ಮಂಗಳೂರು ಬೆಡಗಿ ಮಾನ್ವಿತಾ ಸಖತ್ ಖುಷಿಯಲ್ಲಿದ್ದಾರೆ. ಕಾರಣ, ಅವರ ನಟನೆಯ ಮೊದಲ ಚಿತ್ರ ‘ಕೆಂಡಸಂಪಿಗೆ’ಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಅದರಲ್ಲೂ ಮಾನ್ವಿತಾ ನಿಭಾಯಿಸಿರುವ ಗೌರಿ ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಎಷ್ಟರಮಟ್ಟಿಗೆಂದರೆ, ‘ನಾನು ಮದುವೆಯಾಗುವ ಹುಡುಗಿ ಗೌರಿಯ ಹಾಗೆ ಇರಬೇಕು’ ಎನ್ನುತ್ತಿದ್ದಾರಂತೆ ಯುವ ಅಭಿಮಾನಿಗಳು!
ಈ ಪರಿ ಪ್ರಶಂಸೆ ಹರಿದುಬಂದಿದ್ದು
‘…ಸಂಪಿಗೆ’ ತಂಡ ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ. ಚಿತ್ರದಲ್ಲಿ ಮುದ್ದು ಪೆದ್ದಾಗಿ ಕಾಣಿಸಿಕೊಂಡಿರುವ ಮಾನ್ವಿತಾ, ನಾಯಕನಿಗೆ ‘ಚಿನ್ನಿ’ ಅಂತ ಕರೆಯುತ್ತಾರೆ. ಅವರು ಹಾಗೆ ಕರೆಯುವ ಶೈಲಿಯೂ ಈಗ ಸಖತ್ ಫೇಮಸ್. ಕೆಲ ಅಭಿಮಾನಿಗಳು ‘ಒಂದೇ ಒಂದು ಸಾರಿ ‘ಚಿನ್ನಿ’ ಅಂತ ಕರೆಯಿರಿ ಪ್ಲೀಸ್…’ ಎಂದು ಮನವಿ ಮಾಡಿಕೊಂಡರಂತೆ. ಇದು ಕೇವಲ ಬೆಂಗಳೂರು ಪ್ರೇಕ್ಷಕರ ಪ್ರತಿಕ್ರಿಯೆ. ಜರ್ನಿ ಚಿತ್ರವಾಗಿರುವ ‘..ಸಂಪಿಗೆ’ಯಲ್ಲಿ ಹಿರಿಯೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ನಗರಗಳನ್ನು ಸುಂದರವಾಗಿ ತೋರಿಸಲಾಗಿದೆ. ಹಾಗಾಗಿ ಆ ಊರುಗಳ ಜನರಿಂದಲೂ ಪ್ರತಿಕ್ರಿಯೆ ಸ್ವೀಕರಿಸಬೇಕೆಂಬುದು ಮಾನ್ವಿತಾ ಆಸೆ. ಆ ನಗರಗಳಿಗೂ ಚಿತ್ರತಂಡದೊಟ್ಟಿಗೆ ಪ್ರಯಾಣ ಬೆಳೆಸುವ ಅಲೋಚನೆ ಅವರಲ್ಲಿದೆ.
ಮತ್ತೊಂದು ಇಂಟರೆಸ್ಟಿಂಗ್ ವಿಚಾರವೆಂದರೆ, ‘ಕೆಂಡಸಂಪಿಗೆ’ ಚಿತ್ರ ಕರ್ನಾಟಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ ಎಂಬುದು ಮಾನ್ವಿತಾ ನಂಬಿಕೆ. ಹೇಗೆ ಅಂತೀರಾ? ಛಾಯಾಗ್ರಾಹಕ ಸತ್ಯ ಹೆಗಡೆ ಚಿತ್ರದುರ್ಗದ ಸೊಬಗನ್ನು ಸೆರೆಹಿಡಿದಿರುವ ಪರಿಗೆ ಮಾನ್ವಿತಾ ಅವರ ವಿದೇಶಿ ಸ್ನೇಹಿತರು ಮನಸೋತಿದ್ದು, ಈ ಬಾರಿ ರಜೆಗೆ ಅವರೆಲ್ಲರೂ ತಪ್ಪದೇ ಚಿತ್ರದುರ್ಗಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರಂತೆ. ಇಷ್ಟೆಲ್ಲ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವಾಗಲೂ ‘ಕೆಂಡಸಂಪಿಗೆ’ಯ ಚಿತ್ರಮಂದಿರಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಮಾನ್ವಿತಾಗೆ ಬೇಸರ ಮೂಡಿಸಿದೆ.