ಮೀರ್ಪುರ್, ಮಾ.2-ಏಷ್ಯಾ ಕಪ್ನಲ್ಲಿ ಸೋಲು ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ಗೆ ನಮ್ಮ ತಂಡದ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಭಾರ ನಾಯಕ ಆಂಜುಲೋ ಮ್ಯಾಥ್ಯೂ ಹೇಳಿದ್ದಾರೆ. ಸತತ ಸೋಲು ಆಘಾತಕಾರಿ ವಿಷಯ.
ಇದು ತಂಡದ ಕ್ಷಮತೆ ಹಾಗೂ ಆತ್ಮಸ್ಥೈರ್ಯಕ್ಕೂ ಪೆಟ್ಟು ಕೊಟ್ಟಿದೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಮುಂದಿನ ವಾರ ಭಾರತದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಇದು ನಮ್ಮನ್ನು ಕಾಡಲಿದೆ ಎಂದು ಮ್ಯಾಥ್ಯೂ ಬೇಸರ ವ್ಯಕ್ತಪಡಿಸಿದ್ದಾರೆ.
ಏಷ್ಯಾ ಕಪ್ನ ಚಾಂಪಿಯನ್ ಪಟ್ಟದಲ್ಲಿರುವ ನಾವು ಪ್ರಶಸ್ತಿ ಬಿಟ್ಟುಕೊಡುವ ಹಂತಕ್ಕೆ ತಲುಪುತ್ತಿದ್ದೇವೆ. ಇಂದು ನಡೆಯಲಿರುವ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಫಲಿತಾಂಶವನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದಕ್ಕೆ ತಂಡದಲ್ಲಿರುವ ಕೆಲವು ಹಿರಿಯ ಆಟಗಾರರನ್ನು ಹೊಣೆ ಮಾಡುವುದು ಸರಿಯಲ್ಲ. ಸೂಕ್ತ ಸಂದರ್ಭದಲ್ಲಿ ಆಯ್ಕೆಗಾರರು ಮುಂದಿನ ಪಂದ್ಯಗಳಿಗೆ ಸಮರ್ಥರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.