ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದಲ್ಲಿ ಅಸ್ಲಾಂ ಖಾನ್ ಪಾತ್ರ ನಿರ್ವಹಿಸಿರುವ ಖ್ಯಾತ ಕನ್ನಡ ನಟ ಕಿಚ್ಚ ಸುದೀಪ್ ಚಿತ್ರದಲ್ಲಿನ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
‘ಬಾಹುಬಲಿ’ ಚಿತ್ರದಲ್ಲಿ ತಮ್ಮ ಪಾತ್ರ ಚಿಕ್ಕದಾದರೂ ಅದಕ್ಕೆ ಸಾಕಷ್ಟು ಹೋಮ್ ವರ್ಕ್ ಮಾಡಲಾಗಿದೆ. ಪಾತ್ರ ಹೇಗೆ ಮೂಡಿ ಬರಬೇಕೆಂಬುದರ ಕುರಿತೇ ಹಲವು ಬಾರಿ ಸಮಾಲೋಚನೆ ನಡೆಸಲಾಗಿದೆ. ಕೆಲವೇ ಕ್ಷಣ ತಾವು ಚಿತ್ರದಲ್ಲಿ ಕಾಣಿಸಿಕೊಂಡರೂ ‘ಬಾಹುಬಲಿ’ ಚಿತ್ರದ ಒಂದು ಭಾಗವಾಗಿರುವುದಕ್ಕೆ ತಮಗೆ ಹೆಮ್ಮೆಯೆನಿಸುತ್ತಿದೆ ಎಂದು ಸುದೀಪ್ ಹೇಳಿದ್ದಾರೆ.
ಅಲ್ಲದೇ ‘ಈಗ’ ಚಿತ್ರದ ಬಳಿಕ ರಾಜಮೌಳಿಯವರ ಜೊತೆ ಮತ್ತೆ ಕೆಲಸ ಮಾಡಿರುವುದು ತಮಗೆ ಸಂತೋಷ ತಂದಿದೆ ಎಂಬುದಾಗಿಯೂ ಸುದೀಪ್ ಹೇಳಿದ್ದಾರೆ. ‘ಬಾಹುಬಲಿ’ ಯ ಎರಡನೇ ಭಾಗದಲ್ಲಿಯೂ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ಮಾತು ಕೇಳಿ ಬಂದಿದ್ದು, ಈ ಕುರಿತು ಸುದೀಪ್ ಹೆಚ್ಚಿನ ವಿವರ ನೀಡಿಲ್ಲ. ‘ಬಾಹುಬಲಿ’ ಚಿತ್ರದ ಬಗ್ಗೆ ಇಡೀ ಭಾರತೀಯ ಚಿತ್ರರಂಗವೇ ಬೆರಗಾಗಿದ್ದು, ಈ ಕುರಿತು ಟ್ವೀಟ್ ಮಾಡಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್, ಚಿತ್ರರಂಗದಲ್ಲಿ ರಾಜಮೌಳಿಯವರಂತಹ ನಿರ್ದೇಶಕರಿರುವುದು ಭಾರತೀಯರಿಗೆ ಹೆಮ್ಮೆ ತರುವ ವಿಚಾರ ಎಂದು ಕೊಂಡಾಡಿದ್ದಾರೆ.