ಮನೋರಂಜನೆ

ಬಿಗ್​ಬಾಸ್​ ಮನೆಯಲ್ಲೇ ದಯಾಳ್’ರ ಸಿನೆಮಾಗೆ ಸಿಕ್ಕಿರುವ ನಾಯಕ-ನಾಯಕಿ ಯಾರು ಗೊತ್ತೇ ?

Pinterest LinkedIn Tumblr

ಬೆಂಗಳೂರು: ‘ಬಿಗ್​ಬಾಸ್’ ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ನಿರ್ದೇಶಕ ದಯಾಳ್ ಪದ್ಮನಾಭನ್ ಏನು ಮಾಡುತ್ತಿದ್ದಾರೆ? ಹೊಸದೊಂದು ಸಿನಿಮಾ ನಿರ್ದೇಶಿಸಲು ಸಜ್ಜಾಗಿದ್ದಾರೆ. ‘ಸತ್ಯ ಹರಿಶ್ಚಂದ್ರ’ ರೀತಿಯ ಕಮರ್ಷಿಯಲ್ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳಿದ್ದ ಅವರೀಗ ನಾಟಕಾಧಾರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಮೋಹನ್ ಹಬ್ಬು ಬರೆದಿರುವ ‘ಕರಾಳ ರಾತ್ರಿ’ ನಾಟಕಕ್ಕೆ ದಯಾಳ್ ಸಿನಿಮಾ ರೂಪ ನೀಡಲಿದ್ದಾರೆ. ಈ ಸಂಬಂಧ ಈಗಾಗಲೇ ಕೆಲಸಗಳು ಶುರುವಾಗಿವೆ. ಅಂದಹಾಗೆ, ಈ ಚಿತ್ರಕ್ಕೆ ನಾಯಕ-ನಾಯಕಿ ಆಯ್ಕೆ ಆಗಿದ್ದೇ ಅಚ್ಚರಿ ರೀತಿಯಲ್ಲಿ. ‘ಬಿಗ್​ಬಾಸ್’ ಮನೆಗೆ ಹೋದಾಗಲೇ ಆ ಪ್ರಕ್ರಿಯೆಯನ್ನು ಮುಗಿಸಿಕೊಂಡು ಬಂದಿದ್ದಾರೆ ದಯಾಳ್!

ಹೌದು, ಇತ್ತೀಚೆಗೆ ಸ್ಪರ್ಧಿಯಾಗಿ ಬಿಗ್​ಬಾಸ್ ಮನೆಯೊಳಗೆ ಹೋಗಿದ್ದ ದಯಾಳ್ ಅಲ್ಲಿಯೇ ನಟ ಜೆಕೆ ಮತ್ತು ನಟಿ ಅನುಪಮಾ ಗೌಡ ಅವರಿಗೆ ‘ಕರಾಳ ರಾತ್ರಿ’ ಬಗ್ಗೆ ಹೇಳಿದ್ದಾರೆ. ‘ಬಿಗ್​ಬಾಸ್​ನಲ್ಲಿರುವಾಗಲೇ ಜೆಕೆ ಹತ್ತಿರ ಮಾತುಕತೆ ನಡೆಸಿ, ಓಕೆ ಮಾಡಿಕೊಂಡಿದ್ದೇನೆ. ನಾಯಕಿ ಪಾತ್ರಕ್ಕೆ ಅನುಪಮಾ ಅವರ ಬಳಿ ಒಂದು ಸುತ್ತು ಮಾತಾಡಿದ್ದೇನೆ. ಇಬ್ಬರಿಂದಲೂ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ನಾಟಕದ ಹಕ್ಕುಗಳನ್ನು ಲೇಖಕ ಮೋಹನ್ ಹಬ್ಬು ಅವರಿಂದ ಪಡೆದುಕೊಂಡಿದ್ದೇನೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಫೆಬ್ರವರಿಯಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ದಯಾಳ್. ಇನ್ನು, ನಾಟಕಗಳನ್ನು ಸಿನಿಮಾ ಮಾಡುವುದು ದಯಾಳ್​ಗೆ ಹೊಸದೇನಲ್ಲ.

ಈ ಹಿಂದೆ ಮಾಡಿದ್ದ ‘ಹಗ್ಗದ ಕೊನೆ’ಚಿತ್ರ ಕೂಡ ನಾಟಕವನ್ನು ಆಧರಿಸಿತ್ತು. ‘ನಾನು ನಿರ್ದೇಶಿಸಿದ್ದ ‘ಹಗ್ಗದ ಕೊನೆ’, ‘ಆಕ್ಟರ್’ ಚಿತ್ರಗಳಲ್ಲಿ ಪಾತ್ರಗಳು ಕಮ್ಮಿ ಇದ್ದವು. ಹಾಗಂತ ಈ ಚಿತ್ರದಲ್ಲೂ ಪಾತ್ರಗಳು ಕಮ್ಮಿ ಇರುತ್ತವೆಂದಲ್ಲ. ಚಿತ್ರಕಥೆಗೆ ಎಷ್ಟು ಅವಶ್ಯವೋ ಅಷ್ಟೇ ಇರುತ್ತವೆ. ಅನಗತ್ಯವಾಗಿ ಇರುವುದಿಲ್ಲ. ಇದೊಂದು ಕ್ರೖೆಂ ಥ್ರಿಲ್ಲರ್ ಮಾದರಿ ಕಥೆ ಹೊಂದಿದ್ದು, ನಾಟಕಕ್ಕೆ ‘ಕರಾಳ ರಾತ್ರಿ’ ಎಂದು ಹೆಸರಿಡಲಾಗಿದೆ. ಸಿನಿಮಾಕ್ಕೂ ಅದೇ ಶೀರ್ಷಿಕೆ ಅಂತಿಮಗೊಳ್ಳಲಿದೆಯೇ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ’ ಎನ್ನುತ್ತಾರೆ ದಯಾಳ್. ಇನ್ನು, ಈ ಚಿತ್ರವನ್ನು ಅವರದೇ ಹೋಮ್ ಬ್ಯಾನರ್​ನಲ್ಲಿ ನಿರ್ಮಾಣ ಮಾಡಲಿದ್ದಾರೆ.

Comments are closed.