ಗಾಂಧಿನಗರದಲ್ಲಿ ಈಗ ಮತ್ತೆ ‘ಬ್ರಹ್ಮ ವಿಷ್ಟು ಮಹೇಶ್ವರ’ ಅವತಾರ ಶುರುವಾಗಿದೆ. ನಟರಾದ ಅಂಬರೀಷ್, ಅನಂತ್ನಾಗ್ ಹಾಗೂ ರವಿಚಂದ್ರನ್ ಅಭಿನಯದಲ್ಲಿ ಈ ಹಿಂದೆ ಬಂದಿದ್ದ ‘ಬ್ರಹ್ಮ ವಿಷ್ಣು ಮಹೇಶ್ವರ’ ಚಿತ್ರದ ಶೀರ್ಷಿಕೆಯಲ್ಲಿಯೇ ಹೊಸ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಮುಗಿಸಿಕೊಂಡು ಇತ್ತೀಚಿಗೆ ಆಡಿಯೋ ಬಿಡುಗಡೆ ಕೂಡ ನಡೆಯಿತು.
ಸ್ವರೂಪ್ ಚಿತ್ರದ ನಿರ್ದೇಶಕರು. ಮೂವರು ಚಿತ್ರದ ನಾಯಕರು. ಕಥೆ, ಚಿತ್ರಕಥೆ, ನಿರ್ಮಾಣದ ಸ್ವರೂಪ ಎಲ್ಲವೂ ಬೇರೆಯಾದ ರೀತಿಯಲ್ಲಿದೆ. ಹಿಂದಿನ ‘ಬ್ರಹ್ಮ ವಿಷ್ಣು ಮಹೇಶ್ವರ’ರಿಗೂ ಇವತ್ತಿನ ಬ್ರಹ್ಮ ವಿಷ್ಣು ಮಹೇಶ್ವರರಿಗೂ ಯಾವುದೇ ಸಂಬಂಧವಿಲ್ಲ. ಅದೇ ಬೇರೆ, ಇದೇ ಬೇರೆ ಎನ್ನುವುದು ಚಿತ್ರದ ನಿರ್ದೇಶಕ ಸ್ವರೂಪ್ ಅವರ ಮಾತು. ಅವರ ಮಾತುಗಳ ಹಾಗೆ, ಈ ಕಾಲದ ‘ಬ್ರಹ್ಮ ವಿಷ್ಣು ಮಹೇಶ್ವರ’ ಒಂದು ಹೊಸ ತೆರನಾದ ಹೊಸಬರ ಪ್ರಯತ್ನ.
ವಿದೇಶದಲ್ಲಿರುವ ಉದ್ಯಮಿ ಹರೀಶ್ ಜಿ. ಶಂಕರ್ ಮತ್ತವರ ಸ್ನೇಹಿತರಾದ ಅಜಯ್ ಮತ್ತು ಅಭಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಂಜನ್ ದೇವ್, ಸುನೀಲ್ ಹಾಗೂ ಪ್ರೀತಮ್ ನಾಯಕರಾದರೆ, ಕೀರ್ತಿ ಲಕ್ಷ್ಮೀ, ಜೀವಿಕಾ ಹಾಗೂ ಐಶ್ವರ್ಯ ಚಿತ್ರದ ನಾಯಕಿಯರು. ನರ್ಸ್ ಜಯಲಕ್ಷ್ಮಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರದ ಮತ್ತೊಂದು ಹೈಲೆಟ್ಸ್.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅರಸು ಅಂತಾರೆ, ವಿ ಮನೋಹರ್ ಸಾಹಿತ್ಯ ಒದಗಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತದ ಜತೆಗೆ ಗಾಯಕರಾಗಿಯೂ ತಮ್ಮ ಕಂಥ ಸಿರಿ ಮೊಳಗಿಸಿದ್ದಾರೆ. ನಟ ಶ್ರೀ ಮುರಳಿ ಧ್ವನಿ ಸುರಳಿ ಬಿಡುಗಡೆಗೊಳಿಸಿದರು.