ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಅವಹೇಳನಕಾರಿ ಪೋಸ್ಟ್ ವಿರುದ್ಧ ನಟ ಪ್ರಕಾಶ್ ರೈ ಕೇವಲ 1 ರೂಪಾಯಿ ಪರಿಹಾರ ಕೇಳಿ ಮಂಗಳವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇಲ್ಲಿನ ನಾಲ್ಕನೇ ಜೆಎಂಎಫ್ಸಿ ನ್ಯಾಯಾಧೀಶರಾದ ಅಮೃತಾ ಅವರಿಗೆ ಪ್ರತಾಪ್ ಸಿಂಹ ವಿರುದ್ಧ ಅರ್ಜಿ ಸಲ್ಲಿಸಿರುವ ರೈ, ಐಪಿಸಿ ಸೆಕ್ಷನ್ 499 (ಮಾನನಷ್ಟ), 503 (ಜೀವ ಬೇದರಿಕೆ) 500(ಮಾನನಷ್ಟಕ್ಕಾಗಿ ಶಿಕ್ಷೆ) ಎಂಬ ಮೂರು ಸೆಕ್ಷನ್ಗಳ ಅಡಿಯಲ್ಲಿ ದೂರು ನೀಡಿದ್ದಾರೆ. ವಕೀಲ ಎಂ.ಮಹದೇವಸ್ವಾಮಿ ಅವರು ಪ್ರಕಾಶ್ ರೈ ಪರ ವಕಾಲತ್ತು ವಹಿಸಲಿದ್ದಾರೆ.
ಮಗ ಮೃತಪಟ್ಟಿದ್ದರೂ ಡ್ಯಾನ್ಸರ್ ಹಿಂದೆ ಓಡಿ ಹೋದವರಿಗೆ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ವಿರುದ್ಧ ಪ್ರಕಾಶ್ ರೈ ಈ ಹಿಂದೆ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಆದರೆ, ಪ್ರತಾಪ್ ಸಿಂಹ ನೋಟಿಸ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಮಹದೇವಸ್ವಾಮಿ ತಿಳಿಸಿದ್ದಾರೆ.
Comments are closed.