ಮಧುಗಿರಿ, ಡಿ.21- ಐದು ಹುಡಗರೊಂದಿಗೆ ಓರ್ವ ಯುವತಿ ಒಳಗೊಂಡ ತಂಡ ಮಧುಗಿರಿ ಏಕಾಶಿಲಾ ಬೆಟ್ಟದ ಮೇಲೆ ರಾತ್ರಿ ವೇಳೆ ಮಲಗಲು ಸಜ್ಜಾಗಿದ್ದನ್ನು ಅರಿತ ಪೊಲೀಸರು ಹರಸಾಹಸ ಪಟ್ಟು ಬೆಟ್ಟದಿಂದ ಕೆಳಗಿಳಿಸಿದ ಪ್ರಸಂಗ ನಡೆದಿದೆ.
ಈ ತಂಡ ಬೆಟ್ಟದ ತಪ್ಪಲಿಗೆ ಜೂಮ್ ಕಾರಿನಲ್ಲಿ ಬಂದಿಳಿದು ಡೇರೆ, ಸ್ಲೀಪಿಂಗ್ ಬ್ಯಾಗ್ಸ್ ಮತ್ತು ಕ್ಯಾಮೆರಾಗಳನ್ನು ಕೊಂಡೊಯ್ಯುವುದನ್ನು ಗಮನಿಸಿದ್ದ ಕುರಿಗಾಹಿಗಳು ಮಾಧ್ಯಮದವರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರ ಸಹಕಾರದೊಂದಿಗೆ ಕಾರಿನ ಮೇಲಿದ್ದ ದೂರವಾಣಿ ಸಂಖ್ಯೆ ಆಧರಿಸಿ ಕರೆ ಮಾಡಿದಾಗ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ಸಹಾಯಕ ಪ್ರೊ.ವಿಘ್ಞೇಶ್ ವಾಹನ ಬಾಡಿಗೆ ಪಡೆದು ಬಂದಿರುವುದಾಗಿ ಮಾಹಿತಿ ನೀಡಿದ ವಿದ್ಯಾರ್ಥಿಗಳು ದಂಡವನ್ನಾದರೂ ಕಟ್ಟುವೆವು ಈ ರಾತ್ರಿ ಬೆಟ್ಟದಿಂದ ಕೆಳೆಗೆ ಬಾರೆವು ಎಂಬ ಉತ್ತರ ನೀಡಿ ಸಂಪರ್ಕ ಕಡಿತಗೊಳಿಸಿದರು.
ಇದಾದ ಹತ್ತು ನಿಮಿಷದಲ್ಲಿ ರಾಜಧಾನಿಯ ಉನ್ನತ ಪೊಲೀಸ್ ಅಧಿಕಾರಿಯೂಬ್ಬರು ಇಲ್ಲಿನ ಅಧಿಕಾರಿಗಳಿಗೆ ಕರೆ ಮಾಡಿ ಬೆಟ್ಟದ ಮೇಲಿರುವವರಿಗೆ ಯಾವುದೇ ತೂಂದರೆ ನೀಡಬೇಡಿ ಎಂಬ ಮಾತಿನಿಂದ ಪಟ್ಟಣದ ಪೊಲೀಸ್ ಪಡೆ ಬೆಚ್ಚಿ ಬಿದ್ದಿತು.
ಆ ವೇಳೆಗಾಗಲೇ ಮಧುಗಿರಿಯ ಯುವ ಸಮುದಾಯ ಬೆಟ್ಟದ ಮೇಲೆ ಕಾಣುತ್ತಿದ್ದ ಬೆಳಕಿನಿಂದ ಪ್ರವಾಸಿಗರು ಅಪತ್ತಿಗೆ ಸಿಲುಕಿದ್ದಾರೆಂದು ಭಾವಿಸಿ ಬೆಟ್ಟವೇರಲು ಮುಂದಾಗಿತ್ತು. ಜನರನ್ನು ಬೆಟ್ಟ ಹತ್ತಲು ಬಿಡಲಾಗದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಪೊಲೀಸರದಾಗಿತ್ತು. ಈ ನಡುವೆ ಸಾರ್ವಜನಿಕರು ಬೆಟ್ಟದಲ್ಲಿ ತಂಗಲು ಯಾರಿಗೂ ಅವಕಾಶ ನೀಡದಂತೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳಾದ ಸಬೀನ್, ಸೂರಜ್, ಮಹಾತೀಶ್ವರ್, ವಿನೀತ, ಪ್ರತ್ಯಕ್ಷಾ, ಮಾನ್ವೀಂದರ್ ಎಂಬುವರನ್ನು ರಾತ್ರಿ 11ರ ವೇಳೆಯಲ್ಲಿ ಮನವೂಲಿಸಿ ಕೆಳಕ್ಕಿಳಿಸಿದರು.
ಇತ್ತೀಚೆಗೆ ಮಧುಗಿರಿ ಬೆಟದಲ್ಲಿ ನಾಪತ್ತೆ ಹಾಗೂ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೋಲಿಸರಿಗೆ ಕರ್ತವ್ಯ ನಿರ್ವಹಿಸಲು ಕಷ್ಟಕರವಾಗುತ್ತಿದ್ದು ,ಬೆಟ್ಟವು ಪುರಾತತ್ವ ಇಲಾಖೆಗೆ ಸಂಬಂಧಪಟ್ಟಿದ್ದು ಇಲಾಖೆಯಾಧಿಕಾರಿಗಳು ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ. ಬೆಟ್ಟವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಹಾಗೂ ಚಾರಣಿಗರು ಈ ಬೆಟ್ಟವು ಚಾರಣಕ್ಕೆ ಸುಲಭವಾಗಿದೆ ಎಂಬ ಕಲ್ಪನೆ ಇದೆ. ಆದರೆ, ಅದಕ್ಕೆ ಅನುಗುಣವಾಗಿ ಈ ಬೆಟ್ಟವಿಲ್ಲ. ಇಲ್ಲಿಗೆ ಬರುವವರಿಗೆ ಬೆಟ್ಟದ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಅಗತ್ಯ ಸೌಕರ್ಯದಿಂದ ವಂಚಿತವಾಗಿದೆ.