ಚೆನ್ನೈ: ದಕ್ಷಿಣ ಭಾರತದ ಮಾಜಿ ನಟಿ ರಂಭಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ತನ್ನ ವೈವಾಹಿಕ ಜೀವನವನ್ನು ಕಾಪಾಡಿಕೊಡುವಂತೆ ನಟಿ ಕಳೆದ ತಿಂಗಳು ಕೋರ್ಟ್ ಮೆಟ್ಟಿಲೇರಿದ್ದು ವರದಿಯಾಗಿತ್ತು. ಇದೀಗ ನಟಿ ಮತ್ತೊಮ್ಮೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದು ತನ್ನಿಬ್ಬರು ಮಕ್ಕಳನ್ನು ಸಾಕಿ ಸಲಹುವ ಹಕ್ಕನ್ನು ತನಗೆ ನೀಡಬೇಕೆಂದು ಕೋರಿದ್ದಾರೆ.
ಅರ್ಜಿಯನ್ನು ಪುರಸ್ಕರಿಸುವ ನ್ಯಾಯಾಲಯ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿದೆ.
ರಂಭಾ ವಿಜಯಲಕ್ಷ್ಮಿ ಸಿವಿಲ್ ಇಂಜಿನಿಯರ್ ಪಿ.ಇಂದ್ರ ಕುಮಾರ್ ಎಂಬುವವರನ್ನು 2010 ಅಕ್ಟೋಬರ್ 27ರಂದು ವಿವಾಹವಾಗಿದ್ದರು. ಇಂದ್ರಕುಮಾರ್ ಶ್ರೀಲಂಕಾದಲ್ಲಿ ಜನಿಸಿದ್ದು ನಂತರ ಕೆನಡಾದಲ್ಲಿ ನೆಲೆಸಿದ್ದರು. ಇವರಿಬ್ಬರ ಮದುವೆ ಚೆನ್ನೆಯ ಸಾಲಿಗ್ರಾಮದಲ್ಲಿ ನೆರವೇರಿತ್ತು.
ಇಂದ್ರಕುಮಾರ್ ಈ ಹಿಂದೆ ದುಶ್ಯಂತಿ ಸೆಲ್ವ ವಿನಾಯಕಮ್ ಎಂಬಾಕೆಯನ್ನು ಮದುವೆಯಾಗಿದ್ದು ಭಿನ್ನಾಭಿಪ್ರಾಯ ತಲೆದೋರಿ 2003, ಡಿಸೆಂಬರ್ 1ರಂದು ಬೇರೆ ಬೇರೆಯಾಗಿದ್ದರು. ಆದರೆ ಈ ವಿಷಯವನ್ನು ಇಂದ್ರಕುಮಾರ್ ತಮ್ಮ ಮದುವೆ ಸಮಯದಲ್ಲಿ ತಿಳಿಸಿರಲಿಲ್ಲ. ಫಿಜಿಗೆ ಹನಿಮೂನ್ ಹೋಗಿದ್ದಾಗ ತಮ್ಮ ಪತಿಯ ನಿಜ ರೂಪ ಗೊತ್ತಾಯಿತು.
ನಂತರ ಕೆನಡಾದಲ್ಲಿ ವಾಸಿಸಲು ಆರಂಭಿಸಿದಾಗ ಪತಿಯಿಂದ ಕಿರುಕುಳ ಆರಂಭವಾಯಿತು. ತಮ್ಮ ಆಸ್ತಿ, ಸಂಪತ್ತಿನ ಬಗ್ಗೆ ವಿಚಾರಿಸಲು ಆರಂಭಿಸಿದರು. ಮದುವೆಗೆ ಮುಂಚೆ ತಮ್ಮ ಸೋದರನಿಗೆ ಕೆನಡಾದಲ್ಲಿ ಐಶಾರಾಮಿ ಅಪಾರ್ಟ್ ಮೆಂಟ್ ತೋರಿಸಿದ್ದ ಇಂದ್ರಕುಮಾರ್ ನಂತರ ಚಿಕ್ಕ ಅಪಾರ್ಟ್ ಮೆಂಟ್ ವೊಂದಕ್ಕೆ ಕರೆದೊಯ್ದರು. ಪ್ರತಿದಿನ ಮದ್ಯಪಾನ ಮಾಡಿ ತನ್ನನ್ನು, ತನ್ನ ಕುಟುಂಬದವರನ್ನು ನಿಂದಿಸುತ್ತಿದ್ದರು. ತನ್ನ ಆಸ್ತಿಯನ್ನು ಅವರ ಹೆಸರಿಗೆ ವರ್ಗಾಯಿಸುವಂತೆ ಪೀಡಿಸುತ್ತಿದ್ದರು. ಹಿಂಸೆ ತಾಳಲಾರದೆ ಅಲ್ಲಿಂದ ಬಿಟ್ಟು ಚೆನ್ನೈಗೆ ಬಂದೆ ಎಂದು ರಂಭಾ ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.
Comments are closed.