ಸರಿಯಾಗಿ 25 ವರ್ಷಗಳಾಗಿದ್ದವು ಬಾಲಿವುಡ್ ನಟಿ ಜೂಹಿ ಚಾವ್ಲಾ ಯಾವೊಂದು ಕನ್ನಡ ಚಿತ್ರದಲ್ಲಿ ನಟಿಸಿ. ಆಕೆ ಕಡೆಯದಾಗಿ ನಟಿಸಿದ ಕನ್ನಡ ಚಿತ್ರವೆಂದರೆ ಅದು “ಶಾಂತಿ-ಕ್ರಾಂತಿ’. ಆ ನಂತರ ಜೂಹಿ ಹಿಂದಿಯಲ್ಲಿ ಬಿಝಿಯಾದರು. ಒಂದರಹಿಂದೊಂದು ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಹೋದರು. ಈ ಮಧ್ಯೆ ಅವರನ್ನು ಕನ್ನಡಕ್ಕೆ ವಾಪಸ್ಸು ಕರೆತರುವ ಪ್ರಯತ್ನಗಳು ಆಗುತ್ತಲೇ ಇದ್ದವು.
“ಮಾಣಿಕ್ಯ’ ಚಿತ್ರದಲ್ಲಿ ಬಹುಶಃ ಜೂಹಿ, ರವಿಚಂದ್ರನ್ ಅವರ ಜೋಡಿಯಾಗಬಹುದು ಎಂದು ಸುದ್ದಿಯಾಗಿತ್ತು. ಜೂಹಿ ಬದಲು ರಮ್ಯಾ ಕೃಷ್ಣ ಅಭಿನಯಿಸಿದರು. ಆಮೇಲೆ “ರಣಧೀರ – ಪ್ರೇಮಲೋಕದಲ್ಲಿ’ ಚಿತ್ರದಲ್ಲಿ ಜೂಹಿ ನಟಿಸಬಹುದು ಎಂದು ರವಿಚಂದ್ರನ್ ಹಿಂಟ್ ಕೊಟ್ಟಿದ್ದರು. ಚಿತ್ರ ಶುರುವಾಗಲೇ ಇಲ್ಲ.
ಈಗ ಜೂಹಿ ಚಾವ್ಲಾ ಕೊನೆಗೂ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರಂತೆ. ರಮೇಶ್ ಅರವಿಂದ್, ರಚಿತಾ ರಾಮ್ ತಂದೆ-ಮಗಳಾಗಿ ಅಭಿನಯಿಸುತ್ತಿರುವ “ಪುಷ್ಪಕ ವಿಮಾನ’ ಚಿತ್ರದಲ್ಲಿ ಜೂಹಿ ಚಾವ್ಲಾ ಒಂದು ಪಾತ್ರ ಮಾಡುವುದಕ್ಕೆ ಒಪ್ಪಿದ್ದಾರಂತೆ. ಇದೊಂದು ಪ್ರಮುಖ ಪಾತ್ರವಾಗಿದ್ದು, ಮಾರ್ಚ್ 27ರಿಂದ ನಾಲ್ಕು ದಿನಗಳ ಕಾಲ ಜೂಹಿ ಚಾವ್ಲಾ ಕಾಲ್ಶೀಟ್ ಕೊಟ್ಟಿದ್ದಾರೆ ಎಂದು ಆ ಚಿತ್ರದ ನಿರ್ಮಾಪಕ ವಿಖ್ಯಾತ್ ಹೇಳಿದ್ದಾರೆ. ಈ ಕುರಿತು ಜೂಹಿ ಜೊತೆಗೆ ಈಗಾಗಲೇ ಅಗ್ರೀಮೆಂಟ್ ಸಹ ಆಗಿದೆಯಂತೆ. ಇನ್ನು ಜೂಹಿ ಬರುವುದೊಂದೇ ಬಾಕಿ.
-ಉದಯವಾಣಿ