ಮನೋರಂಜನೆ

ಮಾಯಾವತಿಗೆ ಜಾದೂ ಕೀ ಝಪ್ಪಿ: ಸಂಜಯ್‌ ದತ್‌ಗೆ ಸಮನ್ಸ್‌

Pinterest LinkedIn Tumblr


ಬಾರಾಬಂಕಿ : ಬಾಲಿವುಡ್‌ ನಟ ಸಂಜಯ್‌ ದತ್‌ಗೆ ಹೊಸ ಸಂಕಷ್ಟವೊಂದು ಎದುರಾಗಿದೆ. 2009ರ ಲೋಕಸಭಾ ಚುನಾವಣೆಯ ಪ್ರಚಾರಾಭಿಯಾನದಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿಗೆ “ಜಾದೂ ಕೀ ಝಪ್ಪಿ’ ನೀಡಿದ್ದ ಸಂಜಯ್‌ ದತ್‌ಗೆ ಇದೀಗ ಉತ್ತರ ಪ್ರದೇಶದ ನ್ಯಾಯಾಲಯವೊಂದು ಸಮನ್ಸ್‌ ಜಾರಿ ಮಾಡಿದೆ.

ಸಮಾಜವಾದಿ ಪಕ್ಷದ ಅಭ್ಯರ್ಥಿಯ ಪರವಾಗಿ ಸಾರ್ವಜನಿಕ ಭಾಷಣದಲ್ಲಿ ಮಾಯಾವತಿ ಅವರನ್ನು ಹೀಗಳೆಯುತ್ತಾ ತನ್ನ ಜನಪ್ರಿಯ “ಜಾದೂ ಕೀ ಝಪ್ಪಿ’ ಡಯಲಾಗ್‌ ಉಚ್ಚರಿಸುವ ಮೂಲಕ ಮುನ್ನಾ ಭಾಯಿ ಎಂಬಿಬಿಎಸ್‌ ನಟ ಸಂಜಯ್‌ ದತ್‌, ಭಾರೀ ದೊಡ್ಡ ಜನಸ್ತೋಮವನ್ನು ನಗೆಗಡಲಲ್ಲಿ ಮುಳುಗಿಸಿದ್ದರು. ‘ಬಿಜೆಪಿ ಮುಖ್ಯಸ್ಥೆ ಮಾಯಾವತಿಗೂ ನಾನು ಜಾದೂ ಕೀ ಝಪ್ಪಿ ನೀಡಬಯಸುತ್ತೇನೆ’ ಎಂದು ದತ್‌ ಹೇಳಿದ್ದರು.

ಈ ಭಾಷಣ ಕಾರ್ಯಕ್ರಮದ ವಿಡಿಯೋವನ್ನು ಜಿಲ್ಲಾಡಳಿತ ಚಿತ್ರೀಕರಿಸಿಕೊಂಡಿತ್ತು. ಇದರ ಆಧಾರದಲ್ಲಿ ದೂರು ದಾಖಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರರು ಆದೇಶಿಸಿದ್ದರು. ಮಾಸೋಲಿ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ವಿನಯ್‌ ಮಿಶ್ರಾ ಅವರು ಸಂಜಯ್‌ ದತ್‌ ವಿರುದ್ಧ ದೂರು ದಾಖಲಿಸಿದ್ದರು.

ಅಂತೆಯೇ ಇದೀಗ ಈ ಪ್ರಕರಣದಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಸಂಜಯ್‌ ಯಾದವ್‌ ಅವರು ದತ್‌ಗೆ ಸಮನ್ಸ್‌ ಜಾರಿ ಮಾಡಿದ್ದಾರೆ. ಈ ಸಮನ್ಸನ್ನು ದತ್‌ಗೆ ತಲುಪಿಸುವಂತೆ ಮುಂಬಯಿ ಕಮಿಷನರ್‌ಗೆ ಆದೇಶಿಸಿದ್ದಾರೆ. ಜತೆಗೆ ನವೆಂಬರ್‌ 16ರಂದು ತನ್ನ ಮುಂದೆ ಹಾಜರಾಗುವಂತೆಯೂ ಅವರು ಆದೇಶಿಸಿದ್ದಾರೆ.

-ಉದಯವಾಣಿ

Comments are closed.