ಕರಣ್ ಜೋಹರ್ ಕನಸಿನ ಪ್ರಾಜೆಕ್ಟ್ ‘ಶುದ್ಧಿ’ ಚಿತ್ರದಿಂದ ಸಲ್ಮಾನ್ ಖಾನ್ ಅವರನ್ನು ಇತ್ತೀಚೆಗಷ್ಟೇ ಚಿತ್ರದಿಂದ ಕೈಬಿಡಲಾಗಿತ್ತು, ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಂದಿದೆ; ಇದೀಗ ಸಂಜಯ್ ದತ್ ಕೂಡ ‘ಶುದ್ಧಿ’ಗೆ ಗುಡ್ಬೈ ಹೇಳಿದ್ದಾರಂತೆ!
ಸಿನಿಮಾ ಸೆಟ್ಟೇರದಿದ್ದರೇನಂತೆ, ಒಂದಿಲ್ಲೊಂದು ಕಾರಣಕ್ಕಾಗಿ ಸುದ್ದಿಯಾಗುತ್ತಲೇ ಇದೆ ಕರಣ್ ಜೋಹರ್ ಕನಸಿನ ಪ್ರಾಜೆಕ್ಟ್ ‘ಶುದ್ಧಿ’. ಮುಖ್ಯಪಾತ್ರದಲ್ಲಿ ನಟಿಸಬೇಕಿದ್ದ ಸಲ್ಮಾನ್ ಖಾನ್ ಅವರನ್ನು ಇತ್ತೀಚೆಗಷ್ಟೇ ಚಿತ್ರದಿಂದ ಕೈಬಿಡಲಾಗಿತ್ತು. ಸಲ್ಮಾನ್ ಮೇಲೆ ಜೈಲು ಶಿಕ್ಷೆಯ ತೂಗುಗತ್ತಿ ನೇತಾಡುತ್ತಿರುವುದೇ ಇದಕ್ಕೆ ಕಾರಣ ಎಂಬುದನ್ನೂ ಬಿಡಿಸಿ ಹೇಳಬೇಕಿಲ್ಲ. ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಂದಿದೆ; ಇದೀಗ ಸಂಜಯ್ ದತ್ ಕೂಡ ‘ಶುದ್ಧಿ’ಗೆ ಗುಡ್ಬೈ ಹೇಳಿದ್ದಾರಂತೆ!
ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಸಂಜಯ್ ವಿಲನ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಸದ್ಯ ಜೈಲುವಾಸ ಅನುಭವಿಸುತ್ತಿರುವ ಅವರು ಬಿಡುಗಡೆಯಾಗುತ್ತಿದ್ದಂತೆ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯೂ ಸಿದ್ಧವಾಗಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಸಂಜಯ್ ವರಸೆ ಬದಲಿಸಿದ್ದಾರಂತೆ. ಜೈಲಿನಿಂದ ಹೊರಬರುತ್ತಿದ್ದಂತೆಯೇ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟಪಡದ ಅವರು, ಈ ನಿರ್ಧಾರ ತಳೆದಿದ್ದಾರೆ ಎಂದೇ ಬಣ್ಣಿಸಲಾಗುತ್ತಿದೆ. ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ‘ಓ ಮೈ ಗಾಡ್’ ಖ್ಯಾತಿಯ ಉಮೇಶ್ ಶುಕ್ಲಾ ನಿರ್ದೇಶಿಸಲಿರುವ ಮುಂದಿನ ಚಿತ್ರದಲ್ಲಿ ಸಂಜಯ್ ಹೀರೋ ಆಗಿ ಅಭಿನಯಿಸಲಿದ್ದಾರೆ!
ಮಜಾ ಅಂದರೆ, ‘ಶುದ್ಧಿ’ ನಿರ್ವಪಕ ಕರಣ್ ಜೋಹರ್ ಈ ಕುರಿತು ಬೇರೇನೆ ಹೇಳುತ್ತಾರೆ. ‘ನಮ್ಮ ಚಿತ್ರದಲ್ಲಿ ವಿಲನ್ ಪಾತ್ರ ತುಂಬ ಖಡಕ್ ಆಗಿರಲಿದೆ. ನಾವು ಎಂದಿಗೂ ಸಂಜಯ್ ಜೊತೆ ಮಾತುಕತೆ ನಡೆಸಿಯೇ ಇಲ್ಲ. ನಟರ ಹುಡುಕಾಟದಲ್ಲಿದ್ದೇವೆ ಅಷ್ಟೇ’ ಎಂದು ಊಹಾಪೋಹಗಳಿಗೆಲ್ಲ ಬ್ರೇಕ್ ಹಾಕಿದ್ದಾರೆ.