ನಟ ಜೂ. ಎನ್ಟಿಆರ್ ‘ಜನತಾ ಗ್ಯಾರೇಜ್’ ಗೆಲುವಿನ ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮುಂದಿನ ಚಿತ್ರದ ತಯಾರಿಗಳು ಶುರುವಾಗಿವೆ. ‘ಪವರ್’, ‘ಸರ್ದಾರ್ ಗಬ್ಬರ್ ಸಿಂಗ್’ ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದ ಕೆ.ಎಸ್. ರವೀಂದ್ರ ಈ ಹೊಸ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇದು ಜೂ. ಎನ್ಟಿಆರ್ ನಟನೆಯ 27ನೇ ಚಿತ್ರವಾಗಿದ್ದು, ಅವರ ಸಹೋದರ ನಂದಮೂರಿ ಕಲ್ಯಾಣ್ರಾಮ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರದ ವಿಶೇಷತೆ ಬಗ್ಗೆ ಹೇಳಲೇಬೇಕು. ‘ಜನತಾ ಗ್ಯಾರೇಜ್’ನಲ್ಲಿ ಸಮಂತಾ, ನಿತ್ಯಾ ಮೆನನ್ ಜತೆ ಡ್ಯುಯೆಟ್ ಹಾಡಿದ್ದ ಜೂ. ಎನ್ಟಿಆರ್ ಈ ಬಾರಿ ನಾಲ್ವರು ನಾಯಕಿಯರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಕಾಜಲ್ ಅಗರ್ವಾಲ್, ‘ಪ್ರೇಮಂ’ ಖ್ಯಾತಿಯ ಅನುಪಮಾ ಪರಮೇಶ್ವರನ್, ನಿವೇದಾ ಥಾಮಸ್ ಚಿತ್ರದಲ್ಲಿ ನಟಿಸಲಿದ್ದಾರೆ. ಇದರ ಜತೆಗೆ ಮತ್ತೋರ್ವ ನಟಿ ಸ್ಪೆಷಲ್ ಸಾಂಗ್ವೊಂದರಲ್ಲಿ ಹೆಜ್ಜೆ ಹಾಕುವ ಸಾಧ್ಯತೆಗಳಿವೆ. ಅಂದಹಾಗೆ, ಜೂನಿಯರ್ ಜತೆ ನಟಿ ಕಾಜಲ್ಗೆ ಇದು 5ನೇ ಚಿತ್ರ. ‘ಬೃಂದಾವನಂ’, ‘ಬಾದ್ಷಾ’, ‘ಟೆಂಪರ್’ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ‘ಜನತಾ ಗ್ಯಾರೇಜ್’ ಚಿತ್ರದ ಐಟಂ ಸಾಂಗ್ನಲ್ಲಿ ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಅನುಪಮಾಗೆ ಇದು ಐದನೇ ತೆಲುಗು ಚಿತ್ರ. ಈಗಾಗಲೇ 2 ಚಿತ್ರಗಳು ತೆರೆಕಂಡಿದ್ದು, ಇನ್ನೂ 2 ಚಿತ್ರಗಳು ರಿಲೀಸ್ಗೆ ರೆಡಿ ಇವೆ.
ಇನ್ನು, ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ನಂದಮೂರಿ ಕಲ್ಯಾಣ್ರಾಮ್ ಸಖತ್ ಖುಷಿಯಲ್ಲಿದ್ದಾರೆ. ‘ಸಹೋದರನ ಚಿತ್ರವನ್ನು ನಮ್ಮ ಬ್ಯಾನರ್ನಲ್ಲಿ ನಿರ್ಮಾಣ ಮಾಡುತ್ತಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ. ಇದೊಂದು ಬಿಗ್ಬಜೆಟ್ ಸಿನಿಮಾವಾಗಿದ್ದು, ತಾಂತ್ರಿಕತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಿರ್ದೇಶಕ ರವೀಂದ್ರ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ ಕಲ್ಯಾಣ್ರಾಮ್ ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದ್ದು, 2017ರ ಮಧ್ಯಭಾಗದಲ್ಲಿ ಚಿತ್ರ ತೆರೆಕಾಣಲಿದೆ.
Comments are closed.