ಮನೋರಂಜನೆ

ಸುದೀಪ್‌ ಚಿತ್ರ ನಿರ್ದೇಶನ ಮಾಡ್ತೀನಿ ಅಂದಿಲ್ಲ: ನಿತ್ಯಾ

Pinterest LinkedIn Tumblr

nityaಕಳೆದ ನಾಲ್ಕೈದು ದಿನಗಳಿಂದ ಈ ತರಹದ್ದೊಂದು ಸುದ್ದಿ ಹರಿದಾಡುತ್ತಿದೆ. ಸುದೀಪ್‌ ಅಭಿನಯದಲ್ಲಿ ನಿತ್ಯ ಮೆನನ್‌ ಅವರು ಒಂದು ಚಿತ್ರವನ್ನು ನಿರ್ದೇಶಿಸುತ್ತಾರೆ ಎಂದು ಚರ್ಚೆಯಾಗುತ್ತಿದೆ. ಹಾಗಾದರೆ, ಆ ಚಿತ್ರ ಯಾವುದು ಮತ್ತು ಅದು ಶುರುವಾಗುವುದು ಯಾವಾಗ ಎಂಬ ಪ್ರಶ್ನೆ ಸಹಜವಾಗಿಯೇ ಬರುವುದು. ಈ ಕುರಿತು ನೇರವಾಗಿ ನಿತ್ಯ ಮೆನನ್‌ ಅವರನ್ನೇ ಕೇಳಿದರೆ, “ನಾನು ಹೇಳಿದ್ದು ಒಂದು, ಅದು ಆಗಿದ್ದು’ ಇನ್ನೊಂದು ಎನ್ನುತ್ತಾರೆ.

ಇತ್ತೀಚೆಗೆ ನಡೆದ “ಕೋಟಿಗೊಬ್ಬ 2′ ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ, ಸುದೀಪ್‌ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುತ್ತಿರುವ ಸುದ್ದಿ ನಿಜವೇ ಎಂದು ನೇರವಾಗ ಕೇಳಲಾಯಿತು. ಈ ಬಗ್ಗೆ ನಿತ್ಯ ಮೆನನ್‌ ಹೇಳಿದ್ದು ಹೀಗಿದೆ. “ನಾನು ಸ್ವಲ್ಪ ಬರೆಯುತ್ತೀನಿ ಮತ್ತು ಮುಂದೊಂದು ದಿನ ನನಗೆ ನಿರ್ದೇಶನ ಮಾಡಬೇಕೆಂಬ ಆಸೆ ಇದೆ. ಅದು ನಂತರದ ಮಾತು. ನಾನು ಯಾವಾಗ ಸುದೀಪ್‌ ಅವರ ಅಭಿನಯವನ್ನು ನೋಡುತ್ತಿದ್ದೆನೋ, ಆಗ ನನ್ನೊಳಗಿನ ರೈಟರ್‌ ಮತ್ತು ಡೈರೆಕ್ಟರ್‌ ಜಾಗೃತರಾಗುತ್ತಿದ್ದರು. ಏಕೆಂದರೆ, ಅವರನ್ನು ನೋಡಿ ನನಗೆ ಏನೇನೋ ಹೊಸ ಯೋಚನೆಗಳು ಬರುತ್ತಿದ್ದವು. ಅವರಿಂದ ಹೊಸದೇನನ್ನೋ ಮಾಡಿಸಬೇಕು ಎಂದು ಹೊಳೆಯುತಿತ್ತು. ಆಗ ಅವರಿಗೆ, ನಾನು ನಿರ್ದೇಶಕಿಯಾದರೆ ನಿಮ್ಮ ಅಭಿನಯದಲ್ಲಿ ಒಂದು ಚಿತ್ರ ಮಾಡುವಾಸೆ ಎನ್ನುತ್ತಿದ್ದೆ. ಅಷ್ಟೇ ಅಲ್ಲ, ನನ್ನಲ್ಲಿರುವ ಐಡಿಯಾಗಳನ್ನೂ ಹೇಳುತ್ತಿದ್ದರು. ಆಗ ಅವರು ನನ್ನನ್ನ ಪ್ರೋತ್ಸಾಹಿಸಿ, ನೀನು ಚಿತ್ರ ಮಾಡುವುದಾದರೆ, ನಾನು ರೆಡಿ ಎನ್ನುತ್ತಿದ್ದರು. ಅಷ್ಟೇ. ಅದರರ್ಥ, ನಾನು ಅವರಿಗೆ ಸಿನಿಮಾ ಮಾಡುತ್ತಿದ್ದೇನೆ ಅಥವಾ ಈಗಲೇ ಮಾಡುತ್ತಿದ್ದೇನೆ ಎಂದರ್ಥವಲ್ಲ’ ಎನ್ನುತ್ತಾರೆ ನಿತ್ಯ ಮೆನನ್‌.

ಇನ್ನು “ಕೋಟಿಗೊಬ್ಬ 2′ ಚಿತ್ರದಲ್ಲಿ ಅವರು ಅಭಿನಯಿಸುವುದಕ್ಕೆ ಒಪ್ಪಿಕೊಂಡಿದ್ದೇ ಸುದೀಪ್‌ಗಾಗಿಯಂತೆ. “ನಾನು ಕಮರ್ಷಿಯಲ್‌ ಸಿನಿಮಾ ಮಾಡಿಲ್ಲ. ನನ್ನ ಅಪ್ರೋಚ್‌ ಬೇರೆ. ಹಾಗಾಗಿ ಕಮರ್ಷಿಯಲ್‌ ಸಿನಿಮಾಗಳನ್ನು ಮಾಡಿರಲಿಲ್ಲ. ಇದೊಂದು ಕಮರ್ಷಿಯಲ್‌ ಸಿನಿಮಾ ಅಂತ ಈ ಚಿತ್ರದ ರೈಟರ್‌ ಶಿವಕುಮಾರ್‌ ಹೇಳಿದಾಗ, ನಾನು ಕಥೆ ಕೇಳುವುದಕ್ಕೆ ಒಪ್ಪಿಕೊಂಡಿದ್ದು ಇದು ಸುದೀಪ್‌ ಅವರ ಸಿನಿಮಾ ಅಂತ. ನಾನು ಸುದೀಪ್‌ ಅವರ ಚಿತ್ರಗಳನ್ನು ನೋಡಿದ್ದೀನಿ. ಅದರಲ್ಲೂ “ಈಗ’ ನೋಡಿ ಬಹಳ ಖುಷಿಯಾಗಿತ್ತು. ಒಬ್ಬ ಸ್ಟಾರ್‌ ನಟ, ಒಂದು ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವುದೇ ವಿಶೇಷ. ಇನ್ನು ಅವರ ಅಭಿನಯ ಸಹ ಬಹಳ ಚೆನ್ನಾಗಿತ್ತು. ವಾಟ್‌ ಎನ್‌ ಆರ್ಟಿಸ್ಟ್‌ ಅಂತ ಆಗಲೇ ಅನಿಸಿತ್ತು. ನಿಜವಾದ ಆರ್ಟಿಸ್ಟ್‌ಗಳು ಕಡಿಮೆಯಾಗುತ್ತಿರುವಾಗ ಅವರ ಜೊತೆಗೆ ನಟಿಸಬೇಕು ಅಂತ ಆಸೆ ಇತ್ತು. ಇನ್ನು ನನ್ನ ಪಾತ್ರ ಸಹ ಚೆನ್ನಾಗಿತ್ತು ಅನಿಸಿತ್ತು. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎನ್ನುತ್ತಾರೆ ನಿತ್ಯ ಮೆನನ್‌.

-ಉದಯವಾಣಿ

Comments are closed.