ಬೆಂಗಳೂರು: ಶುಕ್ರವಾರವಷ್ಟೇ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಾರರ್ ಚಿತ್ರ ‘ಮಮ್ಮಿ’ಯನ್ನು ನೋಡಿ ಅನೇಕರು ಬೆಚ್ಚಿ ಬಿದ್ದಿದ್ದಾರೆ. ಪ್ರಮುಖ ಪಾತ್ರಧಾರಿಯಾಗಿ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ಈ ಚಿತ್ರ, ಚಿತ್ರತಂಡವನ್ನೇ ವಾಪಸ್ ಹೆದರಿಸಿ ಸೇಡು ತೀರಿಸಿಕೊಳ್ಳಬೇಕು ಎಂದೆನಿಸುವಷ್ಟರಮಟ್ಟಿಗೆ ಪ್ರೇಕ್ಷಕರನ್ನು ಹೆದರಿಸುತ್ತಿದೆಯಂತೆ. ‘ಮಮ್ಮಿ’ ಚಿತ್ರ ನೋಡಿದ ಪ್ರೇಕ್ಷಕರೊಬ್ಬರು ಹಾಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಕೂಡ. ವಿಶೇಷ ಎಂದರೆ.. ಹಾಗೆ ‘ಮಮ್ಮಿ’ಯನ್ನು ನೋಡಿ ಭಯಗೊಂಡವರು ಬೇರಾರೂ ಅಲ್ಲ, ‘ಗೋಲ್ಡನ್ ಸ್ಟಾರ್’ ಗಣೇಶ್. ಜತೆಗೆ ಇವರು ಸೇಡು ತೀರಿಸಿಕೊಂಡಿದ್ದು ಪ್ರಿಯಾಂಕಾ ವಿರುದ್ಧ.
‘ಗಣೇಶ್ ಮನೆಯಲ್ಲಿ ಶನಿವಾರ ರಾತ್ರಿ ಔತಣಕೂಟವಿತ್ತು. ಚಿತ್ರೋದ್ಯಮದ ಕೆಲವರನ್ನು ಅವರು ಆಹ್ವಾನಿಸಿದ್ದು, ನನ್ನನ್ನೂ ಕರೆದಿದ್ದರು. ಈ ವೇಳೆ ನಾನು ನಟ-ನಿರ್ದೇಶಕ ರಮೇಶ್ ಅರವಿಂದ್ ಜತೆ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದ ಗಣೇಶ್ ಮತ್ತಿತರರು ಜೋರಾಗಿ ಕಿರುಚಿ ಹೆದರಿಸಿದ್ದಾರೆ. ಗಣೇಶ್ ‘ಮಮ್ಮಿ’ ಸಿನಿಮಾವನ್ನು ನೋಡಿ ಬೆಚ್ಚಿಬಿದ್ದಿದ್ದರಿಂದ, ಅದಕ್ಕೆ ಪ್ರತಿಯಾಗಿ ಅವರು ನನ್ನನ್ನೂ ಬೆಚ್ಚಿಬೀಳಿಸಿದರು’ ಎಂಬುದು ಪ್ರಿಯಾಂಕಾ ನೀಡುವ ವಿವರಣೆ.
ಆ ಘಟನೆಯ ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಗಣೇಶ್, ‘ನಮ್ಮನ್ನು ಮಮ್ಮಿ ಹೆದರಿಸಿತ್ತು. ಇವತ್ತು ನಾವು ಅವರನ್ನು ಹೆದರಿಸಿದೆವು..’ ಎಂದು ಶೀರ್ಷಿಕೆ ನೀಡಿದ್ದಾರೆ. ಅಂದಹಾಗೆ, ಈ ಚಿತ್ರ ಎಷ್ಟು ಭಯಾನಕವಾಗಿದೆ ಎಂದರೆ, ಚಿತ್ರ ಶುರುವಾದ ಕೆಲವೇ ನಿಮಿಷಗಳಲ್ಲಿ ಪ್ರಿಯಾಂಕಾ ಅವರ ಮಕ್ಕಳು ಹೆದರಿ ಟಾಕೀಸ್ನಿಂದ ಹೊರಹೋಗಿದ್ದರಂತೆ. ಹಾಗಾಗಿ, ತಮ್ಮ ಮಕ್ಕಳಿಗೆ ಕೆಲವು ದೃಶ್ಯಗಳನ್ನು ಎಡಿಟ್ ಮಾಡಿ ತೋರಿಸಬೇಕು ಎಂಬ ಆಲೋಚನೆಯಲ್ಲಿದ್ದಾರೆ ಪ್ರಿಯಾಂಕಾ. ಪ್ರೇಕ್ಷಕರು ಹೀಗೆ ಹೆದರಿಕೊಂಡರೆ ಹಾರರ್ ಚಿತ್ರ ಯಶಸ್ವಿಯಾದಂತೆ. ಆ ನಿಟ್ಟಿನಲ್ಲಿ ‘ಮಮ್ಮಿ’ ತುಂಬ ಯಶಸ್ವಿಯಾಗಿದೆ. ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಬಹುತೇಕ ಕಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಉಪೇಂದ್ರ, ಶಶಾಂಕ್, ವಿಜಯಪ್ರಸಾದ್ ಸೇರಿ ಚಿತ್ರೋದ್ಯಮದ ಅನೇಕರು ಸಿನಿಮಾ ವೀಕ್ಷಿಸಿದ್ದು, ತುಂಬ ಚೆನ್ನಾಗಿದೆ ಎಂದು ಹೇಳಿದ್ದಾರೆ. ಜತೆಗೆ ಈ ವಾರದಲ್ಲಿ ಮತ್ತೊಂದು ಸೆಲೆಬ್ರಿಟಿ ಶೋ ಆಯೋಜಿಸುವ ಪ್ಲ್ಯಾನ್ ಕೂಡ ಇದೆ ಎನ್ನುತ್ತಾರೆ ಪ್ರಿಯಾಂಕಾ.
Comments are closed.