– ನಿರ್ದೇಶಕ ರವಿರಾಮ್ ಹೀಗೆ ಹೇಳಿದ್ದು “ರಾಜಾಸಿಂಹ’ ಸಿನಿಮಾ ಬಗ್ಗೆ. ವಿಷ್ಣುವರ್ಧನ್ ಶೈಲಿಯ ಸಿನಿಮಾ ಮಾಡುತ್ತಿರು ವುದರಿಂದ ಟೈಟಲ್ ಕೂಡಾ ಅವರ ಸಿನಿಮಾಗಳಂತೆ ಭಿನ್ನವಾಗಿ ರಬೇಕು ಮತ್ತು ತೂಕದ ಟೈಟಲ್ ಬೇಕೆಂಬ ಕಾರಣಕ್ಕೆ “ರಾಜಾಸಿಂಹ’ ಎಂದಿಡಲಾಗಿದೆ. ಕಳೆದ ವಾರ ಈ ಚಿತ್ರದ ಮುಹೂರ್ತವಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತದಲ್ಲಿ ಪುನೀತ್ ರಾಜಕುಮಾರ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ರವಿರಾಮ್ ಅವರ ಈ ಸಿನಿಮಾದ ಕಥೆಗೆ ಪ್ರೇರಣೆ ವಿಷ್ಣು ವರ್ಧನ್ ಅವರ “ಸಿಂಹಾದ್ರಿಯ ಸಿಂಹ’ ಚಿತ್ರದ ನರಸಿಂಹೇಗೌಡ ಪಾತ್ರ. ಆ ಪಾತ್ರವನ್ನು ಮೂಲವಾಗಿಟ್ಟುಕೊಂಡು ಈ ಸಿನಿಮಾದ ಕಥೆ ಮಾಡಿದ್ದಾರಂತೆ ರವಿರಾಮ್. “ಇದು ಎರಡು ವರ್ಷಗಳ ಶ್ರಮ. ಕಥೆ ಚೆನ್ನಾಗಿ ಆಗಬೇಕೆಂಬ ಕಾರಣಕ್ಕೆ ಎರಡು ವರ್ಷ ತೆಗೆದುಕೊಂಡು ಈ ಸ್ಕ್ರಿಪ್ಟ್ ಮಾಡಿದ್ದೇವೆ. ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನೋಡಿದಾಗ ಯಾವ ರೀತಿಯ ಫೀಲ್ ಬರುತಿತ್ತೋ ಈ ಸಿನಿಮಾದಲ್ಲೂ ಅಂತಹ ಫೀಲ್ ಸಿಗಲಿದೆ’ ಎಂಬುದು ರವಿರಾಮ್ ಅವರ ಮಾತು. ಅಂದಹಾಗೆ, ಅನಿರುದ್ಧ್ ಈ ಚಿತ್ರದ ನಾಯಕ. ನಿಖೀತಾ ನಾಯಕಿ. ವಿಶೇಷವೆಂದರೆ ಭಾರತಿ ವಿಷ್ಣು ವರ್ಧನ್ ಇಲ್ಲಿ ಅನಿರುದ್ಧ್ ತಾಯಿಯಾಗಿ ನಟಿಸಿದರೆ, ವಿಷ್ಣುವರ್ಧನ್ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ!
ವಿಷ್ಣುವರ್ಧನ್ ತಂದೆಯಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆಂದು ನೀವು ಕೇಳಬಹುದು. ಅವರು ಕೂಡಾ ಚಿತ್ರದ ಒಂದು ಪ್ರಮುಖ ಪಾತ್ರವಾಗಿರುತ್ತಾರಂತೆ. ಅಲ್ಲಿಗೆ ವಿಷ್ಣುವರ್ಧನ್ ಅವರನ್ನು ಈ ಚಿತ್ರದಲ್ಲಿ ರೀಕ್ರಿಯೇಟ್ ಮಾಡಲು ಚಿತ್ರತಂಡ ಹೊರಟಿದೆ. ಅದು ಅವರ ಹಿಂದಿನ ಚಿತ್ರಗಳ ಪಾತ್ರಗಳನ್ನು ಬಳಸಿಕೊಂಡೋ ಅಥವಾ ಗ್ರಾಫಿಕ್ ಮೂಲಕವೋ ಎಂಬುದನ್ನು ಚಿತ್ರತಂಡ ಈಗಲೇ ಬಾಯಿಬಿಡುತ್ತಿಲ್ಲ.
ನಾಯಕ ಅನಿರುದ್ಧ್ಗೆ ವಿಷ್ಣುವರ್ಧನ್ ಅವರ ಆದರ್ಶವಿರುವ ಸಿನಿಮಾದಲ್ಲಿ ನಟಿಸುತ್ತಿ ರುವ ಖುಷಿ. “ಇದೊಂದು ದೊಡ್ಡ ಮಟ್ಟದ ಚಿತ್ರ. ನಿರ್ಮಾಪಕ, ನಿರ್ದೇಶಕರು ಸಿನಿಮಾ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಎರಡು ವರ್ಷ ಕುಳಿತು ಒಳ್ಳೆಯ ಕಥೆ ಮಾಡಿದ್ದಾರೆ. ಮತ್ತೂಂದು ಖುಷಿಯ ವಿಚಾರವೆಂದರೆ ಈ ಚಿತ್ರದಲ್ಲಿ ಅಪ್ಪಾವ್ರ ಹಾಗೂ ಅಮ್ಮನ ಜೊತೆ ನಟಿಸುವ ಅವಕಾಶ ಸಿಗುತ್ತಿದೆ’ ಎಂಬುದು ಅನಿರುದ್ಧ್ ಮಾತು. ನಾಯಕಿಯಾಗಿ ನಟಿಸುತ್ತಿರುವ ನಿಖೀತಾಗೆ ಚಿತ್ರದ ಟೈಟಲ್ ತುಂಬಾ ಇಷ್ಟವಾಗಿದೆಯಂತೆ. “ಫೇಸ್ಬುಕ್, ಟ್ವೀಟರ್ನಲ್ಲಿ “ರಾಜಾಸಿಂಹ’ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದಾಗ ತುಂಬಾ ಒಳ್ಳೆಯ ಪ್ರತಿಕ್ರಿಯೆ ಬಂತು’ ಎಂದರು ನಿಖೀತಾ. ಚಿತ್ರದಲ್ಲಿ ಅನಿರುದ್ಧ್ ತಾಯಿಯಾಗಿ ನಟಿಸುತ್ತಿರುವ ಭಾರತಿ ವಿಷ್ಣುವರ್ಧನ್ ಅವರು ಇದನ್ನು ಮೊದಲ ಸಿನಿಮಾ ಎಂದುಕೊಂಡೇ ನಟಿಸುತ್ತಾರಂತೆ. ಜೊತೆಗೆ ಇದೊಂದು ಒಳ್ಳೆಯ ಪ್ರಯತ್ನ ಎನ್ನಲು ಅವರು ಮರೆಯಲಿಲ್ಲ. ಚಿತ್ರದಲ್ಲಿ ಅರುಣ್ ಸಾಗರ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಚಿತ್ರಕ್ಕಿದೆ.
-ರವಿಪ್ರಕಾಶ್ ರೈ
-ಉದಯವಾಣಿ