ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ನ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಗದಗದ ಕುವರ ಪುಟ್ಟರಾಜು ಮತ್ತು ಮಂಗಳೂರು ಮೂಲದ ಚಿತ್ರಾಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ನಿನ್ನೆ ಸಂಜೆ ಗದಗದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಪುಟ್ಟರಾಜು ಹಾಗೂ ಚಿತ್ರಾಲಿರನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು. ಮಹೇಂದ್ರ ಮೊದಲ ರನ್ನರ್ ಅಪ್ ಆಗಿದ್ದರೆ, ಅಮೋಘಾ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹೇಳಿದ್ದಾರೆ. ಆದರೆ ವಾಹಿನಿ ಕಡೆಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಗ್ರಾಂಡ್ ಫಿನಾಲೆ ಕಾರ್ಯಕ್ರಮದ ನೇರ ಪ್ರಸಾರವಾಗಿಲ್ಲ. ಇದು ಅಕ್ಟೋಬರ್ 1 ಮತ್ತು 2ರಂದು ಪ್ರಸಾರವಾಗುವ ಸಾಧ್ಯತೆಯಿದೆ. ಅಂತಿಮ ಸುತ್ತಿಗೆ ಅಚಿಂತ್ಯಾ, ತುಷಾರ್, ಪುಟ್ಟರಾಜು, ಚಿತ್ರಾಲಿ, ಅಮೋಘ, ಮಹೇಂದ್ರ, ರೇವತಿ ಹಾಗೂ ತೇಜಸ್ವಿನಿ ಆಯ್ಕೆಯಾಗಿದ್ದರು.
ಕಳೆದ ಏಪ್ರಿಲ್ 30ರಿಂದ ಡ್ರಾಮಾ ಜ್ಯೂನಿಯರ್ಸ್ ಝೀ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು. ಮಾಸ್ಟರ್ ಆನಂದ್ ಕಾರ್ಯಕ್ರಮದ ನಿರೂಪಣೆ ಹೊಣೆಯನ್ನು ನಿರ್ವಹಿಸಿದ್ದರೆ ತೀರ್ಪುಗಾರರಾಗಿ ಕಿರುತೆರೆ ನಿರ್ದೇಶಕ ಟಿಎನ್ ಸೀತಾರಾಮ್, ಹಿರಿಯ ಕಲಾವಿದೆ ಲಕ್ಷ್ಮಿ ಹಾಗೂ ನಟ ವಿಜಯ್ ರಾಘವೇಂದ್ರ ಭಾಗವಹಿಸಿದ್ದರು.
Comments are closed.