ಮನೋರಂಜನೆ

ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ರಾಜಕೀಯ ನೇತಾರರ ಮಕ್ಕಳು

Pinterest LinkedIn Tumblr

nikhil-anoop

ನಿಖಿಲ್ ಗೌಡ                                                 ಅನೂಪ್

ಬೆಂಗಳೂರು, ಜೂ.8: ಚಿತ್ರರಂಗದಲ್ಲಿ ಹೆಸರು, ಖ್ಯಾತಿ ಗಳಿಸಿದ ನಂತರ ರಾಜಕಾರಣದಲ್ಲಿ ಮಿಂಚಲು ಹೊರಟ ಸಿನಿಮಾ ಮಂದಿಯ ಏಳು-ಬೀಳು ಕಣ್ಣಮುಂದೆ ಇರುವಾಗಲೇ ರಾಜಕಾರಣದ ಕುಟುಂಬಗಳಿಂದ ಬಂದ ಹುಡುಗರು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ರಂಗಪ್ರವೇಶಕ್ಕೆ ವೇದಿಕೆ ಸಜ್ಜಾಗಿರುವ ಬೆನ್ನಲ್ಲೇ, ಇದೇ ಶುಕ್ರವಾರ ಮತ್ತೊಬ್ಬ ರಾಜಕಾರಣಿ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಅವರ ಪುತ್ರ ಅನೂಪ್ ಅಧಿಕೃತವಾಗಿ ಚಿತ್ರರಂಗ ಪ್ರವೇಶಿಸಲು ವೇದಿಕೆ ಸಜ್ಜಾಗಿದೆ.

ಇದಾದ ಬೆನ್ನಲ್ಲೇ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್, ಚಿತ್ರರಂಗ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಬೇಕಾಗುವ ಅಭಿನಯ, ನೃತ್ಯ ಸೇರಿದಂತೆ ನಟನೆಯ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಮಾಜಿ ಸಚಿವ ಎಚ್.ಎಂ. ರೇವಣ್ಣನವರ ಪುತ್ರ ಅನೂಪ್ ಮೊದಲ ಬಾರಿಗೆ `ಲಕ್ಷ್ಮಣ` ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಇದೇ ಶುಕ್ರವಾರ ಕಂಠೀರವ ಸ್ಟುಡಿಯೋದಲ್ಲಿ ಮಹೂರ್ತ ನಡೆಯಲಿದೆ. ಆರ್. ಚಂದ್ರು, ನಿರ್ದೇಶನವಿರುವ ಈ ಚಿತ್ರಕ್ಕೆ ವತ್ಸಲಾ ರೇವಣ್ಣ ನಿರ್ಮಾಪಕರು.

ಈಗಾಗಲೇ ಚಾಲ್ತಿಯಲ್ಲಿರುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ಗೌಡ ಅವರ `ಅದ್ದೂರಿ` ಚಿತ್ರ ಮುಂದಿನ ತಿಂಗಳ ಆಗಸ್ಟ್‌ನಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ಇದಕ್ಕಾಗಿ ತೆರೆಮರೆಯ ಕಸರತ್ತು, ಕೆಲಸ ಕಾರ್ಯಗಳು ಭರದಿಂದ ಸಾಗಿವೆ. ಅಂದ ಹಾಗೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಈ ಚಿತ್ರ ನಿರ್ದೇಶಿಸುವ ಎಲ್ಲಾ ಸಾಧ್ಯತೆಗಳಿವೆ.

ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಪುತ್ರನ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಬೇಕಾಗಿದೆ.

Write A Comment