ಬೆಂಗಳೂರು: ರಾಮ್ ಗೋಪಾಲ್ ವರ್ಮಾ ಅವರ ಮುಂದಿನ ಸಿನೆಮಾ ‘ಕಿಲ್ಲಿಂಗ್ ವೀರಪ್ಪನ್’ನ ಟ್ರೇಲರ್ ಗಳು ಮತ್ತು ಪೋಸ್ಟರ್ ಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ ಎಂಬ ಸುದ್ದಿಯೊಂದಿಗೆ, ಬಲ್ಲ ಮೂಲಗಳ ಪ್ರಕಾರ ಹಿಂದಿ ಸಿನೆಮಾಗೆ ಹಿಂದಿರುಗಲು ಅವರಿಗೆ ಕರೆ ಬಂದಿದೆಯಂತೆ.
ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರವನ್ನು ಪ್ರಚಾರ ಮಾಡುವಲ್ಲಿ ನಿರತರಾಗಿರುವ ಆರ್ ಜಿ ವಿ ಈ ಸಿಹಿ ಸುದ್ದಿ ಆಪ್ತರಲ್ಲಿ ಹಂಚಿಕೊಂಡಿದ್ದಾರಂತೆ. “ಆರ್ ಜಿ ವಿ ಅವರೊಂದಿಗೆ ನಡೆಸಿದ ಮಾತುಕತೆಯ ಪ್ರಕಾರ, ‘ಕಂಪನಿ’ ಸಿನೆಮಾದ ಎರಡನೇ ಭಾಗವನ್ನು ನಿರ್ದೇಶಿಸಲು ರಿಲಾಯನ್ಸ್ ಸಂಸ್ಥೆ ಅವಕಾಶ ನೀಡಿದೆಯಂತೆ” ಎಂದು ಮೂಲಗಳು ತಿಳಿಸಿವೆ.
ಕಿಲ್ಲಿಂಗ್ ವೀರಪ್ಪನ್ ಆರ್ ಜಿ ವಿ ಅವರಿಗೆ ಬಾಲಿವುಡ್ ಗೆ ಹಿಂದಿರುಗಲು ಮೆಟ್ಟಿಲಾಗುತ್ತದೆ ಎಂದು ಹಲವು ಸಿನೆಮಾ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ ಇನ್ನೂ ಹಲವರು ಇದು ನಟ ಶಿವರಾಜ್ ಕುಮಾರ್ ಅವರಿಗೆ ಅತಿ ದೊಡ್ಡ ಬ್ರೇಕ್ ನೀಡಲಿದೆ ಎನ್ನುತ್ತಿದ್ದಾರೆ.
“ಆರ್ ಜಿ ವಿ ‘ಕಿಲ್ಲಿಂಗ್ ವೀರಪ್ಪನ್’ ಸಿನೆಮಾದ ನಿರ್ಮಾಪಕರ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಗೆ ಹಿಂದಿರುಗಲು ‘ಕಿಲ್ಲಿಂಗ್ ವೀರಪ್ಪನ್’ ಮತ್ತು ಶಿವಣ್ಣ ಕಾರಣ ಎಂದಿದ್ದಾರೆ” ಎಂದು ಮೂಲಗಳು ತಿಳಿಸಿವೆ. ಅಲ್ಲದೆ ರೈ ಒಡಗೂಡಿ ಮತ್ತೊಂದು ಕನ್ನಡ ಭೂಗತ ಸಿನೆಮಾ ನಿರ್ದೇಶಿಸುತ್ತಿದ್ದು, ಅದರಲ್ಲೂ ಕೂಡ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.