟ್ರಿ ಕೊಟ್ಟ ಉಪೇಂದ್ರ ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಕೆಪಿಜೆಪಿಯಿಂದ ಹೊರಬಂದಿರುವ ಅವರು ಹೊಸದಾಗಿ ಪಕ್ಷ ಸ್ಥಾಪನೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಅದಿನ್ನೂ ಆರಂಭದ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಇನ್ನು ಉಪೇಂದ್ರ ಅವರು ರಾಜಕೀಯಕ್ಕೆ ಮರಳಬೇಕೆಂದರೆ 2019ರ ಲೋಕಸಭೆ ಚುನಾವಣೆಯವರೆಗೆ ಕಾಯಲೇಬೇಕು. ಅದು ಕೂಡ ಅಷ್ಟು ಹೊತ್ತಿಗೆ ಅವರು ರಾಜಕೀಯ ಪಕ್ಷದ ರಚನೆ ಮಾಡಲು ಸಾಧ್ಯವಾದರೆ ಮಾತ್ರ.

ರಾಜಕೀಯದ ಸರಿಯಾದ ದಿಕ್ಕಿನತ್ತ ಸಾಗಲು ಉಪೇಂದ್ರ ಅವರು ಸದ್ಯದ ಮಟ್ಟಿಗೆ ವಿಫಲರಾದರೂ ಕೂಡ ಇನ್ನೂ ಕೂಡ ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಆಶಾವಾದವನ್ನು ಹೊಂದಿದ್ದಾರೆ. ದೆಹಲಿಯಲ್ಲಿ ಚುನಾವಣಾಧಿಕಾರಿಯನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಈ ತಿಂಗಳಾಂತ್ಯದಲ್ಲಿ ನನ್ನ ಹೊಸ ಪಕ್ಷ ಪ್ರಜಾಕೀಯವನ್ನು ಸ್ಥಾಪಿಸುವ ಮೂಲಕ ಮುಂದಿನ ವರ್ಷದ ಚುನಾವಣೆಗೆ ನಾನು ಸಿದ್ದತೆ ನಡೆಸುತ್ತೇನೆ ಎನ್ನುವ ಉಪೇಂದ್ರ ಅವರಿಗೆ ಈ ವರ್ಷದ ವಿಧಾನಸಭೆ ಚುನಾವಣೆಯನ್ನು ಕಳೆದುಕೊಂಡಿರುವ ಬಗ್ಗೆ ಬೇಸರವಿದೆ.

ಚುನಾವಣಾ ಪ್ರಕ್ರಿಯೆಯಿಂದ ಆಡಳಿತದವರೆಗೆ ಪ್ರತಿ ಹಂತದಲ್ಲಿ ಪಾರದರ್ಶಕತೆ ತರುವುದಾಗಿ ಹೇಳುತ್ತಿರುವ ಉಪೇಂದ್ರ ತಾವು ಚುನಾವಣಾ ಪ್ರಚಾರ ಅಥವಾ ಟಿಕೆಟ್ ಹಂಚಿಕೆಯಲ್ಲಿ ಬೇರೆ ಪಕ್ಷಗಳನ್ನು ಅನುಸರಿಸದೆ ವಿಭಿನ್ನ ಹಾದಿ ತುಳಿಯುವುದಾಗಿ ಹೇಳುತ್ತಾರೆ.

ದೋಷಗಳನ್ನು ಹುಡುಕುವ ಮತ್ತು ನಿಮ್ಮ ಬಗ್ಗೆ ಕಾಳಜಿ ಹೊಂದಿರುವ ಜನರನ್ನು ಇಟ್ಟುಕೊಂಡು ಪಕ್ಷವನ್ನು ಕಟ್ಟಿ ಬೆಳೆಸುವುದು ನಿಜಕ್ಕೂ ಒಂದು ಸವಾಲು. ಕೆಪಿಜೆಪಿ ಶಂಕಾಸ್ಪದ ಅಭ್ಯರ್ಥಿಗಳಿಗೆ ಟಿಕೆಟ್ ಮಾರಾಟ ಮಾಡುತ್ತಿದೆ. ಪಕ್ಷ ಮುಂದಿನ ದಿನಗಳಲ್ಲಿ ಒಡೆಯುವುದನ್ನು ನೋಡುವುದಕ್ಕಿಂತ ಆರಂಭದ ಹಂತದಲ್ಲಿಯೇ ಮುರಿದು ಬೀಳುವುದು ಒಳ್ಳೆಯದು. ಆದರೂ ಕೂಡ ಇನ್ನೂ ನನ್ನ ಜೊತೆ 100 ಜನರಿದ್ದು ನನ್ನ ತತ್ವ, ಸಿದ್ದಾಂತಗಳ ಮೇಲೆ ನಂಬಿಕೆಯಿಟ್ಟಿದ್ದಾರೆ ಎಂದು ಉಪೇಂದ್ರ ಹೇಳುತ್ತಾರೆ.

ಕಳೆದ ಆರು ತಿಂಗಳಲ್ಲಿ ನಡೆದ ವಿದ್ಯಮಾನಗಳೆಲ್ಲವನ್ನೂ ಮರೆತು ಇದೀಗ ಹೊಸ ಅಧ್ಯಾಯ ಆರಂಭಿಸುತ್ತೇನೆ. ನನ್ನ ಆಶಾವಾದಗಳಿಗೆ ಧಕ್ಕೆಯುಂಟಾಗಿದೆ, ಆದರೆ ಅವೆಲ್ಲವೂ ಕ್ಷಣಿಕವಷ್ಟೆ. ಕೆಪಿಜೆಪಿ ಜೊತೆ ಹೋದರೆ ನಾನು ಕೂಡ ಭ್ರಷ್ಟನಾಗುತ್ತೇನೆ ಅವರ ಮೂಗಿನ ನೇರಕ್ಕೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿತ್ತು. ನನಗೆ ಚುನಾವಣೆ ಮತ್ತು ಸಾಮಾಜಿಕ ಸುಧಾರಣೆ ಮುಖ್ಯವಾಗಿದೆ, ಹೀಗಾಗಿ ನನ್ನ ಪಕ್ಷಕ್ಕೆ ರಾಜಾ ತೆಗೆದು ಪ್ರಜಾ ಎಂದು ಹೆಸರಿಡುತ್ತೇನೆ ಎಂದರು.

Comments are closed.