
ಕಲರ್ ಕನ್ನಡ ಚಾನಲ್ನಲ್ಲಿ “ಡ್ಯಾನ್ಸಿಂಗ್ ಸ್ಟಾರ್’ ಕಾರ್ಯಕ್ರಮದ ತೀರ್ಪುಗಾರರಾಗಿದ್ದ ರವಿಚಂದ್ರನ್, ಈಗ ಮತ್ತೆ ತೀರ್ಪುಗಾರರಾಗಿ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಅವರು ಉದಯ ಟಿವಿಯಲ್ಲಿ ನವೆಂಬರ್ 18ರಿಂದ ಪ್ರಾರಂಭವಾಗಲಿರುವ “ಉದಯ ಸಿಂಗರ್ ಜ್ಯೂನಿಯರ್’ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದಾರೆ.
ಹೌದು, ಉದಯ ಟಿವಿಯು “ಉದಯ ಸಿಂಗರ್ ಜ್ಯೂನಿಯರ್’ ಎಂಬ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಕಾರ್ಯಕ್ರಮವು ನವೆಂಬರ್ 18ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ ಪ್ರಸಾರವಾಗಲಿದೆ. 16 ಮಕ್ಕಳ ಈ ಸ್ಪರ್ಧೆಯಲ್ಲಿ ರವಿಚಂದ್ರನ್ ಮತ್ತು ದಕ್ಷಿಣ ಭಾರತದ ಜನಪ್ರಿಯ ಗಾಯಕ ಮನೋ ಅವರು ತೀರ್ಪುಗಾರರಾಗಿದ್ದು, ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್ ಅವರು ನಿರೂಪಕಿಯಾಗಿ ನಿರ್ವಹಿಸಲಿದ್ದಾರೆ.
ಈ ಸ್ಪರ್ಧೆಯಲ್ಲಿ ಚಲನಚಿತ್ರಗಳ ಹಾಡುಗಳೊಂದಿಗೆ ಶಾಸ್ತ್ರೀಯ ಸಂಗೀತ, ಜಾನಪದ, ಭಕ್ತಿಗೀತೆ, ದೇಶಭಕ್ತಿ ಗೀತೆ ಮತ್ತು ಇಂಡೋವೆಸ್ಟರ್ನ್ ಹಾಡುಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿಯೊಂದು ಸಂಚಿಕೆಯಲ್ಲಿಯೂ ವಿವಿಧ ರೀತಿಯ ವಿಷಯಗಳನ್ನು ಇಟ್ಟುಕೊಂಡು ಮಕ್ಕಳಿಂದ ಹಾಡಿಸಲಾಗುತ್ತಿದೆ. ಪ್ರತಿ ವಾರವೂ ಒಂದು ಎಲಿಮಿನೇಶನ್ ರೌಂಡ್ ಹೊಂದಿದ್ದು, ಕೊನೆಗೆ ಗ್ರಾಂಡ್ ಫಿನಾಲೆ ನಡೆಯಲಿದೆ.
ಈ ಕಾರ್ಯಕ್ರಮವು ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
-ಉದಯವಾಣಿ
Comments are closed.