ನಿರೂಪಕನಾಗಿ ನಟನೆ ಕ್ಷೇತ್ರಕ್ಕೆ ಹೊರಳಿದ ರಾಹುಲ್, ಸುದೀಪ್ ಮಾರ್ಗದರ್ಶನದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ.
ನನ್ನುಸಿರೇ, ಅಭಿಮಾನಿ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ಹೃದಯದಲ್ಲಿ ಇದೇನಿದು ಚಿತ್ರಗಳನ್ನು ಮಾಡಿಯೂ ನಟನೆಯಲ್ಲಿ ಪರಿಪೂರ್ಣತೆಯನ್ನು ಕಂಡುಕೊಳ್ಳದ ಹಿನ್ನೆಲೆಯಲ್ಲಿ ಮಾರ್ಗದರ್ಶಕಾರಿಗಾಗಿ ಕಾಯುತ್ತಿದ್ದ ರಾಹುಲ್ ಕಣ್ಣಿಗೆ ಬಿದ್ದದ್ದು ಸ್ಯಾಂಡಲ್ ವುಡ್ ನಲ್ಲಿ ಮುಂಚೂಣಿಯಲ್ಲಿರುವ ಸುದೀಪ್. ಅಂತಿಮವಾಗಿ ಸುದೀಪ್ ಮಾರ್ಗದರ್ಶನದಲ್ಲಿ ತಮಿಳು ಭಾಷೆಯ ಜಿಗರ್ಥಂಡಾ ಚಿತ್ರವನ್ನು ಕನ್ನಡಲ್ಲಿ ರೀಮೇಕ್ ಮಾಡುತ್ತಿದ್ದಾರೆ.
ರಾಹುಲ್ ಅಭಿನಯಿಸುತ್ತಿರುವ ರೀಮೇಕ್ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸುದೀಪ್ ಬ್ಯಾನರ್ ನಲ್ಲೇ ತಯಾರಾಗುತ್ತಿದ್ದು, ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕ್ಯಾಪ್ಟನ್ ಸುದೀಪ್ ತೋರಿದ ಕಾಳಜಿಗೆ ರಾಹುಲ್ ಸಂತಸ ವ್ಯಕ್ತಪಡಿಸಿದ್ದಾರೆ. “ಕ್ಯಾಪ್ಟನ್ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ನನ್ನನ್ನು ಕುಟುಂಬ ಸದಸ್ಯನಂತೆಯೇ ನೋಡಿಕೊಂಡಿದ್ದಾರೆ. ಅರ್ಜುನ್ ಜನ್ಯ, ಎ ಹರ್ಷ, ನಂದ ಕಿಶೋರ್ ಸೇರಿದಂತೆ ಹಲವು ಪ್ರತಿಭೆಗಳನ್ನು ಸುದೀಪ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ” ಎಂದು ರಾಹುಲ್ ಹೇಳಿದ್ದಾರೆ.
ಸಿಸಿಎಲ್ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಧನುಷ್ ನ ವೇಲೆ ಇಲ್ಲೆ ಪತ್ತಾತ್ರಿ( ನಿರುದ್ಯೋಗಿ ಪದವೀಧರ) ಎಂಬ ಸಿನಿಮಾವನ್ನು ರೀಮೇಕ್ ಮಾಡಲು ಮುಂದಾಗಿದ್ದೆ, ಆದರೆ ಆ ಸಿನಿಮಾದ ಬದಲು ಜಿಗರ್ಥಂಡಾ ಸಿನಿಮಾ ಹೆಚ್ಚು ಹೊಂದಾಣಿಕೆಯಾಗುವುದರಿಂದ ರೀಮೇಕ್ ಮಾಡುವಂತೆ ಸುದೀಪ್ ಸೂಚಿಸಿದರು ಅದಕ್ಕಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದೇನೆ, ಮೂರು ವರ್ಷಗಳ ನಂತರ ಮತ್ತೆ ನಟಿಸುತ್ತಿದ್ದು ಸುದೀಪ್ ಅವರ ಮಾರ್ಗದರ್ಶನದಲ್ಲಿ ನಟನೆ ಬಗ್ಗೆ ಸಾಕಷ್ಟು ಕಲಿತಿದ್ದೇನೆ ಎಂದು ರಾಹುಲ್ ತಿಳಿಸಿದ್ದಾರೆ.