ಮನೋರಂಜನೆ

ಸತ್ಯ ಹರಿಶ್ಚಂದ್ರ ಚಿತ್ರ ವಿಮರ್ಶೆ

Pinterest LinkedIn Tumblr

ಶರಣು ಹುಲ್ಲೂರು

ಸತ್ಯ ಹರಿಶ್ಚಂದ್ರ ಎಂದರೆ ಸತ್ಯಕ್ಕಾಗಿ ಎಂತಹ ಕಷ್ಟ ಬಂದರೂ ಸಹಿಸಿಕೊಳ್ಳುವ ರಾಜನ ಕತೆ. ಆದರೆ ಈ ಹರಿಶ್ಚಂದ್ರ ಸುಳ್ಳು ಹೇಳುವದರಲ್ಲಿ ನಿಸ್ಸೀಮ ಮತ್ತು ತನ್ನ ಸುಳ್ಳಿನಿಂದಾಗಿ ತೊಂದರೆಗೆ ಸಿಕ್ಕಿ ಹಾಕಿಕೊಂಡು ಹೇಗೆಲ್ಲ ಒದ್ದಾಡುತ್ತಾನೆ ಎಂಬುದೇ ಆಧುನಿಕ ಸತ್ಯ ಹರಿಶ್ಚಂದ್ರನ ಕತೆ.

ಸಿನಿಮಾ ಟೈಟಲ್‌ನಲ್ಲೇ ನಿರ್ದೇಶಕರು ಇದು ಅಸತ್ಯದ ಕತೆ ಎಂದು ಹೇಳಿದ್ದಾರೆ. ಹಾಗಾಗಿ ಚಿತ್ರಮಂದಿರದೊಳಗೆ ಹೋಗುವ ಪ್ರೇಕ್ಷಕ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಇಡೀ ಚಿತ್ರದ ಕತೆ ಶರಣ್‌ ಮತ್ತು ಚಿಕ್ಕಣ್ಣ ಅವರ ಕಾಮಿಡಿ ಇಮೇಜ್‌ಗೆ ತಕ್ಕಂತೆ ರಚನೆಯಾಗಿದೆ.

ಕಥಾ ನಾಯಕನ ಹೆಸರೇ ಸತ್ಯ ಹರಿಶ್ಚಂದ್ರ(ಶರಣ್‌). ಸುಳ್ಳಿನ ಸರದಾರ. ಮಗ ಹೀಗೆ ಸುಳ್ಳು ಹೇಳಿಕೊಂಡು ಜೀವನ ನಡೆಸುತ್ತಿರುವುದು ತಾಯಿಗೆ ಇಷ್ಟವಿರುವುದಿಲ್ಲ.ಅವನ ಎಲ್ಲ ಕುಕೃತ್ಯಗಳನ್ನು ಬೆಂಬಲಿಸುವ ಸ್ನೇಹಿತರು ಅವನನ್ನು ದಾರಿ ತಪ್ಪಿಸುತ್ತಲೇ ಇರುತ್ತಾರೆ. ಹೀಗೆ ಸುಳ್ಳು ಹೇಳಿಕೊಂಡೆ ಅವನು ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ತನಗಿಷ್ಟ ಬಂದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾನೆ.

ಆದರೆ ಒಂದು ಹಂತದಲ್ಲಿ ಹರಿಶ್ಚಂದ್ರನಿಗೆ ಸುಳ್ಳಿನಿಂದ ತೊಂದರೆ ಎದುರಾಗುತ್ತದೆ. ಈ ಮಧ್ಯೆ ಊರಿನ ಪಟೇಲನ ಪುತ್ರಿ ಅವನನ್ನು ಪ್ರೀತಿಸಲು ಶುರು ಮಾಡುತ್ತಾಳೆ. ಇದು ಇವನಿಗೆ ಇಷ್ಟವಿರುವುದಿಲ್ಲ, ಅದನ್ನು ತಪ್ಪಿಸಿಕೊಳ್ಳಲು ಹೋಗುವ ಭರದಲ್ಲಿ ದೂರದ ಜರ್ಮನಿಯಲ್ಲಿರುವ ಹುಡುಗಿಯೊಬ್ಬಳನ್ನು ಲವ್‌ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ. ಆಗ ಚಿತ್ರದ ಕತೆಗೆ ಮಹತ್ವದ ತಿರುವು ಬರುತ್ತದೆ. ಇಬ್ಬರು ಹುಡುಗಿಯರ ಪ್ರೀತಿ, ಸುಳ್ಳು, ಚಿಕ್ಕಣ್ಣ, ಸಾಧು ಕೋಕಿಲಾ ಅವರ ಕಾಮಿಡಿ ಟೈಮಿಂಗ್‌ ನಾಯಕಿಯರ ಗ್ಲಾಮರ್‌ ಎಲ್ಲವನ್ನೂ ಸೇರಿಸಿ ನಿರ್ದೇಶಕ ದಯಾಳ್‌ ಹದವಾದ ಅಡುಗೆ ಮಾಡಿದ್ದಾರೆ. ಚಿತ್ರದ ಕೆಲ ದೃಶ್ಯಗಳಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳು ಕಿರಿಕಿರಿಯಾಗುತ್ತವೆ.

ಕುಲದಲ್ಲಿ ಕೀಳ್ಯಾವುದೋ… ಹಾಡನ್ನು ಸೊಗಸಾಗಿ ಚಿತ್ರಿಸಲಾಗಿದೆ. ಶರಣ್‌ ಅಭಿನಯದಲ್ಲಿ ಎಂದಿನಂತೆ ನೂರಕ್ಕೆ ನೂರು ಅಂಕ ಗಳಿಸುತ್ತಾರೆ. ಆದರೆ ನಾಯಕಿಯರಲ್ಲಿ ಸಂಚಿತಾ ತೆರೆಯ ಮೇಲೆ ಚೆಂದವಾಗಿ ಕಾಣುತ್ತಾರೆ. ಶರತ್‌ ಲೋಹಿತಾಶ್ವ, ಚಿಕ್ಕಣ್ಣ, ಸಾಧು ಕೋಕಿಲ, ಸಂಚಾರಿ ವಿಜಯ…, ಭಾವನಾ ರಾವ್‌ ಅವರದು ಅಚ್ಚುಕಟ್ಟಾದ ಅಭಿನಯ.ಅರ್ಜುನ್‌ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಫೈಜಲ್‌ ಕ್ಯಾಮೆರಾ ಕೆಲಸ ಚೆನ್ನಾಗಿದೆ. ಬದುಕಿಗೆ ಸುಳ್ಳು ಅನಿವಾರ್ಯವಲ್ಲ, ಅದರಿಂದ ತೊಂದರೆ ಹೆಚ್ಚು ಎನ್ನುವ ಒಟ್ಟು ಸಾರಾಂಶವನ್ನು ಕಾಮಿಡಿ ಮೂಲಕ ನಿರ್ದೇಶಕರು ಪ್ರೇಕ್ಷಕರಿಗೆ ಚೆನ್ನಾಗಿಯೇ ತಲುಪಿಸಿದ್ದಾರೆ.

Comments are closed.